Heavy Rain: ಫೆಂಗಲ್ ಚಂಡಮಾರುತ; ಚೆನ್ನೈ ವಿಮಾನ ನಿಲ್ದಾಣ ಬಂದ್, ಕರ್ನಾಟಕದ ಮೇಲೂ ಪರಿಣಾಮ
ಫೆಂಗಲ್ ಚಂಡಮಾರುತ ಶನಿವಾರ ಸಂಜೆ ತಮಿಳುನಾಡಿನ ಮತ್ತು ಪುದುಚೆರಿ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಲಿದ್ದು ಮುಂಜಾಗ್ರತಾ ಕ್ರಮವಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಟುವಟಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಹಲವು ಇಂಡಿಗೋ ಹಲವಾರು ವಿಮಾನಗಳ ಸೇವೆಯನ್ನು ರದ್ದು ಮಾಡಲಾಗಿದೆ. ಚೆನ್ನೈಗೆ ಬರುವ ಮತ್ತು ಚೆನ್ನೈನಿಂದ ಹೊರಡುವ ಹಲವಾರು ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಶನಿವಾರ ಸಂಜೆ 7 ಗಂಟೆಯವರೆಗೆ ಚೆನ್ನೈ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಭಾರಿ ಮಳೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಚೆನ್ನೈನಿಂದ ಹೊರಡುವ ಮತ್ತು ಚೆನ್ನೈಗೆ ಬರುವ ವಿಮಾನ ಸೇವೆ ಮೇಲೆ ಪರಿಣಾಮ ಬೀರಿದೆ ಎಂದು ಏರ್ ಇಂಡಿಯ್ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದೆ.

ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ಚೆನ್ನೈ, ಟುಟಿಕೋರಿನ್, ಮಧುರೈ, ತಿರುಪತಿ ಮತ್ತು ವಿಶಾಖಪಟ್ಟಣಂ ಸೇರಿದಂತೆ ಅನೇಕ ನಗರಗಳ ವಿಮಾನ ಸೇವೆ ಮೇಲೆ ಪರಿಣಾಮ ಬೀರಿದೆ ಎಂದು ಇಂಡಿಗೋ ಮಾಹಿತಿ ನೀಡಿದೆ. ಹವಾಮಾನ ಸುಧಾರಣೆಯಾದ ಬಳಿಕ ಮತ್ತೆ ವೈಮಾನಿಕ ಸೇವೆಗಳು ಆರಂಭವಾಗುತ್ತವೆ ಎಂದು ಹೇಳಿದೆ. ಭಾರಿ ಮಳೆಯಿಂದಾಗಿ ಚೆನ್ನೈನಲ್ಲಿ ರೈಲು ಸೇವೆಗಳಲ್ಲಿ ಕೂಡ ವ್ಯತ್ಯಯವಾಗಿದೆ.
ತಮಿಳುನಾಡಿನ ಹಲವು ಕಡೆ ಭಾರಿ ಮಳೆ
ಭಾರತೀಯ ಹವಾಮಾನ ಇಲಾಖೆ ಶ್ರೀಹರಿಕೋಟಾದಲ್ಲಿರುವ ಡಾಪ್ಲರ್ ಹವಾಮಾನ ರಾಡಾರ್ ಬಳಸಿಕೊಂಡು, ಉಪಗ್ರಹಗಳ ಮಾಹಿತಿಯನ್ನು ಆಧರಿಸಿ ಫೆಂಗಲ್ ಚಂಡಮಾರುತದ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುತ್ತಿದೆ.
ಶನಿವಾರ ಚಂಡಮಾರುತ ಅಪ್ಪಳಿಸಲಿದ್ದು ಮುಂಜಾಗ್ರತಾ ಕ್ರಮಗಳ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಮಡಿದ್ದಾರೆ. ಅಧಿಕಾರಿಗಳ ಜೊತೆ ಸಭೆ ಬಳಿಕ ಮಾತನಾಡಿದ ಅವರು, ಇನ್ನೂ ಎರಡು ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ತಮಿಳುನಾಡು ಸರ್ಕಾರ ನಿರಂತರವಾಗಿ ಪರಿಸ್ಥಿತಿ ಮೇಲೆ ನಿಗಾವಹಿಸಿದೆ. ಶನಿವಾರ ರಾತ್ರಿ ಚಂಡಮಾರುತ ಕರಾವಳಿ ಪ್ರದೇಶವನ್ನು ದಾಟಲಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.
ಚಂಡಮಾರುತದ ಕಾರಣದಿಂದ ತಮಿಳುನಾಡಿನ ಉತ್ತರ ಕರಾವಳಿ ಜಿಲ್ಲೆಗಳಲ್ಲಿ ಶನಿವಾರ ಭಾರಿ ಮಳೆಯಾಗಲಿದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ (RMC) ಮುನ್ಸೂಚನೆ ನೀಡಿದೆ. ಚೆನ್ನೈ, ತಿರುವಳ್ಳೂರು, ಚೆಂಗಲ್ಪಟ್ಟು, ಕಾಂಚೀಪುರಂ, ವಿಲ್ಲುಪ್ಪುರಂ, ಕಲ್ಲಕುರಿಚಿ, ಕಡಲೂರು ಜಿಲ್ಲೆಗಳು ಮತ್ತು ಪುದುಚೆರಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ.
ಈ ಹಿಂದೆ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಪಶ್ಚಿಮ-ವಾಯವ್ಯಕ್ಕೆ ಚಲಿಸಿದ್ದ ಫೆಂಗಲ್ ಚಂಡಮಾರುತ ಶನಿವಾರ ಉತ್ತರ ತಮಿಳುನಾಡು ಮತ್ತು ಪುದುಚೇರಿ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ.
ಕರ್ನಾಟಕದ ಮೇಲೂ ಪರಿಣಾಮ
ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ ಕರ್ನಾಟಕದ ಮೇಲೂ ಪರಿಣಾಮ ಬೀರಿದೆ. ಶನಿವಾರ ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ತುಂತುರು ಮಳೆಯಾಗಿದೆ. ಭಾನುವಾರ ದಕ್ಷಿಣ ಒಳನಾಡಿನ 10 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications