ಪಾಕ್ ನಿಂದ ಹಲೋ ಎಂದ ದಾವೂದ್ ಇಬ್ರಾಹಿಂ
ನವದೆಹಲಿ, ಆಗಸ್ಟ್ 10 : ಭೂಗತ ಪಾತಕಿ- ಜಾಗತಿಕ ಭಯೋತ್ಪಾದಕ ದಾವೂದ್ ಇಬ್ರಾಹಿಂ ಜತೆಗೆ ಸಿಎನ್ ಎನ್ ನ್ಯೂಸ್ 18 ನ ಮನೋಜ್ ಗುಪ್ತಾ ಮಾತನಾಡಿದ್ದಾರೆ. ಎರಡು ತಿಂಗಳ ಹಿಂದೆ ಈ ಸಂಭಾಷಣೆ ನಡೆದಿದ್ದು, ಗುಪ್ತಚರ ಇಲಾಖೆಯಿಂದ ಆತನ ಧ್ವನಿಯೇ ಎಂದು ಖಾತ್ರಿಪಡಿಸಿಕೊಂಡು, ಆ ನಂತರ ವರದಿ ಪ್ರಕಟಿಸಲಾಗಿದೆ.
ಆ ಸಂಭಾಷಣೆ ಹಿಂದಿಯಲ್ಲಿ ಮಾಡಲಾಗಿದೆ. ಕರೆ ಸ್ವೀಕರಿಸಿದ ದಾವೂದ್ ಗೆ, ದಾವೂದ್ ಮಾತನಾಡುತ್ತಿರುವುದಾ ಎಂದು ಕೇಳಿದಾಗ, ಹಾಂ ಜೀ ಆಪ್ ಕೌನ್ (ಹೌದು, ನೀವು ಯಾರು?) ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಮನೋಜ್ ಗುಪ್ತಾ ಅವರು ತಮ್ಮ ಗುರುತನ್ನು ಹೇಳಿದ ನಂತರ ತನ್ನ ಸಹಚರ ಜಾವೇದ್ ಚೋಟಾನಿಗೆ ಕರೆ ಹಸ್ತಾಂತರಿಸುತ್ತಾನೆ.
ತಕ್ಷಣ, ಅಲ್ಲ, ನಾನು ಚೋಟಾನಿ ಮಾತನಾಡುತ್ತಿದ್ದೇನೆ ಎಂದು ಸಂಭಾಷಣೆ ಮುಂದುವರಿಯುತ್ತದೆ. ಅಂದಹಾಗೆ ಈ ಚೋಟಾನಿ ಬುಕಿ, ದುಬೈನಲ್ಲಿರುವ ದಾವೂದ್ ಇಬ್ರಾಹಿಂನ ವ್ಯವಹಾರಗಳನ್ನು ನೋಡಿಕೊಳ್ಳುವ ಮಾಸ್ಟರ್ ಮೈಂಡ್. 2013ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ದಾವೂದ್ ಮತ್ತು ಆಟಗಾರರ ಮಧ್ಯೆ ಇದ್ದವನು ಇದೇ ಚೋಟಾನಿ ಎಂಬುದು ಆರೋಪ.

ಆತುರವಾಗಿ ಫೋನ್ ಹಸ್ತಾಂತರಿಸಿದ
ಯಾವಾಗ ಭಾರತದಿಂದ ಬಂದ ಕರೆ ಎಂದು ಗೊತ್ತಾಯ್ತೋ ಆತುರ ಆತುರವಾಗಿ ದಾವೂದ್ ಇಬ್ರಾಹಿಂ ಚೋಟಾನಿಗೆ ಫೋನ್ ಹಸ್ತಾಂತರಿಸಿದ್ದಾನೆ. ಆ ನಂತರ ಎಲ್ಲ ಸಂಭಾಷಣೆ ಚೋಟಾನಿಯೇ ನಡೆಸಿದ್ದಾನೆ. ಆದರೆ ದಾವೂದ್, ಹೌದು- ಹೇಳಿ ಎಂದಿದ್ದಾನೆ. ಮನೋಜ್ ಅವರು ದಾವೂದ್ ನ ಸಂದರ್ಶನಕ್ಕಾಗಿ ಕೇಳಿದ್ದಾರೆ.

ಭಯ ಕಾಣಿಸಿಕೊಳ್ಳುತ್ತಿತ್ತು
ಫೋನ್ ಸ್ವೀಕರಿಸಿದ್ದು ದಾವೂದ್ ಅಲ್ಲ ಅನ್ನೋದಾದರೆ ಯಾಕಷ್ಟು ಭಯ ಕಾಣಿಸಿಕೊಳ್ಳುತ್ತಿತ್ತು? ಜತೆಗೆ ಚೋಟಾನಿ ಮಾತನಾಡುವಾಗಲೂ ಹಿಂದಿನಿಂದ ದಾವೂದ್ ನ ಧ್ವನಿ ಕೇಳಿಬರುತ್ತಿತ್ತು. ಆತನ ಸೂಚನೆಯಂತೆಯೇ ಚೋಟಾನಿ ಮಾತನಾಡಿದ್ದಾನೆ.

ಕರಾಚಿ ನಂಬರ್ ಅಲ್ಲ ಎಂದು ಸಾಬೀತಿಗೆ ಹರ ಸಾಹಸ
ಅದು ಕರಾಚಿಯ ಫೋನ್ ನಂಬರ್ ಅಲ್ಲ ಎಂಬುದನ್ನು ಸಾಬೀತು ಪಡಿಸುವುದಕ್ಕೆ ದಾವೂದ್ ಹಾಗೂ ಚೋಟಾನಿ ಹರಸಾಹಸ ಪಟ್ಟಿದ್ದಾರೆ. ಇದು ರಂಜಾನ್ ನ ಪವಿತ್ರ ಮಾಸದ ನಮಾಜ್ ಸಮಯ ಎಂದು ಮಾತನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ.

ದಾವೂದ್ ಆರೋಗ್ಯವಾಗಿದ್ದಾನೆ
ಹತ್ತೊಂಬತ್ತು ನಿಮಿಷದ ಸಂಭಾಷಣೆಯಲ್ಲಿ ಗೊತ್ತಾಗುವುದು ಏನೆಂದರೆ, ಈ ಹಿಂದೆ ವರದಿಯಾದಂತೆ ದಾವೂದ್ ಗೆ ಗ್ಯಾಂಗ್ರಿನ್ ಆಗಿಲ್ಲ, ಯಾವುದೇ ಹೃದಯ ಸಂಬಂಧಿ ಸಮಸ್ಯೆಯೂ ಇಲ್ಲ. ಸ್ವಲ್ಪ ಮಟ್ಟಿಗೆ ರಕ್ತದೊತ್ತಡ ಹೆಚ್ಚಾಗಿದೆಯಾ ಎಂಬ ಪ್ರಶ್ನೆಯನ್ನು ಚೋಟಾನಿ ನಿರಾಕರಿಸುತ್ತಾನೆ. ದಾವೂದ್ ಆರೋಗ್ಯವಾಗಿದ್ದಾನೆ. ತನ್ನ ಸಾಮ್ರಾಜ್ಯದ ಮುಖ್ಯ ವ್ಯಕ್ತಿ ಜತೆಗೆ ಸಂಪರ್ಕದಲ್ಲೂ ಇದ್ದಾನೆ ಎಂದು ಗೊತ್ತಾಗುತ್ತದೆ.












Click it and Unblock the Notifications