ಸುಷ್ಮಾ ಹೇಳಿಕೆಗೆ ರಾಜಕೀಯ ಬಣ್ಣ ಬಳಿಯುತ್ತಿರುವ ಕಾಂಗ್ರೆಸ್
ಸುಷ್ಮಾ ಸ್ವರಾಜ್ ವಿರುದ್ಧ ಕಾಂಗ್ರೆಸ್ ಟೀಕೆ. ಇರಾಕ್ ನಲ್ಲಿ 39 ಭಾರತೀಯರು ನಾಪತ್ತೆಯಾಗಿಲ್ಲ ಎಂದ ಮಾಧ್ಯಮ. ಈ ವಿಚಾರದಲ್ಲಿ ದೇಶಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ಸುಷ್ಮಾ ವಿರುದ್ಧ ಕಾಂಗ್ರೆಸ್ ಟೀಕೆ.
ನವದೆಹಲಿ, ಜುಲೈ 22: ಇರಾಕ್ ನ ಮೊಸೂಲ್ ನಗರವು ಐಎಸ್ಐಎಸ್ ಉಗ್ರರಿಂದ ಮುಕ್ತವಾದ ನಂತರ, ಅಲ್ಲಿದ್ದ 39 ಭಾರತೀಯರು ಕಣ್ಮರೆಯಾಗಿದ್ದು, ಅವರ ಹುಡುಕಾಟದಲ್ಲಿ ಭಾರತ ಸರ್ಕಾರ ನಿರತವಾಗಿದೆ ಎಂದು ಹೇಳಿದ್ದ ಸುಷ್ಮಾ ಸ್ವರಾಜ್ ಅವರ ಹೇಳಿಕೆ ಇದೀಗ ರಾಜಕೀಯ ರಂಗು ಪಡೆದಿದೆ.
ಜನಪ್ರಿಯ ಮಾಧ್ಯಮವೊಂದು ತನ್ನ ತಂಡವನ್ನು ಮೊಸೂಲ್ ಗೆ ಕಳುಹಿಸಿದ್ದು, ಅಲ್ಲಿ ಯಾವುದೇ ಭಾರತೀಯರು ಕಾಣೆಯಾಗಿಲ್ಲ ಎಂಬ ವರದಿಯನ್ನು ನೀಡಿದ್ದು, ಇದನ್ನು ತನ್ನ ಟೀಕೆಗೆ ಉಪಯೋಗಿಸಿಕೊಂಡಿರುವ ಕಾಂಗ್ರೆಸ್, ಸುಷ್ಮಾ ಸ್ವರಾಜ್ ಅವರು ದೇಶದ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆಂದು ಹೇಳಿದೆ.

ಆಗಿದ್ದೇನು?
ಈ ಹಿಂದಿನ ಕೆಲವಾರು ವರ್ಷಗಳಿಂದ ಮೊಸೂಲ್ ನಲ್ಲಿ ತನ್ನ ಅಸ್ತಿತ್ವ ಕಂಡುಕೊಂಡಿದ್ದ ಐಎಸ್ಐಎಸ್ ಉಗ್ರರನ್ನು ಹೊಡೆದೋಡಿಸುವಲ್ಲಿ ಇರಾಕ್ ಸೇನೆಯು ಇತ್ತೀಚೆಗೆ ಯಶಸ್ವಿಯಾಗಿತ್ತು.
ಈ ಹಿನ್ನೆಲೆಯಲ್ಲಿ, ಹೇಳಿಕೆ ನೀಡಿದ್ದ ಸುಷ್ಮಾ ಸ್ವರಾಜ್, ಕಳೆದ ಮೂರು ವರ್ಷಗಳಿಂದ ಇರಾಕ್ ನಲ್ಲಿದ್ದ ಸುಮಾರು 39 ಭಾರತೀಯರು ಕಾಣೆಯಾಗಿದ್ದಾರೆ. ಅವರನ್ನು ಮೊಸೂಲ್ ನಲ್ಲಿರುವ ಜೈಲಿನಲ್ಲಿಡಲಾಗಿತ್ತು ಎಂಬ ಮಾಹಿತಿಯಿದೆ. ಆದರೆ, ಐಎಸ್ಐಎಸ್ ಉಗ್ರರು ಆ ಜೈಲನ್ನು ನಾಶಪಡಿಸಿದ್ದು, ಅದರಲ್ಲಿದ್ದ ಭಾರತೀಯರು ಏನಾದರೆಂದು ತಿಳಿದು ಬಂದಿಲ್ಲ. ಅಲ್ಲದೆ, ಅವರು ಈಗ ಐಎಸ್ಐಎಸ್ ಹಾಗೂ ಇರಾಕ್ ಸೇನೆಯ ನಡುವೆ ಯುದ್ಧ ನಡೆಯುತ್ತಿರುವ ಬಾದುಷ್ ಗೆ ತೆರಳಿರುವ ಶಂಕೆಯಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದರು.
ಈಗ ಕಾಂಗ್ರೆಸ್ ಹೇಳುತ್ತಿರುವುದೇನು?
ಮಾಧ್ಯಮವೊಂದರ ವರದಿಯು ಸುಷ್ಮಾ ಸ್ವರಾಜ್ ಅವರ ಹೇಳಿಕೆ ವ್ಯತಿರಿಕ್ತವಾಗಿರುವುದರಿಂದ ಉಗ್ರವಾಗಿರುವ ಕಾಂಗ್ರೆಸ್, ಸುಷ್ಮಾ ಅವರನ್ನು ಟೀಕಿಸಲು ಶುರು ಮಾಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಜ್ವಾ, ''ಇರಾಕ್ ನಲ್ಲಿರುವ ಭಾರತೀಯರ ವಿಚಾರದಲ್ಲಿ ದೇಶಕ್ಕೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಸುಷ್ಮಾ ವಿರುದ್ಧ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತೇವೆ'' ಎಂದು ಹೇಳಿದ್ದಾರೆ.












Click it and Unblock the Notifications