ಬಿಜೆಪಿಯವರು ನಮನ ಸಲ್ಲಿಸಿದ್ದಕ್ಕೆ ಅಂಬೇಡ್ಕರ್ ಪ್ರತಿಮೆಗೆ ಶುದ್ಧೀಕರಣ!
ವಡೋದರ, ಏಪ್ರಿಲ್ 14: ಕೇಂದ್ರ ಸಚಿವೆ ಮನೇಕಾ ಗಾಂಧಿ ಮತ್ತು ಬಿಜೆಪಿ ಮುಖಂಡರು ನಮನ ಸಲ್ಲಿಸಿದ ಅಂಬೇಡ್ಕರ್ ವಿಗ್ರಹವನ್ನು ದಲಿತ ಸಮುದಾಯದ ಕೆಲವರು ಹಾಲು ಹಾಕಿ 'ಶುದ್ಧೀಕರಿಸಿದ' ಘಟನೆ ಗುಜರಾತಿನ ವಡೋದರಾದಲ್ಲಿ ನಡೆದಿದೆ.
ಬಹುಭಾಷಾ ನಟ ಪ್ರಕಾಶ್ ರೈ ಭಾಗವಹಿಸಿದ್ದ ಕಾರ್ಯಕ್ರಮವೊಂದರ ನಂತರ ವೇದಿಕೆಯನ್ನು ಗೋಮೂತ್ರ ಹಾಕಿ ಬಿಜೆಪಿ ನಾಯಕರು ಸ್ವಚ್ಛಗೊಳಿಸಿದ್ದು ನೆನಪಿರಬಹುದು. ಇದೀಗ ಅಂಥದೇ ಅವಮಾನವನ್ನು ಬಿಜೆಪಿ ನಾಯಕರಿಗೆ ವಡೋದರದ ದಲಿತ ಸಮುದಾಯದ ಕೆಲವರು ಮಾಡಿದ್ದಾರೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ ಅವರೊಂದಿಗೆ ಆಗಮಿಸಿದ್ದ ಕೆಲವು ಬಿಜೆಪಿ ಮುಖಂಡರು ವಡೋದರದಲ್ಲಿ ಅಂಬೇಡ್ಕರ್ ಪ್ರತಿಮೆಯೊಂದಕ್ಕೆ ಅಂಬೇಡ್ಕರ್ ಜಯಂತಿ ನಿಮಿತ್ತ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದ್ದಾರೆ.

ಅಂಬೇಡ್ಕರ್ ಪ್ರತಿಮೆಗೆ ನಮನ ಸಲ್ಲಿಸಲು ಆಗಮಿಸುತ್ತಿದ್ದಂತೆಯೇ ಬಿಜೆಪಿ ನಾಯಕರ ವಿರುದ್ಧ ದಲಿತ ಸಮುದಾಯದ ಹಲವರು ಧಿಕ್ಕಾರ ಕೂಗಿದ್ದಲ್ಲದೆ, ಕಾರ್ಯಕ್ರಮದ ನಂತರ ಅವರು ವಾಪಸ್ಸಾಗುತ್ತಿದ್ದಂತೆಯೇ, ಅಂಬೇಡ್ಕರ್ ಪ್ರತಿಮೆಯನ್ನು ಹಾಲಿನಿಂದ ತೊಳೆದು ಶುದ್ಧೀಕರಿಸಿದ್ದಾರೆ! ಬಿಜೆಪಿ ನಾಯಕರು ನಮನ ಸಲ್ಲಿಸಿದ್ದಕ್ಕಾಗಿ ಆ ಪ್ರತಿಮೆ ಅಪವಿತ್ರವಾಗಿದೆ, ಆದ್ದರಿಂದ ಹಾಲು ಹಾಕಿ ಶುದ್ಧೀಕರಿಸಿದ್ದೇವೆ ಎಂದು ದಲಿತ ಮುಖಂಡರೊಬ್ಬರು ಹೇಳಿದ್ದಾರೆ!
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
"ಬಿಜೆಪಿ ನಾಯಕರು ಕಾರ್ಯಕ್ರಮಕ್ಕೆ ಆಗಮಿಸುವ ಮೊದಲೇ ನಾವು ಪ್ರತಿಮೆಗೆ ನಮನ ಸಲ್ಲಿಸಲು ಬಂದಿದ್ದೆವು. ಆದರೆ ಪೊಲೀಸರು ನಮ್ಮನ್ನು ಕಡೆಗಣಿಸಿ ಬಿಜೆಪಿ ನಾಯಕರಿಗೆ ಆದ್ಯತೆ ನೀಡಿದ್ದು ಸರಿಯೇ?" ಎಂದೂ ಅವರು ಪ್ರಶ್ನಿಸಿದ್ದಾರೆ.












Click it and Unblock the Notifications