Haryana: ಮೋದಿ ಜತೆ ಮಾತಾಡುವ ದೇವರು ಅದಾನಿಗೆ ಮಾತ್ರ ಸಹಾಯ ಮಾಡಲು ಹೇಳುತ್ತಾನಾ..? ರಾಹುಲ್ ವ್ಯಂಗ್ಯ
ಹರಿಯಾಣ ವಿಧಾನಸಭಾ ಚುನಾವಣೆ ನಿಮಿತ್ತ ಕಾಂಗ್ರೆಸ್ ಸಂಸದ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಅಂಬಾಲದಲ್ಲಿ ಕಾಂಗ್ರೆಸ್ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗಳನ್ನು ಉಲ್ಲೇಖಿಸಿ, ವ್ಯಂಗ್ಯವಾಡಿದ್ದಾರೆ.
ಮೋದಿ ಅವರು ತನ್ನನ್ನು ಅಜೈವಿಕ ಎಂದು ಹೇಳಿಕೊಳ್ಳಕುತ್ತಾರೆ. ತಾನು ದೇವರೊಂದಿಗೆ ನೇರವಾಗಿ ಮಾತನಾಡುತ್ತೇನೆ, ದೇವರು ನನಗೆ ಹೇಳುವುದೆಲ್ಲವನ್ನೂ ಚಾಚೂ ತಪ್ಪದೇ ಮಾಡುತ್ತಾನೆ ಎಂದು ಕೊಚ್ಚಿಕೊಳ್ಳುತ್ತಾರೆ. ಆದರೆ, ದೇವರು ಅದು ಹೇಗೆ ಮೋದಿ ಅವರಿಗೆ ಅದಾನಿಗೆ ಮಾತ್ರ ಸಹಾಯ ಮಾಡು ಎಂದು ಸೂಚಿಸುತ್ತಾನೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.

ನರೇಂದ್ರ ಮೋದಿ ಅವರು ಮಾಡುತ್ತಿರುವುದೆಲ್ಲ ಕೇವಲ ಶ್ರೀಮಂತರಿಗಾಗಿ ಮಾತ್ರ. ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣವೇ ನಾವು ನೀಡಿರುವ ವಾಗ್ದಾನಗಳನ್ನು ಈಡೇರಿಸುತ್ತೇವೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ (MSP), ಪ್ರತಿ ಬಡ ಮಹಿಳೆಗೆ ಮಾಸಿಕ 2,000 ರೂಪಾಯಿ, ಹರಿಯಾಣ ಸರ್ಕಾರದಲ್ಲಿ ಎರಡು ಲಕ್ಷ ಯುವಕರಿಗೆ ಉದ್ಯೋಗ ನೀಡುತ್ತೇವೆ. ಈ ಉದ್ಯೋಗಗಳನ್ನು ಸಮಾಜದ ಪ್ರತಿಯೊಂದು ಜಾತಿ ಮತ್ತು ವರ್ಗಕ್ಕೂ ನೀಡುತ್ತೇವೆ. ಹರಿಯಾಣದಲ್ಲಿ ಜಾತಿ ಗಣತಿಯನ್ನೂ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಮೋದಿ ಸರ್ಕಾರವು ಕೈಗಾರಿಕೋದ್ಯಮಿಗಳಿಗಾಗಿ ಕೆಲಸ ಮಾಡುತ್ತಿದೆ. ಸಾಮಾನ್ಯ ಜನರು ಒಂದೆಡೆ ಕಷ್ಟಪಡುತ್ತಿದ್ದರೆ, ಅದಾನಿ ಖಾತೆಗೆ ಹಣವು ಸುನಾಮಿಯಂತೆ ಹರಿಯುತ್ತದೆ. ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕ್ರಾಂತಿ ತರಲಿದೆ ಎಂದು ರಾಹುಲ್ ಹೇಳಿದ್ದಾರೆ.

ಸಂವಿಧಾನ ವಿರೋಧಿಗಳನ್ನೇ ಬದಲಿಸಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿ, ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುವವರನ್ನು ಮೊದಲು ದೇಶದಲ್ಲೇ ಬದಲಿಸಬೇಕು. ಈ ಕೆಲಸ ಮಾಡುವ ಮೂಲಕ ಸಂವಿಧಾನ ವಿರೋಧಿಗಳಿಗೆ ಸರಿಯಾದ ಪಾಠ ಕಳಿಸಬೇಕು ಬಿಜೆಪಿಗೆ ತಿರುಗೇಟು ನೀಡಿದರು. ಹರಿಯಾಣದ ರೈತರು, ಯೋಧರು, ಕ್ರೀಡಾಪಟುಗಳು ನಮ್ಮ ದೇಶದ ಗೌರವವನ್ನು ಉತ್ತುಂಗಕ್ಕೇರಿಸಿದ್ದಾರೆ. ಆದರೆ ಇಲ್ಲಿದ್ದ ಬಿಜೆಪಿ ಸರ್ಕಾರವು ಕಳೆದ ಒಂದು ದಶಕದಿಂದಲೂ ಹರಿಯಾಣ ಜನರಿಗೆ ಮೋಸ ಮಾಡಿದೆ ಎಂದು ದೂರಿದ್ದಾರೆ.
ಹರಿಯಾಣದ ಯುವಕರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ. ನಿರುದ್ಯೋಗದಿಂದ ಅವರು ಸಾಕಷ್ಟು ಬಳಲಿದ್ದಾರೆ. ಮತ್ತೊಂದೆಡೆ ಇಲ್ಲಿನ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೂ ಬಿಜೆಪಿ ಪರಿಹಾರ ಕೊಡಲು ಆಗಲಿಲ್ಲ. ಇವುಗಳನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದವರ ಮೇಲೆಯೇ ಲಾಠಿ ಚಾರ್ಜ್ ಮಾಡಿಸಿದ್ದು ಬಿಜೆಪಿ. ಅದು ಕೇವಲ ಭ್ರಷ್ಟಾಚಾರ, ಹಗರಣಗಳಲ್ಲಿಯೇ ಬಿಜೆಪಿ ಬ್ಯುಸಿಯಾಗಿದೆ. ಇಂತಹ ಪಕ್ಷಕ್ಕೆ ಹರಿಯಾಣ ಜನತೆ ಮತ ಚಲಾಯಿಸಬೇಡಿ, ಇಂತವರ ಕೈಗೆ ಮತ್ತೆ ಅಧಿಕಾರ ನೀಡಬೇಡಿ ಎಂದು ಕೋರಿದ್ದಾರೆ.
ನಿಮಗೆ ನ್ಯಾಯ ಬೇಕಾದರೆ ಈ ಭ್ರಷ್ಟ ಬಿಜೆಪಿ ಸರ್ಕಾರವನ್ನು ಮೊದಲು ಕಿತ್ತೊಗೆಯಿರಿ. ಈ ಸರ್ಕಾರದಿಂದ ನಿಮಗೆ ಏನೂ ಸಿಕ್ಕಿಲ್ಲ. ಭಾರತ ಸಂವಿಧಾನವು ನಿಮಗೆ ಗೌರವ ನೀಡಿದೆ. ಸಂವಿಧಾನವು ನಿಮಗೆ ಹಕ್ಕುಗಳನ್ನು ನೀಡಿದೆ. ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುವವರನ್ನೇ ನೀವು ಬದಲಿಸಲಿದ್ದೀರಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications