ಬಂಧನವಾಗಿ 3 ವರ್ಷವಾದರೂ ನಡೆಯದ 120 ಆದಿವಾಸಿಗಳ ವಿಚಾರಣೆ
ನವದೆಹಲಿ, ಸೆಪ್ಟೆಂಬರ್ 22: ಛತ್ತೀಸಗಡದ ಬುರಕಾಪಲ್ ಗ್ರಾಮದ 120 ಆದಿವಾಸಿಗಳು ಭಯೋತ್ಪಾದನಾ ವಿರೋಧಿ ಕಾಯ್ದೆಯಡಿ ಮೂರು ವರ್ಷದಿಂದ ಜೈಲಿನಲ್ಲಿದ್ದಾರೆ. ಆದರೆ ಅವರ ಪ್ರಕರಣದ ವಿಚಾರಣೆಯೇ ಇನ್ನೂ ಶುರುವಾಗಿಲ್ಲ.
ಸುಕ್ಮಾ ಅರಣ್ಯದ ಸಣ್ಣ ಗ್ರಾಮ ಬುರಕಾಪಲ್, ಭದ್ರತಾ ಪಡೆಗಳ ಶಿಬಿರದಿಂದ ಕೇವಲ 200 ಮೀಟರ್ ದೂರದಲ್ಲಿದೆ. ಈ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುವುದು ಮಹಿಳೆಯರು ಮತ್ತು ಆಟವಾಡುತ್ತರುವ ಮಕ್ಕಳು. ಇಲ್ಲಿ ಕೆಲವೇ ಮಂದಿ ಪುರುಷರಿದ್ದಾರೆ. ಆದರೆ ಅವರು ಹೊರಗಿನ ಜನರ ಜತೆ ಮಾತನಾಡಲು ಹಿಂಜರಿಯುತ್ತಾರೆ.
2017ರ ಏಪ್ರಿಲ್ನಲ್ಲಿ ಈ ಗ್ರಾಮದಿಂದ 100 ಮೀಟರ್ನಷ್ಟು ದೂರದಲ್ಲಿ ಸಿಆರ್ಪಿಎಫ್ನ 74ನೇ ಬೆಟಾಲಿಯನ್ನ 24 ಯೋಧರು ಮಾವೋವಾದಿಗಳ ಭಯಾನಕ ದಾಳಿಗೆ ಬಲಿಯಾಗಿದ್ದರು. 2010ರಲ್ಲಿ ಸಿಆರ್ಪಿಎಫ್ನ 76 ಯೋಧರನ್ನು ಕೊಂದ ಭೀಕರ ಘಟನೆ ಬಳಿಕ ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ಮತ್ತೊಂದು ಅಮಾನುಷ ದಾಳಿ ಇದಾಗಿತ್ತು. ಮುಂದೆ ಓದಿ.

ಆರು ಗ್ರಾಮಗಳ ಜನರು
ಬುರಕಾಪಲ್ ಗ್ರಾಮದ ಸಮೀಪ ನಡೆಯುತ್ತಿದ್ದ ದೋರ್ನಾಪಲ್-ಜಗರ್ಗೊಂಡ ರಸ್ತೆ ನಿರ್ಮಾಣ ಕಾರ್ಯಕ್ಕೆ ಈ ಯೋಧರು ಕಾವಲು ಕಾದಿದ್ದರು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಬುರಕಾಪಲ್, ಗೊಂಡಹಳ್ಳಿ, ಚಿಂಟಗುಫಾ, ತಾಲ್ಮೆಟ್ಲಾ, ಕೊರೈಗುಂಡುಮ್ ಮತ್ತು ತೊಂಗುಡ ಗ್ರಾಮಗಳ 120 ಆದಿವಾಸಿಗಳ ವಿರುದ್ಧ ಯುಎಪಿಎ ಮತ್ತು ಐಪಿಸಿಯ ಇತರೆ ಸೆಕ್ಷನ್ಗಳ ಅಡಿ ಚಿಂಟಗುಫಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಊರಲ್ಲಿದ್ದವರ ಮೇಲೆ ಕೇಸ್
ದಾಳಿ ನಡೆದ ಕೆಲವು ದಿನಗಳ ಬಳಿಕ ಬುರಕಾಪಲ್ನ 37 ಆದಿವಾಸಿಗಳನ್ನು ಪೊಲೀಸರು ಎಳೆದೊಯ್ದರು. ಹಳ್ಳಿಯಲ್ಲಿದ್ದ ಪ್ರತಿ ಪುರುಷರು, ಕೆಲವು ತರುಣರ ಮೇಲೆಯೂ ಪ್ರಕರಣ ದಾಖಲಿಸಲಾಗಿತ್ತು. ನಗರಗಳಿಗೆ ಹೋಗಿ ದುಡಿಯುತ್ತಿರುವವರ ಹೆಸರನ್ನು ಮಾತ್ರ ಸೇರಿಸಿರಲಿಲ್ಲ. ಈ ದಾಳಿಯಲ್ಲಿ ಒಬ್ಬರೂ ಭಾಗಿಯಾಗದೆ ಇದ್ದರೂ, ಮಾವೋವಾದಿಗಳೆಂದು ಆರೋಪಿಸಿ ಕಠಿಣವಾದ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಬಂಧಿಸಲಾಗಿತ್ತು ಎಂದು ಗ್ರಾಮದ ಸರ್ಪಂಚ್ ತಿಳಿಸಿದ್ದಾರೆ.

ಅಪ್ರಾಪ್ತ ವಯಸ್ಕರ ಬಂಧನ
ಈ ಬಂಧನವಾಗಿ ಮೂರು ವರ್ಷ ಕಳೆದರೂ ಈ ಪ್ರಕರಣಗಳ ವಿಚಾರಣೆ ಶುರುವಾಗಿಲ್ಲ. ಹಾಗೆಯೇ ಒಬ್ಬರಿಗೂ ಜಾಮೀನು ಸಹ ಸಿಕ್ಕಿಲ್ಲ. ಗ್ರಾಮದ ಕೆಲವು ಬಾಲಕರನ್ನು ಕೂಡ ಐಪಿಸಿ ಸೆಕ್ಷನ್ಗಳ ಅಡಿ ಬಂಧಿಸಿದ ದಾಂತೇವಾಡ ಜೈಲಿನಲ್ಲಿ ಇರಿಸಲಾಗಿತ್ತು. ಹದಿನೆಂಟು ತಿಂಗಳು ಜೈಲಿನಲ್ಲಿ ಇರಿಸಿ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಅಮಾಯಕರ ಬಂಧನ
ದಾಳಿ ನಡೆದ ಬಳಿಕ ಈ ಗ್ರಾಮಗಳ ಯಾರೊಬ್ಬ ಗ್ರಾಮಸ್ಥರೂ ಊರು ತೊರೆದಿರಲಿಲ್ಲ. ಭದ್ರತಾ ಪಡೆಗಳು ಅಮಾಯಕರನ್ನು ಯಾವುದೇ ಸಾಕ್ಷ್ಯವಿಲ್ಲದಂತೆ ಬಂಧಿಸಿದ್ದಾರೆ. ಪೊಲೀಸರ ದಬ್ಬಾಳಿಕೆಗೆ ಬೆದರಿ ಅಲ್ಲಿನ ಆದಿವಾಸಿಗಳು ಊರು ತೊರೆದು ಆಂಧ್ರಪ್ರದೇಶಕ್ಕೆ ಓಡುತ್ತಿದ್ದಾರೆ. ಪ್ರಕರಣ ದಾಖಲಾದ ಪುರುಷರು ನಗರಗಳಿಂದ ಗ್ರಾಮಕ್ಕೆ ಮರಳಿದ್ದರೂ ಅಲ್ಲಿ ಜೀವಿಸಲು ಹೆದರುತ್ತಿದ್ದಾರೆ. ಸರ್ಕಾರ ಇದರಲ್ಲಿ ಮಧ್ಯಪ್ರವೇಶಿಸುತ್ತಿಲ್ಲ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ನೆಪಗಳನ್ನು ಹೇಳುತ್ತಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.












Click it and Unblock the Notifications