ಯಾಸ್ ಚಂಡಮಾರುತ: ಬಂಗಾಳ, ಒಡಿಶಾದಲ್ಲಿ 3 ಲಕ್ಷಕ್ಕೂ ಅಧಿಕ ಮನೆಗಳಿಗೆ ಹಾನಿ 4 ಸಾವು
ಕೊಲ್ಕತ್ತಾ/ಭುವನೇಶ್ವರ, ಮೇ 27: ಯಾಸ್ ಚಂಡಮಾರುತ ದೇಶದ ಪೂರ್ವ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಆರ್ಭಟಿಸಿದೆ. 145 ಕಿ.ಮೀ ಗೂ ಅಧಿಕ ವೇಗದಿಂದ ಬಂದ ಈ ಚಂಡಮಾರುತದ ಹೊಡೆತಕ್ಕೆ ಸಾಕಷ್ಟು ಅನಾಹುತಗಳು ಸಂಭವಿಸಿದೆ. ಈ ಚಂಡಮಾರುತದ ಅಬ್ಬರಕ್ಕೆ ಕನಿಷ್ಟ 4 ಜನರು ಮೃತಪಟ್ಟಿದ್ದಾರೆ ಎಂದು ಮಾಹಿತಿ ದೊರೆತಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಜಾರ್ಖಂಡ್ ರಾಜ್ಯಗಳ ಸುಮಾರು 21 ಲಕ್ಷ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಸಾವು ನೋವಿನ ಪ್ರಮಾಣ ಕಡಿಮೆಯಾಗಿದೆ. ಆದರೆ ಈ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿದೆ. ಭಾರತದ ಪಶ್ಚಿಮ ಕರಾವಳಿ ಭಾಗಕ್ಕೆ ತೌಕ್ತೆ ಚಂಡಮಾರುತ ಅಪ್ಪಳಿಸಿದ ಒಂದು ವಾರಗಳ ಅಂತರದಲ್ಲಿ ಯಾಸ್ ಚಂಡಮಾರುತ ಕೂಡ ಆಘಾತವನ್ನು ನೀಡಿದೆ. ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯುಂಟಾಗಿದ್ದು ಸಾವು ನೋವು ಸಂಭವಿಸಿದೆ.
ಮಧ್ಯಾಹ್ನದ ನಂತರ ಚಂಡಮಾರುತದ ಅಬ್ಬರ ಕಡಿಮೆಯಾಗುವ ನಿರೀಕ್ಷೆಯಿದೆ. ಈ ಚಂಡಮಾರುತದಿಂದಾಗಿ ಈವರೆಗೂ ಸುಮಾರು ಒಂದು ಕೋಟಿ ಜನರ ಮೇಲೆ ಪರಿಣಾಮವುಂಟಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ತಿಳಿಸಿದೆ. ಮತ್ತೊಂದೆಡೆ ಬಾಲಸೋರ್ ಮತ್ತು ಭದ್ರಾಕ್ ಜಿಲ್ಲೆಯ 128 ಹಳ್ಳಿಗಳ ಸಂಪರ್ಕ ರಸ್ತೆಗಳು ಸಮುದ್ರದ ನೀರು ನುಗ್ಗಿದ ಕಾರಣದಿಂದಾಗಿ ಕಡಿತವಾಗಿದ್ದು ಮುಂದಿನ ಏಳು ದಿನಗಳಲ್ಲಿ ಪರಿಹಾರ ಕಾರ್ಯಾಚರಣೆ ನಡೆಸುವುದಾಗಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ. ಜೊತೆಗೆ 24 ಗಂಟೆಗಳಲ್ಲಿ ರಸ್ತೆ ಸಂಪರ್ಕ ಮರುಸ್ಥಾಪಿಸುವಂತೆಯೂ ಸೂಚಿಸಿದ್ದಾರೆ.

ಬಾಲಸೋರ್ ಜಿಲ್ಲೆಯ ಬಹನಾಗ ಮತ್ತು ರೆಮುನಾ ಭಾಗದ ಹಲವಾರು ಗ್ರಾಮಗಳು ಮತ್ತು ಭದ್ರಾಕ್ ಜಿಲ್ಲೆಯ ಧಮ್ರಾ ಮತ್ತು ಬಸುದೇವ್ಪುರ ಸಮುದ್ರ ನೀರಿನಿಂದ ಆವೃತವಾಗಿದೆ ಎಂದು ಒಡಿಶಾದ ವಿಶೇಷ ಪರಿಹಾರ ಆಯುಕ್ತ ಪಿ.ಕೆ.ಜೆನಾ ತಿಳಿಸಿದ್ದಾರೆ. ಸರ್ಕಾರ ಸ್ಥಳೀಯರ ನೆರವಿನೊಂದಿಗೆ ಗ್ರಾಮಗಳಿಂದ ಉಪ್ಪು ನೀರನ್ನು ಹೊರಹಾಕಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ವಿವರಿಸಿದರು.












Click it and Unblock the Notifications