ಕಾಂಗ್ರೆಸ್ ಕತ್ತಲಿಗೆ ನಿತಿಶ್ ಬೆಳಕು ಎಂದ ರಾಮಚಂದ್ರ ಗುಹಾ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮುಂದಿನ ಭವಿಷ್ಯ ಉಜ್ವಲವಾಗಬೇಕಾಗಿದ್ದರೆ ನಾಯಕತ್ವ ಬದಲಾವಣೆಯೊಂದೇ ಇರುವ ಏಕೈಕ ಮಾರ್ಗ ಎಂದು ಇತಿಹಾಸ ತಜ್ಞ ರಾಮಚಂದ್ರ ಗುಹಾ ಅಭಿಪ್ರಾಯ ಪಟ್ಟಿದ್ದಾರೆ.
ಸಾಲು ಸಾಲು ಚುನಾವಣೆಯಲ್ಲಿ ಸೋತು, ಸಮರ್ಥ ಮುಂದಾಳತ್ವ ಇಲ್ಲದೇ ಹೈರಾಣವಾಗಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮುಂದಿನ ಭವಿಷ್ಯ ಉಜ್ವಲವಾಗಬೇಕಾಗಿದ್ದರೆ ನಾಯಕತ್ವ ಬದಲಾವಣೆಯೊಂದೇ ಇರುವ ಏಕೈಕ ಮಾರ್ಗ ಎಂದು ಇತಿಹಾಸ ತಜ್ಞ ರಾಮಚಂದ್ರ ಗುಹಾ ಅಭಿಪ್ರಾಯ ಪಟ್ಟಿದ್ದಾರೆ.
'ಇಂಡಿಯಾ ಆಫ್ಟರ್ ಗಾಂಧಿ' ಪುಸ್ತಕದ ಹತ್ತನೇ ಆವೃತ್ತಿ ಬಿಡುಗಡೆ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಗುಹಾ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾಂಗ್ರೆಸ್ ಪಕ್ಷದ ಮುಖಂಡತ್ವ ವಹಿಸಿಕೊಳ್ಳಬೇಕೆನ್ನುವ ಸಲಹೆಯನ್ನು ನೀಡಿದ್ದಾರೆ.
ಧೋನಿ ಗವಾಸ್ಕರ್ ಜನ್ಮ ಜಾಲಾಡಿದ ರಾಮಚಂದ್ರ ಗುಹಾ
ಸದ್ಯದ ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ನಾಯಕರ ಕೊರತೆಯಿದ್ದು, ಸೋನಿಯಾ ಗಾಂಧಿಯಾಗಲಿ ಅಥವಾ ರಾಹುಲ್ ಗಾಂಧಿಯಾಗಲಿ ಪಕ್ಷವನ್ನು ಗೆಲುವಿನ ದಡದತ್ತ ಸೇರಿಸುವಷ್ಟು ಸಮರ್ಥರಲ್ಲ ಎಂದು ಗುಹಾ ಹೇಳಿದ್ದಾರೆ.
ನಿತೀಶ್ ಕುಮಾರ್ ಒಬ್ಬ ಅಪ್ಪಟ ನಾಯಕ, ಜೆಡಿಯು ಪಕ್ಷದಲ್ಲಿ ನಿತೀಶ್ ಕುಮಾರ್ ಗುರುತಿಸಿಕೊಂಡಿದ್ದರೂ, ಕಾಂಗ್ರೆಸ್ ಅವರನ್ನು ತನ್ನತ್ತ ಸೆಳೆದು ಅವರಿಗೆ ಪಕ್ಷದ ಜವಾಬ್ದಾರಿಯನ್ನು ನೀಡಬೇಕು.
ಕಾಂಗ್ರೆಸ್ ಮತ್ತು ನಿತೀಶ್ ಕುಮಾರ್ ಒಂದಾದರೆ 'ಅದು ಸ್ವರ್ಗದಲ್ಲಿ ಮಾಡಿದ ಜೋಡಿ' , ಕಾಂಗ್ರೆಸ್ ಹೈಕಮಾಂಡ್ ತಮ್ಮ ಜವಾಬ್ದಾರಿಯನ್ನು ನಿತೀಶ್ ಕುಮಾರ್ ಗೆ ವರ್ಗಾಯಿಸಬೇಕೆಂದು ಇತಿಹಾಸ ತಜ್ಞ ಮತ್ತು ಅಂಕಣಕಾರ ರಾಮಚಂದ್ರ ಗುಹಾ ಹೇಳಿದ್ದಾರೆ.
ನಿತೀಶ್ ಹೆಸರು ಸೂಚಿಸಲು ಕಾರಣವಿದೆ
ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಗುಹಾ, ನಾನು ಬಿಹಾರ ಸಿಎಂ ನಿತೀಶ್ ಕುಮಾರ್ ಹೆಸರು ಸೂಚಿಸಲು ಕಾರಣವಿದೆ. ನಿತೀಶ್ ಮತ್ತು ಪ್ರಧಾನಿ ಮೋದಿಯ ನಡುವೆ ಹಲವು ಸ್ವಾಮ್ಯತೆಯಿದೆ. ಇಬ್ಬರೂ ನಾಯಕರಿಗೂ ಕುಟುಂಬದ ಗೊಡವೆಯಿಲ್ಲ ಎಂದು ಗುಹಾ ಹೇಳಿದ್ದಾರೆ.
ಮೋದಿ ಮತ್ತು ನಿತೀಶ್ ನಿರ್ದಿಷ್ಟ ಗುರಿಯನ್ನು ಹೊಂದಿರುವವರು
ಮೋದಿ ಮತ್ತು ನಿತೀಶ್ ಇಬ್ಬರಿಗೂ ತಮ್ಮ ಗುರಿ ಏನು ಎನ್ನುವುದರ ಬಗ್ಗೆ ಅರಿವಿದೆ ಜೊತೆಗೆ ಭಾರತದ ರಾಜಕಾರಣದಲ್ಲಿ ಅಪರೂಪ ಎನ್ನುವಂತೆ ನಿತೀಶ್ ಗೆ ಸ್ವಯಂಪ್ರತಿಷ್ಠೆಯಿಲ್ಲ ಮತ್ತು ಜನಾಂಗವಾದಿಯಲ್ಲ. ಹಾಗಾಗಿ, ನಿತೀಶ್ ಹೆಸರನ್ನು ಕಾಂಗ್ರೆಸ್ ಮುಖ್ಯಸ್ಥರ ಸ್ಥಾನಕ್ಕೆ ಸೂಚಿಸುತ್ತಿದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ - ರಾಮಚಂದ್ರ ಗುಹಾ.
ಕಾರ್ಯಕ್ರಮದಲ್ಲಿ ರಾಮಚಂದ್ರ ಗುಹಾ ಅಭಿಪ್ರಾಯ
ಭಾರತದ ರಾಜಕಾರಣದ ಅಪ್ಪಟ ನಾಯಕರಲ್ಲೊಬ್ಬರು ನಿತೀಶ್ ಎಂದು ಹೊಗಳಿರುವ ಗುಹಾ, ಅವರಿಗೆ ಕಾಂಗ್ರೆಸ್ ನಾಯಕತ್ವ ವಹಿಸಿಕೊಡದಿದ್ದರೆ ಪಕ್ಷಕ್ಕೂ ಭವಿಷ್ಯವಿಲ್ಲ, ಜೊತೆಗೆ ಸೋನಿಯಾ ಗಾಂಧಿಗೂ ಭವಿಷ್ಯವಿಲ್ಲಎಂದು ಗುಹಾ ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆ
2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ನೀಡುತ್ತಿರುವ ನನ್ನ ಸಲಹೆಯಿದು. ಪಕ್ಷ ಸದ್ಯ 44 ಸ್ಥಾನವನ್ನು ಹೊಂದಿದೆ, ನಾಯಕತ್ವ ಬದಲಾವಣೆಯಾಗದಿದ್ದಲ್ಲಿ ಗರಿಷ್ಠ ನೂರು ಸ್ಥಾನದತ್ತ ಮಾತ್ರ ಹೋಗಬಹುದು. ಅದೇ ನಿತೀಶ್ ಕುಮಾರಿಗೆ ಜವಾಬ್ದಾರಿ ನೀಡಿದರೆ ಭಾರೀ ಬದಲಾವಣೆ ಕಾಣಬಹುದು - ರಾಮಚಂದ್ರ ಗುಹಾ.
ಒಂದೇ ಪಕ್ಷ ಪದೇಪದೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಾರದು
ಒಂದೇ ಪಕ್ಷ ಪದೇ ಪದೇ ಅಸೆಂಬ್ಲಿ ಚುನಾವಣೆಯನ್ನು ಗೆಲ್ಲುವುದು ರಾಜ್ಯದ ಅಭಿವೃದ್ದಿಗೆ ಮಾರಕ. ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ಎಡರಂಗ ಮತ್ತು ಗುಜರಾತ್ ನಲ್ಲಿ ಬಿಜೆಪಿ ಪದೇ ಪದೇ ಅಧಿಕಾರ ಬರುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ - ರಾಮಚಂದ್ರ ಗುಹಾ.