ಕೇಂದ್ರ ಸರ್ಕಾರದ ವಿರುದ್ಧ ಸಿಜೆ ಲೋಧಾ ಚಾಟಿ
ನವದೆಹಲಿ,ಜು.2: ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸ್ಥಾನಕ್ಕೆ ಮಾಜಿ ಸಾಲಿಸಿಟರ್ ಜನರಲ್ ಗೋಪಾಲ ಸುಬ್ರಮಣಿಯಂ ಅವರನ್ನು ನೇಮಿಸುವಂತೆ ಮಾಡಲಾಗಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದಕ್ಕೆ ಈಗ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ಮೋದಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ನನ್ನ ಅರಿವಿಗೆ ಬಾರದಂತೆ ಏಕಪಕ್ಷೀಯವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರ್.ಎಂ. ಲೋಧಾ ಅವರು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದಾಗಿ ಮೋದಿ ಸರ್ಕಾರಕ್ಕೆ ತೀವ್ರ ಮುಜುಗರಕ್ಕೆ ಈಡಾಗಿದ್ದು ಸುಬ್ರಮಣಿಯಂ ವಿವಾದ ಈಗ ನ್ಯಾ. ಲೋಧಾ ಮತ್ತು ಮೋದಿ ಸರ್ಕಾರದ ಬಹಿರಂಗ ಜಟಾಪಟಿಗೆ ಕಾರಣವಾಗಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಎಸ್.ಚೌಹಾಣ್ರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಹಾಗೂ ನ್ಯಾಯಮೂರ್ತಿಗಳ ನೇಮಕಾತಿ ಸಮಿತಿಯ ನಾಲ್ವರು ಸದಸ್ಯರು ಪ್ರತಿಭಾವಂತ ನಾಲ್ವರ ಹೆಸರನ್ನು ಸುಪ್ರೀಂಕೋರ್ಟ್ಗೆ ನ್ಯಾಯಧೀಶರನ್ನಾಗಿ ನೇಮಿಸುವಂತೆ ಮೇ 6ರಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದೆವು.
ನಾನು ವಿದೇಶದಲ್ಲಿದ್ದಾಗ ನಾವು ಶಿಫಾರಸು ಮಾಡಿದ್ದ ಮೂವರ ಹೆಸರನ್ನು ಪುರಸ್ಕರಿಸಿ ಸುಬ್ರಮಣಿಯಂ ನೇಮಕಾತಿ ತಿರಸ್ಕರಿಸಿ ಸರ್ಕಾರವು ಶಿಫಾರಸನ್ನು ನೇಮಕಾತಿ ಸಮಿತಿಗೆ ವಾಪಸು ಕಳಿಸಿತು.ನನ್ನ ಅಭಿಪ್ರಾಯವನ್ನು ಕೇಳದೇ ಏಕಪಕ್ಷೀಯವಾಗಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮ ಒಳ್ಳೆಯ ಬೆಳವಣಿಗೆಯಲ್ಲ ಎಂದು ನ್ಯಾ. ಲೋದಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏನಿದು ವಿವಾದ ?
ನ್ಯಾ.ಗೋಪಾಲ್ ಸುಬ್ರಮಣಿಯಂ ಸೇರಿದಂತೆ ಮೂವರನ್ನು ಸುಪ್ರೀಕೋರ್ಟ್ ನ್ಯಾಯಮೂರ್ತಿಗಳನ್ನು ನೇಮಿಸುವಂತೆ ಸುಪ್ರೀಂಕೋರ್ಟ್ನ ಕೊಲಿಜಿಯಂ (ನ್ಯಾಯಾಧೀಶರ ಆಯ್ಕೆ ಸಮಿತಿ) ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಕೋಲ್ಕತ್ತ ಹೈ ಕೋರ್ಟ್ನ ಮುಖ್ಯ ನ್ಯಾ. ಅರುಣ್ ಮಿಶ್ರಾ, ಓರಿಸ್ಸಾ ಹೈ ಕೋರ್ಟ್ನ ಮುಖ್ಯ ನ್ಯಾ. ಅದರ್ಶ ಕುಮಾರ್ ಗೋಯಲ್, ಹಿರಿಯ ವಕೀಲ ರೋಹಿಗ್ಟನ್ ನಾರಿಮನ್ ಹೆಸರನ್ನು ಪುರಸ್ಕರಿಸಿ ಸುಬ್ರಮಣಿಯಂ ನೇಮಕಾತಿ ತಿರಸ್ಕರಿಸಿ ಕೊಲಿಜಿಯಂಗೆ ಸರ್ಕಾರ ಶಿಫಾರಸು ಮಾಡಿತು.ಕೇಂದ್ರ ಸರ್ಕಾರ ಸುಬ್ರಮಣಿಯಂ ಹೆಸರನ್ನು ತಿರಸ್ಕರಿಸಿದ್ದಕ್ಕೆ ಈಗ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ಮೋದಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಸಿಜೆಗೆ ಗೋಪಾಲ್ ಪತ್ರ
ತನ್ನ ಹೆಸರನ್ನು ತಿರಸ್ಕರಿಸಿದ್ದಕ್ಕೆ ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧನ ವ್ಯಕ್ತಪಡಿಸಿದ್ದ ಸುಬ್ರಮಣಿಯಂ 'ಸರ್ಕಾರ ನನ್ನ ಮೇಲೆ ಹಗೆ ಸಾಧಿಸುತ್ತಿದೆ. ನ್ಯಾಯಾಧೀಶ ಹುದ್ದೆ ನನಗೆ ಬೇಡವೇ ಬೇಡ' ಎಂದು ಮುಖ್ಯ ನ್ಯಾಯಾಧೀಶರಿಗೆ ನ್ಯಾ.ಗೋಪಾಲ್ ಸುಬ್ರಮಣಿಯಂ ಪತ್ರ ಬರೆದಿದ್ದರು.

ಸುಬ್ರಮಣಿಯಮ್ ಆರೋಪ
ಸಿಬಿಐ ಮತ್ತು ಗುಪ್ತಚರದಳ ವರದಿ ಬಗ್ಗೆ ಕಿಡಿಕಾರಿದ್ದ ಸುಬ್ರಮಣಿಯಮ್ " ನಾನು ಸುಪ್ರೀಕೋರ್ಟ್ ನ್ಯಾಯಮೂರ್ತಿಯಾಗುವುದನ್ನು ತಡೆಯುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಸಿಬಿಐನಿಂದ ಈ ವರದಿ ತರಿಸಿಕೊಂಡಿತ್ತು ಎಂದು ಆರೋಪಿಸಿದ್ದರು.

ನೋ ಕಮೆಂಟ್ಸ್:
ಲೋಧಾ ಹೇಳಿಕೆಯ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್, 'ನೋ ಕಮೆಂಟ್ಸ್.. ನೋ ನೋ' ಎಂದಷ್ಟೆ ಪ್ರತಿಕ್ರಿಯೆ ನೀಡಿದ್ದಾರೆ.

ಅಫ್ಜಲ್ ನೇಣಿಗೇರಿಸಿದ ಕ್ರಮ ಮಾನವ ಹಕ್ಕು ಉಲ್ಲಂಘನೆ:
ಉಗ್ರ ಅಫ್ಜಲ್ ಗುರುವನ್ನು ಸರ್ಕಾರ ಗಲ್ಲಿಗೇರಿಸಿದ್ದಕ್ಕೆ ಈ ಹಿಂದೆ ಪ್ರತಿಕ್ರಿಯೆ ನೀಡಿದ ಗೋಪಾಲ್ ಸುಬ್ರಮಣಿಯಂ" ಅಫ್ಜಲ್ ಗುರುವನ್ನು ಗೌಪ್ಯವಾಗಿ ನೇಣಿಗೇರಿಸಿದ ಸರ್ಕಾರದ ಕ್ರಮವು ಮಾನವ ಹಕ್ಕು ಉಲ್ಲಂಘನೆ "ಎಂದು ಟೈಮ್ಸ್ ಆಫ್ ಇಂಡಿಯಾಕ್ಕೆ ಫೆ.2013ರಲ್ಲಿನೀಡಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.












Click it and Unblock the Notifications