ವಂಚಕ ಸುಕೇಶ್ ಚಂದ್ರಶೇಖರ್ ಈಗ ಬಿಜೆಪಿಯ ಬ್ರ್ಯಾಂಡ್ ಅಂಬಾಸಿಡರ್: ಎಎಪಿ ವಾಗ್ದಾಳಿ
ನವದೆಹಲಿ, ನವೆಂಬರ್ 5: ದೆಹಲಿಯ ಜೈಲಿನಲ್ಲಿರುವ ಅಕ್ರಮ ಹಣ ವರ್ಗಾವಣೆಯ ಆರೋಪಿ ಸುಕೇಶ್ ಚಂದ್ರಶೇಖರ್ ಎಎಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನನ್ನಿಂದ ₹50 ಕೋಟಿ ಹಣ ಪಡೆದಿದ್ದಾರೆ ಎಂದು ಸುಕೇಶ್ ಹೇಳಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿಯನ್ನು ಎಎಪಿ ತರಾಟೆಗೆ ತೆಗೆದುಕೊಂಡಿದೆ.
ಅಕ್ರಮ ಹಣ ವರ್ಗಾವಣೆಯ ಆರೋಪಿ ಸುಕೇಶ್ ಚಂದ್ರಶೇಖರ್ ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ, ಆಮ್ ಆದ್ಮಿ ಪಕ್ಷದ ನಾಯಕರು ತನ್ನಿಂದ 50 ಕೋಟಿ ರೂಪಾಯಿ ಪಡೆದು ರಾಜ್ಯಸಭಾ ಸ್ಥಾನವನ್ನು ನೀಡುವುದಾಗಿ ಹೇಳಿಕೊಂಡಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, 2016ರಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪಕ್ಷಕ್ಕೆ 500 ಕೋಟಿ ರೂಪಾಯಿಗಳನ್ನು ನೀಡಲು 20ರಿಂದ 30 ಜನರನ್ನು ಕರೆತರುವಂತೆ ಕೇಳಿದ್ದರು ಎಂದು ಆರೋಪಿಸಿದ್ದಾರೆ.
ಇನ್ನು ಸುಕೇಶ್ನ ಸರಣಿ ಆರೋಪಗಳಿಗೆ ಪ್ರತಿಕ್ರಿಯಿಸಿದ ಆಪ್ ವಕ್ತಾರ ಸೌರಭ್, ಬಿಜೆಪಿ ಮತ್ತು ಚಂದ್ರಶೇಖರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗುಜರಾತ್ ಮತ್ತು ದೆಹಲಿ ಮುನಿಸಿಪಲ್ ಚುನಾವಣೆಯ ಫಲಿತಾಂಶದ ಬಗ್ಗೆ ಬಿಜೆಪಿ ತುಂಬಾ ಚಿಂತಿತವಾಗಿದೆ. ದರ ಹತಾಶೆ ಎಷ್ಟು ಸ್ಪಷ್ಟವಾಗಿದೆ ಎಂದರೆ ಸುಕೇಶ್ ಚಂದ್ರಶೇಖರ್ ಅವರಂತಹ ಮೋಸಗಾರ, ಆರೋಪಿ ಈಗ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಸುಕೇಶ್ ಯಾರು ಎಂದು ಅನೇಕರಿಗೆ ತಿಳಿದಿರಲಿಲ್ಲ, ರಾನ್ಬಾಕ್ಸಿಯ ಶಿವೇಂದರ್ ಸಿಂಗ್ ಮತ್ತು ಅವರ ಸಹೋದರ ಜೈಲಿನಲ್ಲಿದ್ದಾಗ ಶಿವೇಂದರ್ ಸಿಂಗ್ ಅವರ ಪತ್ನಿಯಿಂದ ಸುಕೇಶ್ 215 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದರು. ಈ ಬೇಡಿಕೆಯಿಟ್ಟ ಹಣವು ಮೊದಲು ಕಾನೂನು ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ನಂತರ ಗೃಹ ಸಚಿವ ಅಮಿತ್ ಶಾ ಹೆಸರಿನಲ್ಲಿತ್ತು. ಆದರೆ, ಬಿಜೆಪಿ ಇಂದು ಅಕ್ರಮ ಹಣ ವರ್ಗಾವಣೆ ಆರೋಪಿ ಸುಕೇಶ್ ಬೆಂಬಲವನ್ನು ತೆಗೆದುಕೊಳ್ಳುತ್ತಿದೆ. ಈ ಪತ್ರವನ್ನು ತೋರಿಸುವುದರ ಮೂಲಕ ಸುಕೇಶ್ನನ್ನು ತನ್ನ ಬ್ರ್ಯಾಂಡ್ ಅಂಬಾಸಿಡರ್ ಮತ್ತು ಬಿಜೆಪಿಯ ಸ್ಟಾರ್ ಪ್ರಚಾರಕನನ್ನಾಗಿ ಮಾಡುತ್ತಿದೆ ಎಂದರು.
ಆಮ್ ಆದ್ಮಿ ಪಕ್ಷದ ಜೈಲಿನಲ್ಲಿರುವ ನಾಯಕ ಸತ್ಯೇಂದ್ರ ಜೈನ್ ಅವರ ಬೆದರಿಕೆಯನ್ನು ಆರೋಪಿಸಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಮತ್ತೊಂದು ಸಾರ್ವಜನಿಕ ಪತ್ರವನ್ನು ಬರೆದಿದ್ದರು. ಆರೋಪಿ ಸುಕೇಶ್ ಆಪ್ ಪಕ್ಷಕ್ಕೆ ಕೋಟಿಗಳನ್ನು ಪಾವತಿಸಿದ್ದಾಗಿ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಇದು ಬಿಜೆಪಿ 'ಕಾಲ್ಪನಿಕ ತಂತ್ರ' ಎಂದು ಎಎಪಿ ತಿರುಗೇಟು ನೀಡಿದೆ.
ಕ್ರಿಮಿನಲ್ಗಳು ಮತ್ತು ಕಳ್ಳರು, ಡಕಾಯಿತರು ಮತ್ತು ದಂಗೆಕೋರರು, ಎಲ್ಲರೂ ಬಿಜೆಪಿ ಸೇರುತ್ತಾರೆ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದರು. "ಜೈಲಿನಲ್ಲಿರುವ ಯಾವುದೇ ಅಪರಾಧಿಯನ್ನು ಅವರು ಯಾರ ವಿರುದ್ಧ ಬೇಕಾದರೂ ಚೂ ಬಿಡಬಹುದು. ಇನ್ನು ಕೆಲವೇ ವಾರಗಳಲ್ಲಿ ಸುಕೇಶ್ ಚಂದ್ರಶೇಖರ್ ಎಂಬ ಕ್ರಿಮಿನಲ್ ಬಿಜೆಪಿ ಸೇರಲಿದ್ದಾನೆ ಎಂಬ ಸುದ್ದಿ ಕೇಳಿ ಬರುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.