ಅಮಿತ್ ಶಾ ಭೇಟಿಯಾದ ಅಮರಿಂದರ್ ಸಿಂಗ್
ನವದೆಹಲಿ, ಸೆಪ್ಟೆಂಬರ್ 29: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಗೃಹ ಸಚಿವ ಅಮಿತ್ ಶಾ ಭೇಟಿಯಾದರು. ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಅವರು ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಬುಧವಾರ ನವದೆಹಲಿಯಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದರು. ಅಮರಿಂದರ್ ಸಿಂಗ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಯ ನಡುವೆಯೇ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಸೇರುವ ಕುರಿತು ಹಬ್ಬಿರುವ ಸುದ್ದಿಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಕ್ಯಾಪ್ಟನ್ ಅಮರಿಂದರ್ ಸಿಂಗ್ ನಿರಾಕರಿಸಿದ್ದಾರೆ. ಆದರೆ ಕೆಲವು ರಾಷ್ಟ್ರೀಯ ವಾಹಿನಿಗಳು ಅವರು ಬಿಜೆಪಿ ಸೇರಲಿದ್ದಾರೆ ಎಂದು ವರದಿ ಮಾಡುತ್ತಿವೆ. ಆದರೆ ಇದೊಂದು ಸೌಜನ್ಯದ ಭೇಟಿ ಎಂದು ಅಮರಿಂದರ್ ಸಿಂಗ್ ತಂಡ ಹೇಳಿಕೆ ನೀಡಿದೆ.
ಅಮರಿಂದರ್ ಸಿಂಗ್ ಮಂಗಳವಾರವೇ ದೆಹಲಿಗೆ ತೆರಳಿದ್ದರು. "ದೆಹಲಿಯಲ್ಲಿನ ಮನೆ ಖಾಲಿ ಮಾಡಲು ಬಂದಿರುವೆ" ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ಅವರು ದೆಹಲಿಗೆ ಭೇಟಿ ನೀಡಿದ್ದಾರೆ.
ನವಜೋತ್ ಸಿಂಗ್ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥರಾದ ಬಳಿಕ ರಾಜ್ಯ ಕಾಂಗ್ರೆಸ್ನಲ್ಲಿ ಹಲವಾರು ಗೊಂದಲ ಉಂಟಾಗಿತ್ತು. ಆದರೆ ಮಂಗಳವಾರ ಸಿಧು ರಾಜೀನಾಮೆ ನೀಡಿದ್ದರು. ಆಗ ಟ್ವೀಟ್ ಮಾಡಿದ್ದ ಅಮರಿಂದರ್ ಸಿಂಗ್, "ಈ ವ್ಯಕ್ತಿಗೆ ಸ್ಥಿರತೆ ಇಲ್ಲ ಅಂತ ನಾನು ಮೊದಲೇ ಹೇಳಿದ್ದೆ ಹಾಗೂ ಗಡಿ ರಾಜ್ಯ ಪಂಜಾಬ್ಗೆ ಸೂಕ್ತ ವ್ಯಕ್ತಿಯಲ್ಲ" ಎಂದು ಟೀಕಿಸಿದ್ದರು.
|
ಮಂಗಳವಾರವೇ ಸುದ್ದಿ ಹಬ್ಬಿತ್ತು
ಪಂಜಾಬ್ ಮಾಜಿ ಮುಖ್ಯಮಂತ್ರಿ ಮಂಗಳವಾರ ಮಧ್ಯಾಹ್ನ ನವದೆಹಲಿಗೆ ಆಗಮಿಸಿದ್ದರು. ಮಂಗಳವಾರ ಸಂಜೆ ಅವರು ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿದ್ದಾರೆ.

ಸೆಪ್ಟೆಂಬರ್ 18ರಂದು ರಾಜೀನಾಮೆ
ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೆಪ್ಟೆಂಬರ್ 18ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನವಜೋತ್ ಸಿಂಗ್ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥರಾದ ಬಳಿಕ ರಾಜ್ಯ ಕಾಂಗ್ರೆಸ್ನಲ್ಲಿ ಹಲವಾರು ಬೆಳವಣಿಗೆಗಳು ನಡೆದಿದ್ದವು. ಮಂಗಳವಾರ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ಸಹ ರಾಜೀನಾಮೆ ನೀಡಿದ್ದಾರೆ.

ನನ್ನ ಮುಂದೆ ಅವಕಾಶಗಳಿವೆ
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್, "ನನಗೆ ಅವಮಾನವಾಗಿದೆ. ರಾಜಕೀಯ ಭವಿಷ್ಯದ ಕುರಿತು ಹೇಳುವುದಾದರೆ ನನ್ನ ಮುಂದೆ ಸದಾ ಆಯ್ಕೆಗಳಿರುತ್ತದೆ. ಅವಕಾಶ ಬಂದಾಗ ಅದನ್ನು ಉಪಯೋಗಿಸುತ್ತೇನೆ" ಎಂದು ಹೇಳಿದ್ದರು.

ಇದು ಸೌಜನ್ಯದ ಭೇಟಿ
'ಇದು ಸೌಜನ್ಯದ ಭೇಟಿಯಾಗಿದೆ' ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಅಮಿತ್ ಶಾ ಭೇಟಿ ಬಳಿಕ ಅಮರಿಂದರ್ ಸಿಂಗ್ ತಂಡ ಹೇಳಿಕೆ ನೀಡಿದೆ.
ಮಂಗಳವಾರವೂ ದೆಹಲಿ ಭೇಟಿ ಬಗ್ಗೆ ಉಹಾಪೋಹ ಎದ್ದಾಗ ತಂಡ, 'ವೈಯಕ್ತಿಕ ಕಾರಣಕ್ಕಾಗಿ ಅವರು ದೆಹಲಿಗೆ ಬಂದಿದ್ದಾರೆ. ಈ ಸಮಯದಲ್ಲಿ ಕೆಲವು ಸ್ನೇಹಿತರನ್ನು ಅವರು ಭೇಟಿಯಾಗಲಿದ್ದಾರೆ. ನೂತನ ಮುಖ್ಯಮಂತ್ರಿಗಾಗಿ ಕಪುರ್ತಲಾದಲ್ಲಿರುವ ಮನೆ ಖಾಲಿ ಮಾಡುತ್ತಾರೆ. ಈ ವಿಚಾರದಲ್ಲಿ ಯಾವುದೇ ಗೊಂದಲ, ಉಹಾಪೋಹ ಬೇಡ' ಎಂದು ತಂಡ ಹೇಳಿತ್ತು.

ಚುನಾವಣೆ ಎದುರಾಗಲಿದೆ
ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪ್ರಭಾವಿ ನಾಯಕರು. 2022ರಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆ ನಡೆಯಲಿದೆ. ಪಂಜಾಬ್ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಪಕ್ಷದಲ್ಲಿ ಹಲವಾರು ಗೊಂದಲಗಳಿವೆ. ಇಂತಹ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅಮಿತ್ ಶಾ ಭೇಟಿಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ. ಅಮರಿಂದರ್ ಸಿಂಗ್ ಬಿಜೆಪಿ ಸೇರಿದರೆ ರಾಜ್ಯದ ರಾಜಕೀಯ ಚಿತ್ರಣವೇ ಬದಲಾಗಲಿದೆ.












Click it and Unblock the Notifications