ದಾವೂದ್ ಇಬ್ರಾಹಿಂ ಫಿಟ್ ಆಗಿದ್ದಾನೆ: ಛೋಟಾ ಶಕೀಲ್
ನವದೆಹಲಿ, ಏಪ್ರಿಲ್ 26: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಗ್ಯಾಂಗ್ರಿನ್ ಆಗಿದೆ, ಕಾಲು ಕತ್ತರಿಸಬೇಕಿದೆ ಎಂದು ಬಂದಿರುವ ಸುದ್ದಿಯನ್ನು ಆತನ ಬಲಗೈ ಬಂಟ ಛೋಟಾ ಶಕೀಲ್ ಅಲ್ಲಗೆಳೆದಿದ್ದಾನೆ. ದಾವೂದ್ ಆರೋಗ್ಯದಿಂದಿದ್ದಾರೆ, ಯಾವುದೇ ಸಮಸ್ಯೆಯಿಲ್ಲ, ಫಿಟ್ ಆಗಿದ್ದಾರೆ ಎಂದು ಛೋಟಾ ಶಕೀಲ್ ಸ್ಪಷ್ಟನೆ ನೀಡಿದ್ದಾನೆ.
ದಾವೂದ್ ಇಬ್ರಾಹಿಂನ ಕಾಲಿನಲ್ಲಿ ಗ್ಯಾಂಗ್ರಿನ್ ಆಗಿದ್ದು, ಗುಣಪಡಿಸಲು ಸಾಧ್ಯವಾಗುವುದಿಲ್ಲ, ಈಗ ಆತನಿಗೆ ನಡೆದಾಡಲೂ ಸಹ ಆಗುತ್ತಿಲ್ಲ. ಆತನ ಕಾಲನ್ನು ಕತ್ತರಿಸಲು ವೈದ್ಯರು ಸೂಚಿಸಿದ್ದಾರೆ ಎಂದು ವರದಿ ಬಂದಿತ್ತು.
ಅಧಿಕ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿರುವ ದಾವೂದ್ ಗೆ ಗ್ಯಾಂಗ್ರಿನ್ ಆದರೆ ಅಚ್ಚರಿಪಡಬೇಕಾಗಿಲ್ಲ ಎಂಬ ಕಾರಣವೂ ಇತ್ತು. ಆದರೆ, ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿ 'ಡಿ' ಕಂಪನಿಯನ್ನು ದುರ್ಬಲಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಶಕೀಲ್ ಹೇಳಿದ್ದಾನೆ.
ಛೋಟಾ ಶಕೀಲ್ ನೀಡಿರುವ ಸ್ಪಷ್ಟನೆಗೆ ಹಿರಿಯ ಗುಪ್ತಚರ ಅಧಿಕಾರಿಗಳೂ ಸಹಮತ ವ್ಯಕ್ತಪಡಿಸಿದ್ದಾರೆ. 1993ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ಅವರು 1986ರಲ್ಲಿ ಭಾರತ ತೊರೆದು ಕರಾಚಿಗೆ ಹೋಗಿ ನೆಲೆಸಿದ್ದಾನೆ. ಆದರೆ, ದಾವೂದ್ ಕರಾಚಿಯಲ್ಲಿ ಇಲ್ಲ ಎಂದು ಪಾಕಿಸ್ತಾನ ಹೇಳಿದೆ.