ಪ್ರವಾದಿ ಕುರಿತ ವಿವಾದ: ದೆಹಲಿ ಕೋಲ್ಕತ್ತಾ, ಉತ್ತರಪ್ರದೇಶದಲ್ಲಿ ಹೆಚ್ಚಾದ ಪ್ರತಿಭಟನೆ
ನವದೆಹಲಿ, ಜೂ. 10: ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತ ಅವಹೇಳನಕಾರಿಯಿಂದ ಅಮಾನತ್ತಾಗಿರುವ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಒತ್ತಾಯಿಸಿ ದೆಹಲಿ, ಕೋಲ್ಕತ್ತಾ ಹಾಗೂ ಉತ್ತರಪ್ರದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದೆ.
ಜಗತ್ತಿನ ಮುಸ್ಲಿಂ ರಾಷ್ಟ್ರಗಳ ಆಕ್ರೋಶಕ್ಕೆ ಕಾರಣವಾಗಿದ್ದ ಈ ವಿವಾದ ಈಗ ಬೃಹತ್ ಪ್ರತಿಭಟನೆಯ ರೂಪದಲ್ಲಿ ಭುಗಿಲೆದ್ದಿದೆ. ದೆಹಲಿಯಲ್ಲಿ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಶುಕ್ರವಾರದ ಪ್ರಾರ್ಥನೆ ನಂತರ ದೆಹಲಿಯ ಜಾಮಾ ಮಸೀದಿ ಹೊರೆಗೆ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ. ನೂಪುರ್ ಶರ್ಮಾ ಮತ್ತು ಉಚ್ಛಾಟಿತ ನಾಯಕ ನವೀನ್ ಜಿಂದಾಲ್ ಅವರ ಪ್ರಚೋದಕ ಹೇಳಿಕೆಗಳ ವಿರುದ್ಧ ಪ್ರತಿಭಟಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು.

ಬಂದಿರುವವರು ಯಾರೆಂದು ನಮಗೆ ಗೊತ್ತಿಲ್ಲ
ಘಟನೆ ಬಗ್ಗೆ ಮಾತನಾಡಿರುವ ಜಾಮಾ ಮಸೀದಿಯ ಶಾಹಿ ಇಮಾಮ್, ಮಸ್ಜಿದ್ ಪ್ರತಿಭಟನೆಗೆ ಕರೆ ನೀಡಿಲ್ಲ. ಬಂದಿರುವವರು ಯಾರೆಂದು ನಮಗೆ ಗೊತ್ತಿಲ್ಲ, ಪ್ರತಿಭಟಿಸುವವರು ಯಾರು ಎಂದು ನಮಗೆ ತಿಳಿದಿಲ್ಲ. ಅವರು ಬಹುಶಃ ಎಐಎಂಐಎಂಗೆ ಸೇರಿದವರು ಅಥವಾ ಒವೈಸಿಯವರ ಜನರು ಎಂದು ನಾನು ಭಾವಿಸುತ್ತೇನೆ. ಅವರು ಪ್ರತಿಭಟನೆ ಮಾಡಲು ಇಚ್ಚಿಸಿದರೆ ಮಾಡಬಹುದು. ಆದರೆ ನಾವು ಮಾತ್ರ ಅವರನ್ನು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದರು.

ನೂಪುರ್ ಶರ್ಮಾ ವಿರುದ್ಧ ಪೋಸ್ಟರ್
ಪ್ರಚೋದನಕಾರಿ ಹೇಳಿಕೆ ನೀಡಿದ ನೂಪುರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ರನ್ನು ಬಿಜೆಪಿ ಅಮಾನತುಗೊಳಿಸಿದ್ದರೂ, ಶರ್ಮಾ ಕೂಡ ಕ್ಷಮೆಯಾಚಿಸಿದರೂ, ಪ್ರತಿಭಟನಾಕಾರರು ಅವರನ್ನು ಬಂಧಿಸುವಂತೆ ಒತ್ತಾಯಿಸಿದರು. ಕೋಲ್ಕತ್ತಾದಲ್ಲಿ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಒತ್ತಾಯಿಸಿ 300 ಕ್ಕೂ ಹೆಚ್ಚು ಜನರು ಪೋಸ್ಟರ್ಗಳೊಂದಿಗೆ ನಮಾಜ್ಗೆ ಬಂದಿದ್ದರು ಎನ್ನಲಾಗಿದೆ.

ಮಸೀದಿಯಿಂದ 300 ಜನರು ಹೊರಕ್ಕೆ
ಸುಮಾರು 1,500 ಜನರು ಶುಕ್ರವಾರದ ಪ್ರಾರ್ಥನೆಗಾಗಿ ಜಾಮಾ ಮಸೀದಿ ಬಳಿ ಜಮಾಯಿಸಿದ್ದರು. ಪ್ರಾರ್ಥನೆಯ ನಂತರ ಸುಮಾರು 300 ಜನರು ಹೊರಬಂದರು ಮತ್ತು ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರ ಪ್ರಚೋದಕ ಹೇಳಿಕೆಗಳ ವಿರುದ್ಧ ಪ್ರತಿಭಟಿಸಲು ಪ್ರಾರಂಭಿಸಿದರು ಎಂದು ಸೆಂಟ್ರಲ್ ಡಿಸ್ಟ್ರಿಕ್ಟ್ನ ಡಿಸಿಪಿ ಶ್ವೇತಾ ಚೌಹಾಣ್ ತಿಳಿಸಿದ್ದಾರೆ.
ಯುಪಿಯ ಪ್ರಯಾಗ್ನಲ್ಲಿಯೂ ಪ್ರತಿಭಟನೆಗಳು ನಡೆದವು ಈ ವೇಳೆ ಕಲ್ಲು ತೂರಾಟ ಕೂಡ ನಡೆಯಿತು. ಮೊರಾದಾಬಾದ್ನಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಮೊರಾದಾಬಾದ್ನಲ್ಲಿ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದರಿಂದ ಪ್ರತಿಭಟನಾಕಾರರು ದಿಕ್ಕಾಪಾಲಾಗಿ ಓಡಿಹೋದರು. ಜಾರ್ಖಂಡ್ನ ರಾಜಧಾನಿ ರಾಂಚಿಯಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕೆಲ ಪೊಲೀಸರು ಗಾಯಗೊಂಡಿದ್ದಾರೆ. ಈ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು.

ದೆಹಲಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ
ನೂಪುರ್ ಶರ್ಮಾ ವಕೀಲರಾಗುವ ಮೊದಲು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. 2015 ರ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ AAP ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಈ ವೇಳೆ ಪ್ರಮುಖ ಬಿಜೆಪಿ ವಕ್ತಾರರಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಚರ್ಚೆಯಲ್ಲಿರುವ ಜ್ಞಾನವಾಪಿ ಮಸೀದಿಯ ವಿವಾದದ ಕುರಿತು ಇತ್ತೀಚೆಗೆ ಟಿವಿ ಚರ್ಚೆಯ ಸಂದರ್ಭದಲ್ಲಿ ಮುಸ್ಲಿಮರು ಶಿವಲಿಂಗವನ್ನು ಗೇಲಿ ಮಾಡುವ ಮೂಲಕ ಮತ್ತು ಅದನ್ನು ಕಾರಂಜಿ ಎಂದು ಕರೆಯುವ ಮೂಲಕ ಹಿಂದೂ ನಂಬಿಕೆಯನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯೆಯಾಗಿ ಶರ್ಮಾ ಅವರು ತಮ್ಮ ಹೇಳಿಕೆಗಳನ್ನು ನೀಡಿದ್ದರು. ಇದು ಭಾರೀ ವಿವಾದವನ್ನು ಉಂಟು ಹಾಕಿತ್ತು.
ಹೈದರಾಬಾದ್, ಪುಣೆ ಮತ್ತು ಮುಂಬೈನಲ್ಲಿ ಪೊಲೀಸರು ಆಕೆಯ ವಿರುದ್ಧ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಕಾನ್ಪುರ್ದಲ್ಲಿ ಘರ್ಷಣೆ ಹಾಗೂ ಆಕೆಯ ಬಂಧನಕ್ಕಾಗಿ ಪ್ರತಿಭಟನೆಗಳು ಮತ್ತು ಆಕೆಯ ವಿರುದ್ಧ ಬೆದರಿಕೆಗಳು ಕೂಡ ಬಂದಿದ್ದವು. ಬಳಿಕ ನುಪೂರ್ ಶರ್ಮಾ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು. ಜಿಂದಾಲ್ ಕೂಡ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರು.












Click it and Unblock the Notifications