ತೆಂಡೂಲ್ಕರ್, ಸಿಎನ್ಆರ್ ರಾವ್ ಗೆ ಭಾರತ ರತ್ನ ಘೋಷಣೆ
ನವದೆಹಲಿ, ನ.16: ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ಇಂದು 200ನೇ ಟೆಸ್ಟ್ ಪಂದ್ಯವಾಡಿ ಭಾವಪೂರ್ಣ ವಿದಾಯ ಹೇಳಿದ ಭಾರತ ಕ್ರಿಕೆಟ್ ರಂಗದ ಧ್ರುವತಾರೆ ಸಚಿನ್ ರಮೇಶ್ ತೆಂಡೂಲ್ಕರ್ ಅವರಿಗೆ ಭಾರತ ಸರಕಾರ ಕೃತಜ್ಞತಾಪೂರ್ವಕವಾಗಿ ಭಾರತ ರತ್ನ ಘೋಷಿಸಿದೆ.
ಜತೆಗೆ, ಶಿಡ್ಲಘಟ್ಟ ಮೂಲದ 79 ವರ್ಷದ ಪ್ರೊ. ಸಿಎನ್ಆರ್ ರಾವ್ (ಚಿಂತಾಮಣಿ ನಾಗೇಶ್ ರಾಮಚಂದ್ರ ರಾವ್) ಅವರಿಗೂ ಸಹ 'ಭಾರತ ರತ್ನ' ಘೋಷಿಸಲಾಗಿದೆ. 42 ಮತ್ತು 43ನೆ ಭಾರತ ರತ್ನ ಪ್ರಶಸ್ತಿ ಇದಾಗಿದೆ. [ಸಿಎನ್ಆರ್ ರಾವ್ ವ್ಯಕ್ತಿಚಿತ್ರ]

ಕ್ರಿಕೆಟ್ಟಿಗೆ ತನುಮನ ಧಾರೆಯೆರೆದಿದ್ದ 40 ವರ್ಷದ ಸಚಿನ್ ತೆಂಡೂಲ್ಕರ್ ಅವರನ್ನು 'ಭಾರತ ರತ್ನ' ಎಂದು ಪರಿಗಣಿಸಬೇಕೋ ಬೇಡವೋ ಎಂಬುದು ಕಳೆದ ಒಂದೆರಡು ವರ್ಷಗಳಿಂದ ತೀವ್ರ ಚರ್ಚಗೆ ಗ್ರಾಸವಾಗಿತ್ತು. ಆದರೆ ಇದೀಗ ಪ್ರಧಾನಿ ಕಚೇರಿಯು ಅಧಿಕೃತ ಪ್ರಕಟಣೆ ನೀಡಿದ್ದು, ತೆಂಡೂಲ್ಕರ್ ಅವರಿಗೆ 'ಭಾರತ ರತ್ನ' ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ.
ದೇಶದ ಆತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಮೊದಲ ಬಾರಿಗೆ ಕ್ರೀಡಾಪಟುವಿಗೆ ನೀಡಿ ಗೌರವಿಸಲಾಗಿದೆ ಮತ್ತು ಈ ಪ್ರಶಸ್ತಿಯನ್ನು ಗಳಿಸಿದ ಅತ್ಯಂತ ಕಿರಿಯ ವ್ಯಕ್ತಿ ತೆಂಡೂಲ್ಕರ್. ತೆಂಡೂಲ್ಕರ್ ತಮಗೆ ದೊರೆತ ಭಾರತ ರತ್ನ ಪ್ರಶಸ್ತಿಯನ್ನು ತಮ್ಮ ತಾಯಿ ರಜನಿಗೆ ಅರ್ಪಿಸಿದ್ದಾರೆ.
ಕರ್ನಾಟಕದ ವಿಜ್ಞಾನಿ ಪ್ರೊ. ಸಿಎನ್ಆರ್ ರಾರ್ ಅವರು ಕರ್ನಾಟಕದಿಂದ ಭಾರತ ರತ್ನ ಗಳಿಸಿದ ನಾಲ್ಕನೆಯವರಾಗಿದ್ದಾರೆ. ಇದುವರೆಗೂ ಸರ್ ಸಿವಿ ರಾಮನ್, ಸರ್ ಎಂ ವಿಶ್ವೇಶ್ವರಯ್ಯ, ಭೀಮಸೇನ ಜೋಶಿ ಅವರುಗಳು ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇದರೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಇದುವರೆಗೆ 2ನೆಯ ಭಾರತ ರತ್ನ ಸಂದಿದೆ.












Click it and Unblock the Notifications