ಯುವತಿಯನ್ನು ಹಿಂಬಾಲಿಸಿದ್ದು ಹೌದು, ತಪ್ಪೊಪ್ಪಿಕೊಂಡ ವಿಕಾಸ್ ಬರಲಾ
ಚಂಡೀಗಢ, ಆಗಸ್ಟ್ 10: ತಾನು ವರ್ಣಿಕಾ ಕುಂದುರನ್ನು ಮಧ್ಯರಾತ್ರಿ ಹಿಂಬಾಲಿಸಿದ್ದು ಹೌದು ಎಂದು ವಿಕಾಸ್ ಬರಲಾ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಹರ್ಯಾಣ ಬಿಜೆಪಿ ಅಧ್ಯಕ್ಷ ಸುಭಾಷ್ ಬರಲಾ ಪುತ್ರ ವಿಕಾಸ್ ಬರಲಾರನ್ನು ಬುಧವಾರ ಬಂಧಿಸಲಾಗಿತ್ತು. ವಿಚಾರಣೆ ವೇಳೆ ಅವರು ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಇನ್ನು ನಿನ್ನೆ ಬಂಧಿತರಾದ ವಿಕಾಸ್ ಬರಲಾ ಮತ್ತು ಅವರ ಗೆಳೆಯ ಆಶಿಷ್ ಬರಲಾರನ್ನು ಕೋರ್ಟ್ ಮುಂದೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಆಗಸ್ಟ್ 4ರ ಮಧ್ಯರಾತ್ರಿ ತನ್ನನ್ನು ಕಾರಿನಲ್ಲಿ ಹಿಂಬಾಲಿಸಿ ಬೆದರಿಕೆ ಹಾಕಿದ್ದಲ್ಲದೆ ಅಪಹರಣಕ್ಕೆ ಯತ್ನಿಸಿದ್ದಾಗಿ ಹರಿಯಾಣ ಐಎಎಸ್ ಅಧಿಕಾರಿಯ ಪುತ್ರಿ ವರ್ಣಿಕಾ ಕುಂದು ದೂರು ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಹತ್ವದ ಸಾಕ್ಷ್ಯ ಲಭ್ಯವಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಎಸ್.ಯು.ವಿ ಕಾರಿನಲ್ಲಿ ಸುಭಾಷ್ ಬರಲಾ ಪುತ್ರ ವಿಕಾಸ್ ಬರಲಾ ಮತ್ತು ಆತನ ಗೆಳೆಯ ಆಶಿಶ್ ಕುಮಾರ್ ಹರಿಯಾಣದ ಐಎಎಸ್ ಅಧಿಕಾರಿಯ ಪುತ್ರಿ ವರ್ಣಿಕಾ ಕುಂದುರನ್ನು ಹಿಂಬಾಲಿಸುತ್ತಿರುವುದು ಕಂಡು ಬಂದಿತ್ತು.
ಬುಧವಾರ ಇಂದು ವಿಚಾರಣೆಗೆ ಹಾಜರಾಗುವಂತೆ ವಿಕಾಸ್ ಬರಲಾಗೆ ಪೊಲೀಸರು ಸಮನ್ಸ್ ನೀಡಲು ಹೋಗಿದ್ದರು. ಸಮನ್ಸ್ ಸ್ವೀಕರಿಸದ ಹಿನ್ನಲೆಯಲ್ಲಿ ಅವರ ಮನೆಯ ಗೇಟಿಗೆ ಸಮನ್ಸ್ ಅಂಟಿಸಿ ಬಂದಿದ್ದರು.
ಎಲ್ಲಾ ಹೈಡ್ರಾಮಗಳ ನಂತರ ಬುಧವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾದ ವಿಕಾಸ್ ಬರಲಾರನ್ನು ಪೊಲೀಸರು ಬಂಧಿಸಿದ್ದರು.












Click it and Unblock the Notifications