ಶ್ರೀರಾಮ ಮಂದಿರ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಭಾರತದಲ್ಲಿ ಈಗ ಶ್ರೀರಾಮ ಮಂದಿರ ಉದ್ಘಾಟನೆ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಈ ವಿಚಾರ ಈಗ ಜತ್ತಿನಾದ್ಯಂತ ಟ್ರೆಂಡ್ ಆಗಿದೆ. ಅದರಲ್ಲೂ ಹಲವು ಶತಮಾನಗಳ ಬಳಿಕ ಈ ಕಾರ್ಯ ನನಸಾಗಿದೆ. ಹೀಗಿದ್ದಾಗ ಸಿಎಂ ಸಿದ್ದರಾಮಯ್ಯ ಕೂಡ ಶ್ರೀರಾಮ ಮಂದಿರ ಉದ್ಘಾಟನೆ ಮಾಡಿ ಮಾತನಾಡಿದ್ದಾರೆ. ಹಾಗೇ ತಮ್ಮ ದೈವ ಭಕ್ತಿ ಕುರಿತು ಕೂಡ ಸ್ಪಷ್ಟನೆ ನೀಡಿದ್ದಾರೆ, ಕರ್ನಾಟಕದ ಸಿಎಂ.
ಹೌದು, ಬಿದರಹಳ್ಳಿ ಹೋಬಳಿಯಲ್ಲಿ ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿರುವ ಸಕುಟುಂಬ ಸಮೇತ ರಾಮ ಸೀತ ಲಕ್ಷ್ಮಣ ದೇವಾಲಯ & 33 ಅಡಿ ಎತ್ತರ ಏಕಶಿಲೆ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದಾರೆ. ಹಾಗೇ ಉದ್ಘಾಟನೆ ಬಳಿಕ ಮಹಾ ಕುಂಭಾಭಿಷೇಕದಲ್ಲಿ ಪಾಲ್ಗೊಂಡಿದ್ದ ಸಿಎಂ ಶ್ರೀರಾಮನ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಸಿಎಂ ಸಿದ್ದರಾಮಯ್ಯ ಅವರಿಂದು ಪ್ರಭು ಶ್ರೀರಾಮನ ಬಗ್ಗೆ ಹೇಳಿದ್ದು ಏನು? ಮುಂದೆ ಓದಿ.

ನಾನು ಕೂಡ ದೈವ ಭಕ್ತ ಆಗಿದ್ದೇನೆ!
ಅಧರ್ಮದ & ಅಮಾನವೀಯ ಕೆಲಸ ಮಾಡಿ ನಾಟಕೀಯ ಪೂಜೆ ಮಾಡಿದರೆ ಆ ಪೂಜೆಯನ್ನು ದೇವರು ಒಪ್ಪಿಕೊಳ್ಳಲ್ಲ. ಸಕಲ ಜೀವಗಳೂ ಸಮಾನತೆ, ಪ್ರೀತಿಯಿಂದ ಬಾಳಬೇಕು ಎನ್ನುವುದು ಆದರ್ಶ ಪುರುಷ ಶ್ರೀರಾಮನ ಆಶಯ. ನಾನು ನಾಸ್ತಿಕನಲ್ಲ - ಆಸ್ತಿಕ ನಮ್ಮೂರಲ್ಲೂ ರಾಮನ ಗುಡಿ ಕಟ್ಟಿಸಿದ್ದೇನೆ. ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ರಾಮನ ಗುಡಿ ಇವೆ. ಪ್ರತಿಯೊಬ್ರೂ ಅವರ ನಂಬಿಕೆಯಂತೆ ರಾಮನನ್ನು ಪೂಜಿಸುತ್ತಾರೆ ಹಾಗೂ ಗುಡಿ ಕಟ್ಟುತ್ತೇವೆ, ಪೂಜಿಸುತ್ತೇವೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶ್ರೀರಾಮ ಸಮಾಜಮುಖಿ ಆಗಿದ್ದರು
ಯಾವುದೇ ಧರ್ಮ ಜಾತಿ ಮತ್ತು ಧರ್ಮ ಆಧಾರದ ಮನುಷ್ಯ ದ್ವೇಷವನ್ನ ಹೇಳಲ್ಲ. ಶ್ರೀರಾಮ ಸಮಾಜಮುಖಿ ಆಗಿದ್ದರು. ಒಬ್ಬ ಮಡಿವಾಳನ ಮಾತಿಗೆ ಬೆಲೆ ಕೊಟ್ಟರು. ಪಿತೃವಾಕ್ಯ ಪಾಲನೆಗೆ ವನ ವಾಸಕ್ಕೆ ಹೋದರು. ಶ್ರೀರಾಮ, ಲಕ್ಷ್ಮಣ, ಸೀತೆ, ಆಂಜನೇಯರ ಬೇರ್ಪಡಿಸಲು ಸಾಧ್ಯ ಇಲ್ಲ. ಇವರೆಲ್ಲಾ ಸಕುಟುಂಬಸ್ಥರು ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ ಅವರು, ಕುವೆಂಪು ಅವರ ಸರ್ವ ಜನಾಂಗದ ಶಾಂತಿ ತೋಟ ಎಂಬ ಆಶಯ ಶ್ರೀರಾಮನ ಆದರ್ಶ & ವ್ಯಕ್ತಿತ್ವದಲ್ಲಿದೆ ಎಂದರು. ಮನುಷ್ಯ ಮನುಷ್ಯನ ದ್ವೇಷಿಸಬಾರದು ಎಂಬುದೇ ರಾಮಾಯಣ ಮಹಾಭಾರತದ ಸಂದೇಶ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಾಲ್ಮೀಕಿ ಅವರ ಬಗ್ಗೆ ಸ್ಮರಣೆ
ಪರಿಶಿಷ್ಠ ಪಂಗಡ ಸಮುದಾಯದ ವಾಲ್ಮೀಕಿ ಅವ್ರು ರಾಮಾಯಣವನ್ನ ಬರೆದು ವಿಶ್ವಕ್ಕೆ ಕೊಟ್ರು, ದೇವರು ನಮ್ಮ ಆತ್ಮ & ಶರೀರದಲ್ಲೇ ಇದ್ದಾನೆ ಎಂದು ಬಸವಣ್ಣ ಆವರು ನುಡಿದರು. ದೇಹವೇ ದೇಗುಲ ಎನ್ನುವ ಸಂದೇಶವನ್ನ ಮನುಷ್ಯ ಪ್ರಪಂಚಕ್ಕೆ ನೀಡಿದ್ರು. ಜೈ ಶ್ರೀರಾಮ್ ಎನ್ನುವುದು ಯಾರದ್ದೋ ಖಾಸಗಿ ಸ್ವತ್ತಲ್ಲ ಅದು ಪ್ರತಿಯೊಬ್ಬ ಭಕ್ತರ ಸ್ವತ್ತು ಜೈ ಶ್ರೀರಾಮ್ ಎಂಬ ಘೋಷಣೆ ಮೂಲಕ ನನ್ನ ಮಾತು ಮುಗಿಸುತ್ತೇನೆ ಎಂದರು ಸಿಎಂ ಸಿದ್ದರಾಮಯ್ಯ.

ಕರ್ನಾಟಕದಲ್ಲೂ ರಾಮ ದೇಗುಲ ಉದ್ಘಾಟನೆ
ಎಲ್ಲಿ ಕೇಳಿದರೂ ಶ್ರೀರಾಮನ ಹೆಸರೇ ಕಿವಿಗೆ ಬೀಳುತ್ತಿದೆ. ಈ ವೇಳೆ, ಇಡೀ ದೇಶಕ್ಕೆ ದೇಶವೇ ರಾಮನ ಹೆಸರಲ್ಲಿ ಮಿಂದು ಹೋಗಿದೆ. 'ರಾಮ ಬಂದರೆ ದೀಪಾವಳಿ' ಅಂತಾ ಇಂದು ದೀಪ ಬೆಳಗಿಸಿ ಸಂಭ್ರಮಿಸಲು ಜನ ಕೂಡ ಸಿದ್ಧತೆ ನಡೆಸಿದ್ದಾರೆ. ಅಯೋಧ್ಯೆಯಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ಜನ ಕಾದಿದ್ದರು. ಇದೀಗ ಅದೆಲ್ಲವೂ ಅದ್ಧೂರಿಯಾಗಿ ನಡೆದು ಹೋಗಿದೆ. ಅದೇ ರೀತಿ ಕರ್ನಾಟಕದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರು ನೂತನ ಸೀತಾರಾಮ ದೇಗುಲ ಉದ್ಘಾಟನೆ ಮಾಡಿದ್ದಾರೆ.
ಒಟ್ನಲ್ಲಿ ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ಕೇಳಿಬರುವ ಮಾತಿಗೆ ತಕ್ಕ ಉತ್ತರ ನೀಡಿದ್ದಾರೆ. ಅಲ್ಲದೆ ತಾವು ನಾಸ್ತಿಕರಲ್ಲ, ಆಸ್ತಿಕ ಎಂಬ ವಿಚಾರವನ್ನು ಕೂಡ ಅವರು ತಿಳಿಸಿದ್ದಾರೆ. ಅಲ್ಲದೆ ಶ್ರೀರಾಮನ ಬಗ್ಗೆ ತಮಗಿರುವ ಭಕ್ತಿಯನ್ನ ಕೂಡ ವ್ಯಕ್ತಪಡಿಸಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಆದರೆ ಈ ಬಗ್ಗೆ ಬಿಜೆಪಿ ನಾಯಕರು ಯಾವ ರೀತಿ, ರಿಯಾಕ್ಷನ್ ಕೊಡ್ತಾರೆ ಅಂತಾ ಕಾದು ನೋಡಬೇಕಿದೆ.












Click it and Unblock the Notifications