ಕೊರೊನಾ ಮಹಾಮಾರಿ: ದೇಶದಲ್ಲಿ 12 ಸಾವಿರ ತಲುಪಿದ ಸೋಂಕಿತರ ಸಂಖ್ಯೆ
ನವದೆಹಲಿ, ಏಪ್ರಿಲ್ 16: ದೇಶಾದ್ಯಂತ ಮಹಾಮಾರಿ ಕೊವಿಡ್ 19 ಹರಡಿದ್ದು, ಸೋಂಕಿತರ ಸಂಖ್ಯೆ 12 ಸಾವಿರ ತಲುಪಿದೆ.
ಇದುವರೆಗೆ ಕೊರೊನಾ ವೈರಸ್ಗೆ 414 ಮಂದಿ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 37 ಮಂದಿಯನ್ನು ವೈರಸ್ ಬಲಿ ಪಡೆದಿದೆ. ದೇಶಾದ್ಯಂತ ಒಟ್ಟು 12,380 ಮಂದಿ ಕೊರೊನಾ ವೈರಸ್ಗೆ ತುತ್ತಾಗಿದ್ದಾರೆ.
ಚಿಕಿತ್ಸೆ ನೀಡಿದ ವೈದ್ಯರಿಗೇ ಅಂಟಿಕೊಂಡ ಕೊರೊನಾ ವೈರಸ್
ನವದೆಹಲಿ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿನ ಅರಿವಳಿಕೆ ತಜ್ಞರಿಗೆ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಎಂದು ತಿಳಿದು ಬಂದಿದ್ದು, ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು, ದೇಶಾದ್ಯಂತ ಹರಡಿರುವ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್ ಗಳು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗೆ ಕೊವಿಡ್19 ಅಂಟಿಕೊಂಡಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.
ಭಾರತದಲ್ಲಿ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ನವದೆಹಲಿ ಎರಡನೇ ಸ್ಥಾನದಲ್ಲಿದ್ದು, ಬುಧವಾರದ ಅಂಕಿ ಅಂಶಗಳ ಪ್ರಕಾರ ನವದೆಹಲಿಯಲ್ಲಿ 30 ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ. ಇನ್ನು, 1,561 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪೈಕಿ 31 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.