ಛತ್ತೀಸ್ಗಢದಲ್ಲಿ ನಾಯಕತ್ವ ಬದಲಾವಣೆಗೆ ಮುಂದಾದ ಕಾಂಗ್ರೆಸ್?
ರಾಯ್ ಪುರ್, ಜುಲೈ 12: ಮೈತ್ರಿ ಸರ್ಕಾರ ಇದ್ದಾಗ ಸಿಎಂ ಅದಲು ಬದಲು ಮಾಡುವುದನ್ನು ನೋಡಬಹುದು ಆದರೆ, ಏಕೈಕ ಆಡಳಿತ ಪಕ್ಷವಿದ್ದರೂ ಛತ್ತೀಸ್ಗಢದಲ್ಲಿ ನಾಯಕತ್ವ ಬದಲಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿರುವ ಸುದ್ದಿ ಬಂದಿದೆ. ಈ ಬಗ್ಗೆ ಮುಖ್ಯಮಂತಿ ಭೂಪೇಶ್ ಬಘೇಲ್ ಕೂಡಾ ಅಚ್ಚರಿ ವ್ಯಕ್ತಪಡಿಸಿ, ''ನಮ್ಮ ರಾಜ್ಯದಲ್ಲಿ ಮೈತ್ರಿ ಸರ್ಕಾರ ಇಲ್ಲವಲ್ಲ'' ಎಂದಿದ್ದಾರೆ.
ಭೂಪೇಶ್ ಅವರನ್ನು ಬದಲಾಯಿಸಿ, ಆರೋಗ್ಯ ಸಚಿವ ಟಿ.ಎಸ್ ಸಿಂಗ್ ದೇವ್ ರನ್ನು ಸಿಎಂ ಸ್ಥಾನದಲ್ಲಿ ಕೂರಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎಂಬ ಸುದ್ದಿ ಬಂದಿದೆ. ಈ ರೊಟೇಷನ್ ಪದ್ಧತಿ ಬಗ್ಗೆ ಹಾಲಿ ಸಿಎಂ ಭೂಪೇಶ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. 2018ರಲ್ಲೇ ಈ ಬಗ್ಗೆ ಮಾತುಕತೆಯಾಗಿತ್ತು, ಎರಡೂವರೆ ವರ್ಷಗಳ ಬಳಿಕ ಸಿಎಂ ಕುರ್ಚಿ ಬೇಕು ಎಂದು ಸಿಂಗ್ ದೇವ್ ತಮ್ಮ ವಾದ ಮಂಡಿಸಿದ್ದಾರೆ.
ಈ ಗೊಂದಲದ ನಡುವೆ ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸ ನಂ.10 ಜನಪಥ್ ನಿವಾಸದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಬಘೇಲ್ ಇತ್ತೀಚೆಗೆ ಭೇಟಿ ಮಾಡಿ ಉತ್ತರಪ್ರದೇಶದ ಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಈ ಬೆಳವಣಿಗೆ ನಡೆದಿದೆ.

''ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಹೈಕಮಾಂಡ್ ಸೂಚಿಸಿದ್ದರಿಂದ ನಾನು ಪ್ರತಿಜ್ಞಾ ವಿಧಿ ಪಡೆದಿದ್ದೇನೆ, ಈಗ ಬೇರೆ ಸಿಎಂ ಬೇಕೆನಿಸಿ ಸೂಚಿಸಿದರೆ, ಆ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ, ಆದರೆ, ಇಂಥ ವ್ಯವಸ್ಥೆ ಸಾಮಾನ್ಯವಾಗಿ ಮೈತ್ರಿ ಸರ್ಕಾರ ಇರುವ ರಾಜ್ಯಗಳಲ್ಲಿ ಕಂಡು ಬರುತ್ತದೆ. ಛತ್ತೀಸ್ ಗಢದಲ್ಲಿ ಮುಕ್ಕಾಲು ಪಾಲು ಕಾಂಗ್ರೆಸ್ ಶಾಸಕರೇ ಇದ್ದಾರೆ'' ಎಂದು ಬಘೇಲ್ ಪ್ರತಿಕ್ರಿಯಿಸಿದ್ದಾರೆ.
ಅಸ್ಸಾಂ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದ ಬಘೇಲ್ ಈಗ ಮತ್ತೊಮ್ಮೆ ಚುನಾವಣೆ ಉಸ್ತುವಾರಿ ಜವಾಬ್ದಾರಿ ಹೊತ್ತುಕೊಳ್ಳಬೇಕಾಗುತ್ತದೆ. ಹೀಗಾಗಿ, ಸಿಎಂ ಸ್ಥಾನ ಬದಲಾವಣೆಗೆ ಹೈಕಮಾಂಡ್ ಮುಂದಾಗಿದೆ ಎಂದು ಸುದ್ದಿಯೂ ಇದೆ. ಮುಂಬರುವ ಉತ್ತರಪ್ರದೇಶ ಚುನಾವಣೆ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದ್ದು, ಕಾಂಗ್ರೆಸ್ ಪಕ್ಷದ ಖಜಾಂಚಿ ಪವನ್ ಕುಮಾರ್ ಬನ್ಸಾಲ್, ಹಿರಿಯ ಮುಖಂಡ ರಾಜೀವ್ ಶುಕ್ಲಾ ಕೂಡಾ ಇತ್ತೀಚೆಗೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಭೂಪೇಶ್ ಜೊತೆಗೆ ಅಸ್ಸಾಂ ಚುನಾವಣೆ ಉಸ್ತುವಾರಿ ಸಮಿತಿಯಲ್ಲಿದ್ದ ಛತ್ತೀಸ್ ಗಢ ಸಿಎಂ ಸಂಸದೀಯ ಸಲಹೆಗಾರ ರಾಜೇಶ್ ತಿವಾರಿರನ್ನು ಯುಪಿ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ಇನ್ನಷ್ಟು ಮುಖಂಡರು ಉತ್ತರಪ್ರದೇಶದ ಕಡೆಗೆ ವಲಸೆ ಹೋಗುವ ದಿನಗಳು ಆರಂಭವಾಗಿದೆ ಎಂಬ ವರದಿ ಬಂದಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಹಾಕದ ಕಾಂಗ್ರೆಸ್, ಛತ್ತೀಸ್ ಗಢದಲ್ಲಿ ಸಿಎಂ ರೊಟೇಷನ್ ಬಗ್ಗೆ ಬಂದಿರುವ ಸುದ್ದಿಯನ್ನು ಸದ್ಯಕ್ಕೆ ಅಲ್ಲಗೆಳೆದಿದೆ.












Click it and Unblock the Notifications