'ವಂದೇ ಮಾತರಂ' ಗೀತೆಗೆ ಕತ್ತರಿ ಹಾಕಿದ್ದರಿಂದಲೇ ದೇಶ ವಿಭಜಿಸಿತು: ಶಾ
ಕೋಲ್ಕತ್ತಾ, ಜೂನ್ 28: 'ವಂದೇ ಮಾತರಂ ಗೀತೆಯನ್ನು ತುಂಡರಿಸಿದ್ದು ಕಾಂಗ್ರೆಸ್, ಈ ಮೂಲಕ ಕಾಂಗ್ರೆಸ್ ದೇಶವನ್ನು ವಿಭಜಿಸುವುದಕ್ಕೂ ಕಾರಣವಾಯಿತು' ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು.
ವಂದೇ ಮಾತರಂ ಗೀತೆಯ ಕರ್ತೃ ಬಂಕೀಮ್ ಚಂದ್ರ ಚಟ್ಟೋಪಾಧ್ಯಾಯ ಅವರ ಜನ್ಮದಿನಾಚರಣೆ(ಜೂನ್ 27) ನಿಮಿತ್ತ ಕೋಲ್ಕತ್ತದಲ್ಲಿ ಸಂಮಸ್ಮರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ವಂದೇ ಮಾತರಂ ಗೀತೆಯು ಈ ದೇಶದ ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತದೆ. ಈ ಗೀತೆಗೆ ಕೋಮು ಬಣ್ಣ ಬಳಿಯುವುದು ಸರಿಯಲ್ಲ. ಈ ಹಾಡು ಯಾವುದೇ ಒಂದು ಧರ್ಮಕ್ಕಾಗಲೀ, ಜನಾಂಗಕ್ಕಾಗಲೀ ಸೀಮಿತವಾಗಿಲ್ಲ' ಎಂದು ಅವರು ಹೇಳಿದರು.
'ದೇಶದ ವೈಭವವನ್ನು ವಂದೇ ಮಾತರಂ ಗೀತೆ ಪ್ರಚುರಪಡಿಸುತ್ತದೆ. ಆದರೆ ಇದು ಹಿಂದುಗಳ ಪರವಾಗಿದೆ ಎಂದು ಅದರ ಕೆಲವು ಪ್ಯಾರಾಗಳನ್ನೇ ಕಾಂಗ್ರೆಸ್ ಕತ್ತರಿಸಿದೆ. ಮುಸ್ಲಿಮರ ಓಲೈಕೆಗಾಗಿ ಕಾಂಗ್ರೆಸ್ ಒಂದೇ ಮಾತರಂ ಅನ್ನು ವಿಭಜಿಸಿತು. ಕಾಂಗ್ರೆಸ್ ನಾಯಕರು ಈ ತಪ್ಪನ್ನು ಮಾಡದೆ ಇದ್ದಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ ಎಂದು ಶಾ ಹೇಳಿದ್ದಾರೆ.

'ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ತಾತ್ಕಾಲಿಕ ಸರ್ಕಾರ ರಚಿಸಿದ್ದಾಗ, ವಂದೇ ಮಾತರಂ ಅನ್ನು ರಾಷ್ಟ್ರಗೀತೆಯನ್ನಾಗಿ ಒಪ್ಪಿಕೊಳ್ಳಲಾಗಿತ್ತು. ಆದರೆ ಇಸ್ಲಿಮರ ಭಾವನೆಗಳಿಗೆ ನೋವಾಗುತ್ತದೆ ಎಂಬ ಸಬೂಬು ನೀಡಿ ಈ ಗೀತೆಯ ಎರಡೇ ಪ್ಯಾರಾಗಳನ್ನು ಹಾಡುವಂತಾಯಿತು' ಎಂದು ಅವರು ಹೇಳಿದರು.
'ಕೆಲವು ಇತಿಹಾಸಜ್ಞರು ಖಿಲಾಫತ್ ಚಳವಳಿ, ಬ್ರಿಟಿಷರ ಒಡೆದು ಆಳುವ ನೀತಿ, ಮುಸ್ಲಿಂ ಲೀಗ್ ನ ದ್ವೈರಾಷ್ಟ್ರ ಪದ್ಧತಿ ಗಳನ್ನು ತೆಗಳುತ್ತಾರೆ. ಆದರೆ ನಾನು ಹೇಳುತ್ತೇನೆ ಇವೆಲ್ಲಕ್ಕಿಂತ ಹೆಚ್ಚಾಗಿ ದೇಶವನ್ನು ವಿಭಜಿಸುವುದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ಸಿಗರ ಅಲ್ಪಸಂಖ್ಯಾತ ಓಲೈಕೆಯ ರಾಜಕೀಯ' ಎಂದು ಶಾ ಗುಡುಗಿದರು.












Click it and Unblock the Notifications