ಕಾವೇರಿ ವಿವಾದ : ಚೆಂಡು ಈಗ ಕೇಂದ್ರ ಸರ್ಕಾರದ ಅಂಗಳಕ್ಕೆ
ನವದೆಹಲಿ, ಸೆ. 27: ಕಾವೇರಿ ನದಿ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ಮಂಗಳವಾರ ಎರಡು ವಿಷಯವಾಗಿ ಭಾರಿ ಚರ್ಚೆ ನಡೆಯಿತು. ಸೆ.20ರ ಆದೇಶ ಮಾರ್ಪಾಟು ಮಾಡುವುದು, ಕರ್ನಾಟಕದ ಶಾಸಕಾಂಗ ತೆಗೆದುಕೊಂಡ ನಿರ್ಣಯದ ಬಗ್ಗೆ ಚರ್ಚೆಯಾಯಿತು.
ವಿಚಾರಣೆ ಸೆಪ್ಟೆಂಬರ್ 30ಕ್ಕೆ ಮುಂದೂಡಲ್ಪಟ್ಟಿದ್ದು, ಮೊದಲು ತಮಿಳುನಾಡಿಗೆ ನೀರು ಬಿಡಿ ಎಂದಿರುವ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರವನ್ನು ಈ ವಿಷಯದಲ್ಲಿ ಎಳೆದು ತಂದಿದೆ.
ತಮಿಳುನಾಡಿಗೆ ಸೆ.27ರಿಂದ ಸೆ.30ರ ತನಕ 3 ದಿನ ಸೇರಿದಂತೆ 18 ಕ್ಯೂಸೆಕ್ಸ್ ನೀರು ಬಿಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.[ನಿರ್ವಹಣಾ ಮಂಡಳಿ ರಚನೆ, ಸುಪ್ರೀಂ ಪೀಠಗಳಲ್ಲೇ ದ್ವಂದ್ವ!]
'ಶಾಸಕಾಂಗವು ಕಾವೇರಿ ನೀರು ಬಿಡುವುದಿಲ್ಲ' ಎಂಬುದಾಗಿ ಕರ್ನಾಟಕ ವಿಧಾನ ಮಂಡಲ ಕೈಗೊಂಡ ನಿರ್ಣಯ ಏನೇ ಇದ್ದರೂ, ತಮಿಳುನಾಡಿಗೂ ಕುಡಿಯುವ ನೀರಿನ ಅಗತ್ಯವಿದೆ ಮೊದಲಿಗೆ ನೀರು ಬಿಡಿ ಎಂದು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಸುಪ್ರೀಂ ಆದೇಶ ಪಾಲಿಸದಿರುವುದು ಸರಿಯಲ್ಲ. ಸುಪ್ರೀಂಕೋರ್ಟ್ ಘನತೆ ಎತ್ತಿ ಹಿಡಿಯಿರಿ, ನಿಮ್ಮ ಸಿಎಂಗೆ ತಿಳಿಸಿ ಎಂದು ಕರ್ನಾಟಕದ ಪರ ವಕೀಲ ಫಾಲಿ ಎಸ್ ನಾರಿಮನ್ ಗೆ ನ್ಯಾಯಪೀಠ ಸೂಚಿಸಿತು. [ನೀರು ರಕ್ಷಿಸಿ, ಇಲ್ಲಾ ಕಠಿಣ ಬೇಸಿಗೆ ಎದುರಿಸಿ, ಖಡಕ್ ಎಚ್ಚರಿಕೆ!]
ಸೆಪ್ಟೆಂಬರ್ 20ರ ಅದೇಶ ಮಾರ್ಪಾಡು ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ ಮತ್ತು ಯು.ಯು. ಲಲಿತ್ ಅವರಿದ್ದ ನ್ಯಾಯಪೀಠ ಹೇಳಿದೆ.
ಇದಕ್ಕೂ ಮುನ್ನ ಕರ್ನಾಟಕ ವಿಧಾನ ಮಂಡಲ ಕೈಗೊಂಡ ನಿರ್ಣಯವನ್ನು ಪ್ರಶ್ನಿಸಿ, ಸುಪ್ರೀಂಕೋರ್ಟ್ ಆದೇಶ ಪಾಲಿಸದೇ ಇರುವುದಕ್ಕಾಗಿ ಕರ್ನಾಟಕದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಮಿಳುನಾಡು ಮನವಿ ಮಾಡಿತ್ತು.[ಕಾವೇರಿ ನೀರು ಬಿಡುವುದು ಬಿಡದಿರುವುದು ದೈವೇಚ್ಛೆ ಮೈಲಾರ್ಡ್!]
ಕೇಂದ್ರ ಸರ್ಕಾರದ ಪಾತ್ರವೇನು?: ಶುಕ್ರವಾರ ಮತ್ತೆ ವಿಚಾರಣೆ ನಡೆಯಲಿದೆ. ಜತೆಗೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಮಾತುಕತೆ ಏರ್ಪಡುವಂತೆ ಕೇಂದ್ರ ಸರ್ಕಾರ ಮುಂದಾಳತ್ವ ವಹಿಸಿ ಸಭೆ ನಡೆಸಬೇಕಿದೆ.
ಈ ಬಗ್ಗೆ ಅಟಾರ್ನಿ ಜನರಲ್ ಅವರು ಕ್ರಮ ಜರುಗಿಸಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಶುಕ್ರವಾರದೊಳಗೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಹಾಗೂ ತಮಿಳುನಾಡಿನ ಸಿಎಂ ಜಯಲಲಿತಾ ಅವರನ್ನೊಳಗೊಂಡ ಸಭೆಯನ್ನು ಪ್ರಧಾನಿ ಮೋದಿ ಸರ್ಕಾರ ನಡೆಸಬೇಕಿದೆ. ಆದರೆ, ತಮಿಳುನಾಡಿನ ಸಿಎಂ ಜಯಲಲಿತಾ ಅವರು ಅಸ್ವಸ್ಥರಾಗಿ ಆಪೊಲೋ ಆಸ್ಪತ್ರೆ ಸೇರಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಹೀಗಾಗಿ, ಕೇಂದ್ರ ಸರ್ಕಾರ ಯಾವ ನಿರ್ಣಯ ಕೈಗೊಳ್ಳಲಿದೆ ಕಾದು ನೋಡಬೇಕಿದೆ.












Click it and Unblock the Notifications