ಜೆಟ್ ಏರ್ವೇಸ್ ಉಳಿಸಲು ತೆರಿಗೆದಾರರ ಹಣವೇಕೆ?: ಕಾಂಗ್ರೆಸ್ ಪ್ರಶ್ನೆ
ನವದೆಹಲಿ, ಮಾರ್ಚ್ 21: ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಜೆಟ್ ಏರ್ವೇಸ್ ಸಂಸ್ಥೆಗೆ ನೆರವಾಗಲು ಕೇಂದ್ರ ಸರ್ಕಾರ ತೆರಿಗೆ ಪಾವತಿದಾರರ ಹಣವನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅನಿವಾಸಿ ಭಾರತೀಯ ಉದ್ಯಮಿ ನರೇಶ್ ಗೋಯಲ್ ಮತ್ತು ವಿದೇಶಿ ವಿಮಾನಯಾನ ಸಂಸ್ಥೆಯ ಮಾಲೀಕತ್ವದ ಜೆಟ್ ಏರ್ವೇಸ್ ಹಣಕಾಸಿನ ಮುಗ್ಗಟ್ಟಿಗೆ ಒಳಗಾಗಿದೆ. ಹಲವು ತಿಂಗಳಿನಿಂದ ಅದರ ಸಿಬ್ಬಂದಿಗೆ ವೇತನ ಪಾವತಿ ಮಾಡಿಲ್ಲ. ಅಲ್ಲದೆ, ಸುಮಾರು ಅರ್ಧದಷ್ಟು ಸಂಖ್ಯೆಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಹಣಕಾಸಿನ ಅಕ್ರಮಗಳು ಮತ್ತು ನಿಧಿಯ ದುರ್ಬಳಕೆ ಮಾಡಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ತಾನೇ ತನಿಖೆಗೆ ಆದೇಶ ನೀಡಿದ್ದರೂ ಆರ್ಥಿಕ ನೆರವು ನೀಡಲು ಮುಂದಾಗಿರುವ ಪ್ರಧಾನಿ ಕಚೇರಿಯ ನಡೆಯನ್ನು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಪ್ರಶ್ನಿಸಿದ್ದಾರೆ.

ವಿದೇಶಿ ಸಂಸ್ಥೆಯ ಮಾಲೀಕತ್ವ
'ಲಂಡನ್ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಎನ್ಆರ್ಐ ನರೇಶ್ ಗೋಯಲ್ ಶೇ 51ರಷ್ಟು ಷೇರುಗಳನ್ನು ಹೊಂದಿದ್ದಾರೆ. ಇತಿಹಾದ್ ಏರ್ವೇಸ್ ಶೇ 24ರಷ್ಟು ಷೇರುಗಳನ್ನು ಹೊಂದಿದೆ. ಇದರ ಅರ್ಥ ಈ ವಿಮಾನಯಾನ ಸಂಸ್ಥೆಯ ಶೇ 75ರಷ್ಟು ಮಾಲೀಕತ್ವವನ್ನು ಎನ್ಆರ್ಐ ಮತ್ತು ವಿದೇಶಿ ಸಂಸ್ಥೆಯೊಂದು ಹೊಂದಿದೆ' ಎಂದು ರಣದೀಪ್ ಸುರ್ಜೇವಾಲ ತಿಳಿಸಿದ್ದಾರೆ.

8,500 ಕೋಟಿ ರೂಪಾಯಿ ಸಾಲ ಮನ್ನಾ
ಏರ್ಲೈನ್ಸ್ನ ಷೇರುಗಳನ್ನು ಖರೀದಿಸುವ ಮೂಲಕ ಅದರ 8,500 ಕೋಟಿ ರೂಪಾಯಿ ಸಾಲ ಮನ್ನಾ ಮಾಡುವಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಾದ ಎಸ್ಬಿಐ ಮತ್ತು ಪಿಎನ್ಬಿಗೆ ಮೋದಿ ಸರ್ಕಾರ ಸೂಚನೆ ನೀಡಿದೆ. ಭಾರತದ ಸಾಲಪೀಡಿತ ರೈತರಿಗೆ ನೀಡದ ಸಾರ್ವಜನಿಕ ಹಣವನ್ನು ವಿದೇಶಿ ಹೂಡಿಕೆದಾರರ ಮಾಲೀಕತ್ವದ ದಿವಾಳಿ ಸಂಸ್ಥೆಗೆ ಮೋದಿ ಸರ್ಕಾರ ಏಕೆ ಭಾರಿ ಪ್ಯಾಕೇಜ್ ಆಗಿ ನೀಡುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

ಬಂಡವಾಳಶಾಹಿಗಳ ರಕ್ಷಣೆ
ಪ್ರಧಾನಿ ಕಚೇರಿ ಎರಡು ಆದೇಶಗಳನ್ನು ಹೊರಡಿಸಿದೆ. ಈಕ್ವಿಟಿಯ ಮೊತ್ತವು 1 ರೂಪಾಯಿಗೆ ಪರಿವರ್ತಿಸುವ ಮೂಲಕ ಅದರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವಂತೆ ಎಸ್ಬಿಐ ಮತ್ತು ಸಾರ್ವಜನಿಕ ಬ್ಯಾಂಕುಗಳಿಗೆ ಸೂಚಿಸಿದ್ದಾರೆ. ಮತ್ತು ಇತಿಹಾದ್ನ ಪ್ರತಿ ಷೇರಿಗೂ 150 ರೂಪಾಯಿ ನೀಡಲು ಮುಂದಾಗಿದೆ. ಮೋದಿ ಸರ್ಕಾರವು ಎಲ್ಲ ವಂಚಕ ಬಂಡವಾಶಾಹಿಗಳನ್ನು ಸಾರ್ವಜನಿಕ ಹಣ ಬಳಸಿ ರಕ್ಷಿಸುತ್ತದೆಯೇ? ಎಂದಿದ್ದಾರೆ.

ತನಿಖೆ ನಡೆಯುತ್ತಿದೆ
ನಿಧಿಯ ದುರ್ಬಳಕೆ ಮತ್ತು ಹಣಕಾಸಿನ ಅಕ್ರಮಗಳಂತಹ ಗಂಭೀರ ಆರೋಪಗಳ ಕುರಿತು ವಿಮಾನಯಾನ ಸಂಸ್ಥೆ ವಿರುದ್ಧ ನಾಗರಿಕ ವಿಮಾನಯಾನ ಸಚಿವಾಲಯ ತನಿಖೆ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಕಚೇರಿ ಸಂಸ್ಥೆಗೆ ನೆರವಾಗಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.












Click it and Unblock the Notifications