ರಾಜಸ್ಥಾನದ ಬಿಕ್ಕಟ್ಟಿನ ಬೆನ್ನಲ್ಲೇ ಗೆಲುವಿನ ಮಂತ್ರ ಜಪಿಸಿದ ಸಚಿನ್ ಪೈಲಟ್!
ನವದೆಹಲಿ, ಸೆಪ್ಟೆಂಬರ್ 30: ರಾಜಸ್ಥಾನದಲ್ಲಿ ಚುನಾವಣೆಯನ್ನು ಗೆಲ್ಲುವುದೊಂದೇ ನಮ್ಮ ಪ್ರಮುಖ ಆದ್ಯತೆ ಆಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಹೇಳಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಕಮಿಟಿ(ಎಐಸಿಸಿ) ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘೋಷಿಸಿದ ಬೆನ್ನಲ್ಲೇ ಸಚಿನ್ ಪೈಲಟ್, ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದರು.
ಎಐಸಿಸಿ ಚುನಾವಣೆ: ಹಿಂದೆ ಸರಿದ ಅಶೋಕ್ ಗೆಹ್ಲೋಟ್, ದಿಗ್ವಿಜಯ್-ಶಶಿ ತರೂರ್ ಮಧ್ಯೆ ಸ್ಪರ್ಧೆ
ಸೋನಿಯಾ ಗಾಂಧಿ ಭೇಟಿ ನಂತರ ಮಾತನಾಡಿದ ಸಚಿನ್ ಪೈಲಟ್, "ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಂದರ ಹಿಂದೆ ಒಂದರಂತೆ ಅಧಿಕಾರದ ಗದ್ದುಗೆ ಏರುತ್ತವೆ. ಕಾಂಗ್ರೆಸ್ ಎರಡನೇ ಬಾರಿ ಏಕೆ ಅಧಿಕಾರಕ್ಕೆ ಏರಲಿಲ್ಲ ಎಂಬುದಕ್ಕೆ ನಮ್ಮ ಬಳಿ ಉತ್ತರವಿಲ್ಲ. ಆದರೆ ಗೆಲುವಿಗಾಗಿ ಒಟ್ಟಾಗಿ ಶ್ರಮಿಸುವುದಕ್ಕೆ ನಾವು ಆದ್ಯತೆ ನೀಡುತ್ತೇವೆ," ಎಂದು ಸಚಿನ್ ಪೈಲಟ್ ಹೇಳಿದರು.
ಎಐಸಿಸಿ ಚುನಾವಣೆ ಅಖಾಡದಿಂದ ಹಿಂದೆ ಸರಿದ ಗೆಹ್ಲೋಟ್
ರಾಜಸ್ಥಾನದಲ್ಲಿ ಸೃಷ್ಟಿಯಾಗಿದ್ದ ರಾಜಕೀಯ ಬಿಕ್ಕಟ್ಟಿನ ನೈತಿಕ ಜವಾಬ್ದಾರಿಯನ್ನು ಹೊತ್ತುಕೊಂಡ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು. ಈ ಘೋಷಣೆ ಹೊರಬಿದ್ದ ಬೆನ್ನಲ್ಲೇ ನವದೆಹಲಿಗೆ ತೆರಳಿದ ಸಚಿನ್ ಪೈಲಟ್, ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ವಿದ್ಯಮಾನ ನಡೆಯಿತು.
ರಾಜಸ್ಥಾನದಲ್ಲಿ ಬಂಡಾಯದ ಬಾವುಟ ಹಾರಿದ್ದು ಏಕೆ?
ಒಂದು ಕಡೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಎಐಸಿಸಿ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆ ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ಶುರುವಾಗಿತ್ತು. ಸಚಿನ್ ಪೈಲಟ್ ಬೆಂಬಲಿಗರು ಮುಖ್ಯಮಂತ್ರಿ ಸ್ಥಾನದ ಬೆನ್ನು ಬಿದ್ದು, ಬಂಡಾಯದ ಬಾವುಟ ಹಾರಿಸಿದ್ದರು. ಅಶೋಕ್ ಗೆಹ್ಲೋಟ್ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಕುರ್ಚಿಗೆ ಹತ್ತಿರವಾಗುತ್ತಿದ್ದಂತೆ ರಾಜಸ್ಥಾನದಲ್ಲಿ ಸಿಎಂ ಕುರ್ಚಿ ಮೇಲೆ ಸಚಿನ್ ಪೈಲಟ್ ಕರ್ಚೀಫ್ ಹಾಕಲು ರೆಡಿಯಾಗಿದ್ದರು. ಈ ಬೆಳವಣಿಗೆಯ ಸುಳಿವು ಹಿಡಿದ ಅಶೋಕ್ ಗೆಹ್ಲೋಟ್, ಎಐಸಿಸಿ ಚುನಾವಣೆಯಿಂದ ಹಿಂದೆ ಸರಿದರು.
ಸೋನಿಯಾ ಗಾಂಧಿ ನಿರ್ಧಾರಕ್ಕೆ ಬದ್ಧ ಎಂದ ಗೆಹ್ಲೋಟ್
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗುತ್ತಿದ್ದಂತೆ ಇದರ ನೈತಿಕ ಹೊಣೆಯನ್ನು ತಾವೇ ಹೊತ್ತುಕೊಳ್ಳುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದರು. ಅಲ್ಲದೇ ಮುಂದೆ ತಾವು ಮುಖ್ಯಮಂತ್ರಿ ಆಗಿ ಮುಂದುವರಿಯಬೇಕೇ ಬೇಡವೇ ಎಂಬುದು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಗೆಹ್ಲೋಟ್ ಹೇಳಿದರು.
ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆ ಏನು?
ಮುಖ್ಯಮಂತ್ರಿ ಸ್ಥಾನಕ್ಕಾಗಿ ಅಶೋಕ್ ಗೆಹ್ಲೋಟ್ ಉತ್ತರಾಧಿಕಾರಿ ಆಯ್ಕೆಗೆ ಕಾಂಗ್ರೆಸ್ ಸಿದ್ಧತೆ ನಡೆಸಿತು. ಇದರ ಬೆನ್ನಲ್ಲೇ ಗೆಹ್ಲೋಟ್ ಆಪ್ತರಾಗಿದ್ದ ಶಾಂತಿ ಧರಿವಾಲ್, ಮಹೇಶ್ ಜೋಶಿ ಮತ್ತು ಧರ್ಮೇಂದ್ರ ರಾಥೋಡ್ ಸೇರಿದಂತೆ 82 ಶಾಸಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಜೈಪುರದಲ್ಲಿರುವ ಧರಿವಾಲ್ ನಿವಾಸದಲ್ಲಿ ಸಭೆ ಸೇರಿದ ಒಟ್ಟು 82 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಷರತ್ತು ಹಾಕಿದರು. ಅಲ್ಲದೇ ಸಿಎಂ ಉತ್ತರಾಧಿಕಾರಿ ಆಯ್ಕೆಗಾಗಿ ನಡೆದ ಶಾಸಕಾಂಗ ಸಭೆಯಿಂದ ಅಷ್ಟೂ ಶಾಸಕರು ದೂರ ಉಳಿದರು.
ಈ ರಾಜಕೀಯ ಬಿಕ್ಕಟ್ಟು ಶಮನಗೊಳಿಸುವಂತೆ ಕೇಂದ್ರ ನಾಯಕರು ಶಿಸ್ತು ಕಮಿಟಿಗೆ ಸೂಚನೆ ನೀಡಿತು. ರಾಜಸ್ಥಾನದ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕೆನ್ ಎಲ್ಲ ರಾಜಕೀಯ ಬೆಳವಣಿಗೆ ಬಗ್ಗೆ ಸೋನಿಯಾ ಗಾಂಧಿಯವರಿಗೆ ವರದಿ ಸಲ್ಲಿಸಿದರು. ರಾಜಸ್ಥಾನದ ಸಚಿವೆ ಶಾಂತಿ ಧರಿವಾಲ್ ಮತ್ತು ಮಹೇಶ್ ಜೋಶಿ ಮತ್ತು ಧರ್ಮೇಂದ್ರ ರಾಥೋಡ್ ವಿರುದ್ಧ ತೀವ್ರ ಅಶಿಸ್ತು ಆರೋಪವನ್ನು ಮಾಡಲಾಗಿದ್ದು, ಈ ಕುರಿತು 10 ದಿನಗಳಲ್ಲಿ ಉತ್ತರ ನೀಡುವಂತೆ ಕೇಂದ್ರ ನಾಯಕರು ಸೂಚನೆ ನೀಡಿದರು.