ಲಾಕ್ಡೌನ್ನಿಂದ 14-29 ಲಕ್ಷ ಕೊರೊನಾ ಪ್ರಕರಣ ತಡೆದಿದ್ದು ಹೇಗೆ?: ಕಾಂಗ್ರೆಸ್ ಪ್ರಶ್ನೆ
ನವದೆಹಲಿ, ಸೆಪ್ಟೆಂಬರ್ 16: ರಾಷ್ಟ್ರವ್ಯಾಪಿ ಲಾಕ್ಡೌನ್ನಿಂದ ಸುಮಾರು 29 ಲಕ್ಷದವರೆಗೂ ಕೊರೊನಾ ವೈರಸ್ ಪ್ರಕರಣಗಳನ್ನು ತಡೆಯಲು ಸಾಧ್ಯವಾಗಿದೆ ಮತ್ತು ಲಾಕ್ ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರ ಸಾವಿನ ದಾಖಲೆಗಳು ಲಭ್ಯವಿಲ್ಲ ಎಂಬ ಕೇಂದ್ರ ಸರ್ಕಾರದ ಹೇಳಿಕೆಗಳನ್ನು ಕಾಂಗ್ರೆಸ್ ಹಿರಿಯ ಮುಖಂಡ ಆನಂದ್ ಶರ್ಮಾ ಪ್ರಶ್ನಿಸಿದ್ದಾರೆ.
ಹಿಮಾಚಲ ಪ್ರದೇಶದ ಸಂಸದರಾಗಿರುವ ಆನಂದ್ ಶರ್ಮಾ, ಹತ್ತು ಲಕ್ಷ ಜನರಿಗೆ 55 ಜನರಂತೆ ಮಾತ್ರ ಮರಣ ಪ್ರಮಾಣ ಭಾರತದಲ್ಲಿದೆ. ಇದು ಜಗತ್ತಿನಲ್ಲಿಯೇ ಅತಿ ಕಡಿಮೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಆದರೆ ಪ್ರತಿ ಹತ್ತು ಲಕ್ಷಕ್ಕೆ ಅತ್ಯಂತ ಕಡಿಮೆ ಮರಣ ಪ್ರಮಾಣ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ದಾಖಲಾಗಿವೆ ಎಂದಿದ್ದಾರೆ.
ಲಾಕ್ಡೌನ್ ನಿರ್ಧಾರವು 14-29 ಲಕ್ಷ ಕೊರೊನಾ ವೈರಸ್ ಪ್ರಕರಣಗಳನ್ನು ತಡೆದಿದೆ ಎಂದು ಗೃಹ ಸಚಿವಾಲಯ ಹೇಳಿದೆ. ಇದು ಸಣ್ಣ ಸಂಖ್ಯೆಯಲ್ಲ. ಈ ಹೇಳಿಕೆಯ ಹಿಂದಿರುವ ವೈಜ್ಞಾನಿಕ ಆಧಾರವೇನು? ಎಂದು ಪ್ರಶ್ನಿಸಿದ ಅವರು, ಆರೋಗ್ಯ ಸೇವೆಯಲ್ಲಿರುವವರು ಎದುರಿಸಿದ ತಾರತಮ್ಯದ ಬಗ್ಗೆ ಪ್ರಸ್ತಾಪಿಸಿದರು.

ಭಾರತದಲ್ಲಿನ ವಲಸೆ ಕಾರ್ಮಿಕರ ಸಂಕಷ್ಟದ ಚಿತ್ರಣಗಳನ್ನು ನಾವು ನಿರಾಕರಿಸಲಾಗುವುದಿಲ್ಲ. ಕ್ವಾರೆಂಟೈನ್ ಕೇಂದ್ರಗಳನ್ನು ಮೊದಲೇ ನಿರ್ಮಿಸಿದ್ದರೆ ಕಾಯಿಲೆಯು ಹಳ್ಳಿಗಳನ್ನು ತಲುಪುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ರಾಜ್ಯಗಳ ಜತೆ ಕೇಂದ್ರ ಸರ್ಕಾರ ಮಾತನಾಡಬೇಕು. ಶೇ 70ರಷ್ಟು ಐಸಿಯು ಹಾಸಿಗೆಗಳು ಖಾಸಗಿ ವಲಯದಲ್ಲಿವೆ ಎಂದಿದ್ದಾರೆ. ವಲಸೆ ಕಾರ್ಮಿಕರ ಮಾಹಿತಿಗಾಗಿ ರಾಷ್ಟ್ರೀಯ ಡೇಟಾಬೇಸ್ ಸೃಷ್ಟಿಸಬೇಕಿದೆ. ಭಾರತದ ದುರದೃಷ್ಟವೆಂದರೆ ಸರ್ಕಾರದ ಬಳಿ ವಲಸೆ ಕಾರ್ಮಿಕರ ದತ್ತಾಂಶಗಳಿಲ್ಲ. ಅಂದರೆ ಅವರಿಗೆ ಪರಿಹಾರವೂ ಇಲ್ಲ. ನಿಮ್ಮಬಳಿ ಏಕೆ ದಾಖಲೆಗಳಿಲ್ಲ? ಪ್ರತಿ ರಾಜ್ಯ ಸರ್ಕಾರಕ್ಕೂ ತಮ್ಮಲ್ಲಿ ಮೃತಪಟ್ಟವರ ಬಗ್ಗೆ ತಿಳಿದಿದೆ ಎಂದಿದ್ದಾರೆ.












Click it and Unblock the Notifications