ಮೋದಿ ಸರ್ಕಾರಕ್ಕೆ ಇಂದಿರಾ, ರಾಜೀವ್ ಮೇಲೇಕೆ ಕೋಪ?
ನವದೆಹಲಿ, ಏ.21: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಮೇಲೆ ನರೇಂದ್ರ ಮೋದಿ ಸರ್ಕಾರಕ್ಕೆ ಏಕೆ ಕೋಪ? ಗಾಂಧಿ ಮನೆತನ ಈ ಮುಖಂಡರ ಹೆಸರಿನಲ್ಲಿ ನೀಡಲಾಗುತ್ತಿದ್ದ ಹಿಂದಿ ದಿವಸ್ ಪುರಸ್ಕಾರವನ್ನು ತೆಗೆದುಹಾಕಿದ್ದೇಕೆ? ಎಂದು ಕಾಂಗ್ರೆಸ್ ಕಿಡಿಕಾರಿದೆ.
'ಹಿಂದಿ ದಿವಸ್' ಅಂಗವಾಗಿ ಇಂದಿರಾ, ರಾಜೀವ್ಗಾಂಧಿ ಹೆಸರಿನಲ್ಲಿ ಎರಡು ಪುರಸ್ಕಾರಗಳನ್ನು ನೀಡಲಾಗುತ್ತಿತ್ತು. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಕೊಕ್ಕೆ ಹಾಕಿದೆ.
ಇಂದಿರಾಗಾಂಧಿ ರಾಜ್ಯಭಾಷಾ ಪುರಸ್ಕಾರ ಹಾಗೂ ರಾಜೀವ್ಗಾಂಧಿ ರಾಷ್ಟ್ರೀಯ ಜ್ಞಾನ-ವಿಜ್ಞಾನ ಮೌಲಿಕ್ ಪುಸ್ತಕ್ ಲೇಖನ್ ಪುರಸ್ಕಾರದ ಹೆಸರುಗಳನ್ನು ನರೇಂದ್ರ ಮೋದಿ ಸರ್ಕಾರ ಬದಲಾಯಿಸಿದೆ. ಇನ್ಮುಂದೆ ರಾಜ್ಯ ಭಾಷಾ ಕೀರ್ತಿ ಪುರಸ್ಕಾರ ಮತ್ತು ರಾಜ್ಯಭಾಷಾ ಗೌರವ್ ಪುರಸ್ಕಾರ ಎಂಬ ಹೆಸರಿನಲ್ಲಿ ಈ ಪ್ರಶಸ್ತಿಗಳನ್ನು ನೀಡಲಿದೆ.

ಈ ಎರಡು ಪ್ರಶಸ್ತಿಗಳನ್ನು ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ದ್ವೇಷದ ರಾಜಕಾರಣ ಮಾಡುತ್ತಿರುವ ಬಿಜೆಪಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಆಗ್ರಹಿಸಿದ್ದಾರೆ.
ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಕಿರಣ್ ರಿಜಿಜು ಇದಕ್ಕೆ ಉತ್ತರಿಸಿ, ಹೆಸರು ಬದಲಾಯಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಈ ಮುಂಚೆ ನಾಲ್ಕು ವಿಭಾಗದಲ್ಲಿ ರಾಜ್ಯಭಾಷಾ ಪ್ರಶಸ್ತಿ ನೀಡಲಾಗುತ್ತಿತ್ತು.
ಈ ಪೈಕಿ ಎರಡನ್ನು ಮಾಜಿ ಪ್ರಧಾನಿಗಳ ಹೆಸರಿನಲ್ಲಿ ಪ್ರದಾನ ಮಾಡಲಾಗುತ್ತಿತ್ತು. ಈಗ ಎರಡು ಪ್ರಶಸ್ತಿಗಳನ್ನು ಮಾತ್ರ ನೀಡಲು ನಿರ್ಧರಿಸಲಾಗಿದ್ದು, ಪ್ರತಿಭಾವಂತರಿಗೆ ತಕ್ಕ ಪುರಸ್ಕಾರ ಲಭಿಸುವಂತೆ ಮಾಡುವುದು ನಮ್ಮ ಉದ್ದೇಶ ಎಂದಿದ್ದಾರೆ.
ಒಟ್ಟಾರೆ, ಭೂ ಸ್ವಾದೀನ್ ಕಾಯ್ದೆ ವಾಕ್ಸಮರದ ಜೊತೆಗೆ ಹಿಂದಿ ದಿವಸ್ ಪ್ರಶಸ್ತಿ ವಿವಾದ ಕೂಡಾ ಚರ್ಚೆಗೊಳಪಡುತ್ತಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications