ಸಿಬಿಐ ವಿಶ್ವಾಸರ್ಹತೆ ಉಳಿಸಲು ಕೇಂದ್ರ ಕಠಿಣ ನಿರ್ಣಯ: ಅರುಣ್ ಜೇಟ್ಲಿ
ಬೆಂಗಳೂರು, ಅಕ್ಟೋಬರ್ 24: ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಅದರ ಕುರಿತು ಸರ್ಕಾರ ತೆಗೆದುಕೊಂಡ ನಿರ್ಣಯಗಳನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸಮರ್ಥಿಸಿಕೊಂಡರು.
ನವದೆಹಲಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಐನಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ 'ವಿಶೇಷ ಪರಿಸ್ಥಿತಿ' ಎಂದು ಕರೆದರು. ಹಾಗೂ ಸಿಬಿಐ ಕುರಿತು ಕಳೆದೆರಡು ದಿನಗಳ ನಡುವೆ ಸರ್ಕಾರ ತಳೆದ ನಿರ್ಣಯಗಳು ಅತ್ಯವಶ್ಯಕ ಎಂದು ಅವರು ಹೇಳಿದರು.
ಸಿಬಿಐನಲ್ಲಿ ನಡೆದ ಪ್ರಕರಣವನ್ನು ತನಿಖೆ ಮಾಡಲು ಅತ್ಯುನ್ನತ ಮಟ್ಟದ ಸ್ವತಂತ್ರ ಎಸ್ಐಟಿ ಒಂದನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದ ಜೇಟ್ಲಿ ಅವರು, ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ಅವರನ್ನು ರಜೆ ಮೇಲೆ ಕಳುಹಿಸಿ ಅರ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

ಸಿಬಿಐನ ಸಮಗ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಲೆಂದು ಕೇಂದ್ರ ಸರ್ಕಾರವು ಈ ಕ್ರಮ ಅನುಸರಿಸಿದೆ ಎಂದು ಹೇಳಿರುವ ಅವರು, ರಜೆಯ ಮೇಲೆ ಕಳಿಸಲಾಗಿರುವ ಅಧಿಕಾರಿ ಹಾಗೂ ಸಿಬಿಐ ಅಧಿಕಾರಿ ಅಲೋಕ್ ವರ್ಮಾ ಅವರೊಂದಿಗೆ ಕೆಲಸ ಮಾಡಿರದ ಹೊಸ ತಂಡದ ರಚನೆ ಮಾಡಿ ತನಿಖೆಗೆ ನಿಯೋಜಿಸಲಾಗಿದೆ ಎಂದು ಹೇಳಿದರು.
ಸಿಬಿಐ ಒಳಜಗಳದ ವಿಷಯದ ಬಗ್ಗೆ ಕಾಂಗ್ರೆಸ್ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಅರುಣ್ ಜೇಟ್ಲಿ 'ಕಾಂಗ್ರೆಸ್ ಆರೋಪ ಒಪ್ಪತಕ್ಕದುಲ್ಲ, ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇರುವ ಆರೋಪವೂ ಅದಲ್ಲ ' ಎಂದು ತಳ್ಳಿ ಹಾಕಿದ್ದಾರೆ.
ಸಿಬಿಐನ ಇಬ್ಬರು ನಿರ್ದೇಶಕರ ನಡುವೆ ಆಂತರಿಕ ಕಲಹ ಏರ್ಪಟ್ಟಿತ್ತು. ಆ ನಂತರ ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ಮೇಲೆ ಲಂಚ ಪಡೆದ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಯಿತು. ಆ ಕಾರಣ ಅವರನ್ನು ಕೇಂದ್ರ ಸರ್ಕಾರವು ಅವರನ್ನು ರಜೆಯ ಮೇಲೆ ಕಳಿಸಿದೆ ಅಲ್ಲದೆ ಅವರ ಸ್ಥಾನಕ್ಕೆ ನಾಗೇಶ್ವರ ರಾವ್ ಅವರನ್ನು ನೇಮಿಸಿದೆ.












Click it and Unblock the Notifications