Congress President Election: ಎಐಸಿಸಿ ಕಚೇರಿಯಲ್ಲಿ ಸೋನಿಯಾ, ಪ್ರಿಯಾಂಕಾ ಮತದಾನ
ನವದೆಹಲಿ, ಅಕ್ಟೋಬರ್ 17: ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಇಂದು ಆರಂಭವಾಗಿದೆ. ದೆಹಲಿಯ ಎಐಸಿಸಿ ಕಚೇರಿ ಸೇರಿದಂತೆ ಒಟ್ಟು 65 ಮತ ಕೇಂದ್ರಗಳಲ್ಲಿ ಮತದಾನ ನಡೆಯುತ್ತಿದೆ.
ಪಕ್ಷದ ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಕಣದಲ್ಲಿದ್ದಾರೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗಾಂಧಿ ಪರಿವಾರದ ಬೆಂಬಲವಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ಖರ್ಗೆ ಅವರು ಅಲ್ಲಗಳೆದಿದ್ದಾರೆ.
'ಗಾಂಧಿ ಕುಟುಂಬವು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳಿಸಿದೆ. ಆ ಕುಟುಂಬದ ಸದಸ್ಯರು ಅನುಭವಸ್ಥರು. ಹೀಗಾಗಿ ಅವರಿಂದ ನಾನು ಸಲಹೆ ಸ್ವೀಕರಿಸುತ್ತೇನೆ' ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಯಾವುದೇ ಸದಸ್ಯರು ಸಕ್ರಿಯರಾಗಿಲ್ಲ. ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯಲ್ಲಿ ನಿರತರಾಗಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಹಿಮಾಚಲ ಪ್ರದೇಶ ಚುನಾವಣೆಗೆ ಪ್ರಚಾರ ನಡೆಸುತ್ತಿದ್ದಾರೆ. ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷೀಯ ಚುನಾವಣೆ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಆದರೂ, ಪಕ್ಷದ ಕೆಲ ಪ್ರಮುಖ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ. ಖರ್ಗೆ ವಿರುದ್ಧ ಸ್ಪರ್ಧಿಸಿರುವ ಶಶಿ ತರೂರ್ ಹಿರಿಯ ನಾಯಕರ ಬಹಿರಂಗ ಬೆಂಬಲಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಎಐಸಿಸಿ ಕಚೇರಿಯಲ್ಲಿ ಸೋನಿಯಾ, ಪ್ರಿಯಾಂಕಾ ಮತದಾನ
ಕಾಂಗ್ರೆಸ್ ಅಧ್ಯಕ್ಷೀಯ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಸೋನಿಯಾ ಹಾಗೂ ಪ್ರಿಯಾಂಕಾ ಗಾಂಧಿ ಮತ ಚಲಾಯಿಸಿದರು. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಮತದಾನ ಮಾಡಿದರು.
ಈ ವೇಳೆ ಸುದ್ದಿಸಂಸ್ಥೆ 'ಎಎನ್ಐ'ಗೆ ಹೇಳಿಕೆ ನೀಡಿರುವ ಸೋನಿಯಾ, 'ಈ ಸಂದರ್ಭಕ್ಕಾಗಿ ನಾನು ಬಹಳ ಸಮಯದಿಂದ ಕಾಯುತ್ತಿದ್ದೆ' ಎಂದು ತಿಳಿಸಿದರು.
ಸೋನಿಯಾ ಜೊತೆ 75 ಪ್ರತಿನಿಧಿಗಳು ಎಐಸಿಸಿ ಕಚೇರಿಯಲ್ಲಿ ಮತ ಚಲಾಯಿಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಮತದಾನದಲ್ಲಿ ಭಾಗಿಯಾದರು.
ಇದು ಚಾರಿತ್ರಿಕ ದಿನವೆಂದ ಕಾಂಗ್ರೆಸ್ ನಾಯಕರು
ಅಧ್ಯಕ್ಷೀಯ ಚುನಾವಣೆಯಲ್ಲಿ ಮತಚಲಾಯಿಸಿ ಮಾತನಾಡಿದ ಜೈರಾಮ್ ರಮೇಶ್, ಮತದಾನದ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಭಾರತದ ಯಾವುದೇ ರಾಜಕೀಯ ಪಕ್ಷಗಳಲ್ಲಿ ಇಲ್ಲ. ಇದು ದೇಶದ ಇತಿಹಾಸದಲ್ಲಿ ಅಂತ್ಯಂತ ಪ್ರಮುಖ ದಿನವೆಂದು ಅಭಿಪ್ರಾಯಪಟ್ಟರು.
ಜೈಪುರದಲ್ಲಿ ಮತದಾನ ಮಾಡಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್, 'ಇಂದು ಐತಿಹಾಸಿಕ ದಿನವಾಗಿದೆ. ಕಾರಣ, 22 ವರ್ಷಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷೀಯ ಸ್ಥಾನಕ್ಕೆ ಮತದಾನ ನಡೆಯುತ್ತಿದೆ. ಪಕ್ಷದೊಳಗಿನ ಆಂತರಿಕ ಸಾಮರಸ್ಯದ ಬಗ್ಗೆ ಈ ಚುನಾವಣೆ ಸಂದೇಶ ನೀಡಿದೆ. ಅಕ್ಟೋಬರ್ 19ರ(ಫಲಿತಾಂಶದ ದಿನ) ನಂತರವೂ ಗಾಂಧಿ ಕುಟುಂಬದ ಸದಸ್ಯರೊಂದಿಗೆ ನನ್ನ ಸಂಬಂಧ ಹೀಗೆ ಮುಂದುವರಿಯಲಿದೆ' ಎಂದು ಹೇಳಿದ್ದಾರೆ.
ಅಧ್ಯಕ್ಷೀಯ ಚುನಾವಣೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮತ ಚಲಾಯಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತದಾನದಲ್ಲಿ ಪಾಲ್ಗೊಂಡರು. ಭಾರತ್ ಜೋಡೊ ಯಾತ್ರೆಯಲ್ಲಿ ನಿರತರಾಗಿರುವ ರಾಹುಲ್ ಗಾಂಧಿ ಬಳ್ಳಾರಿಯ ಕಾಂಗ್ರೆಸ್ ಕಚೇರಿಯಲ್ಲಿ ಮತದಾನ ಮಾಡಿದರು.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಇಂದು 10 ಗಂಟೆಗೆ ಆರಂಭವಾಗಿರುವ ಮತದಾನ ಪ್ರಕ್ರಿಯೆ, ಸಂಜೆ 4 ಗಂಟೆಗೆ ಮುಕ್ತಾಯ ಆಗಲಿದೆ. ದೇಶದ 65 ಮತ ಕೇಂದ್ರಗಳಲ್ಲಿ ನಡೆಯುತ್ತಿರುವ ಮತದಾನ ಪ್ರಕ್ರಿಯೆಯಲ್ಲಿ 9,000ಕ್ಕೂ ಹೆಚ್ಚು ಪ್ರತಿನಿಧಿಗಳು ಮತ ಚಲಾವಣೆ ಮಾಡಲಿದ್ದಾರೆ. ಅಕ್ಟೋಬರ್ 19ರಂದು ಫಲಿತಾಂಶ ಹೊರ ಬೀಳಲಿದೆ.