Budget 2025: ಬಜೆಟ್ ಮಂಡನೆ, ಹಣಕಾಸು ಮಸೂದೆ ಎಂದರೇನು?, ವಿವರ
ನವದೆಹಲಿ, ಜನವರಿ 27: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರ ಶನಿವಾರ 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಲೋಕಸಭೆಯಲ್ಲಿ ಬಜೆಟ್ ಮಂಡನೆ ಜೊತೆಗೆ ಹಣಕಾಸು ಮಸೂದೆಯನ್ನು ಮಂಡನೆ ಮಾಡಲಾಗುತ್ತದೆ. ಈ ಮಸೂದೆಗೆ ಬಜೆಟ್ನಷ್ಟೇ ಮಹತ್ವವಿದೆ. ಹಣಕಾಸು ಮಸೂದೆ ಎಂದರೇನು?, ಅದಕ್ಕಿರುವ ಮಹತ್ವವೇನು? ಎಂಬ ಮಾಹಿತಿ ಇಲ್ಲಿದೆ.
ಲೋಕಸಭೆಯಲ್ಲಿ ಮಂಡನೆ ಮಾಡುವ ಬಜೆಟ್ಗೆ ಪೂರಕವಾಗಿ ಹಣಕಾಸು ಮಸೂದೆಯನ್ನು ಮಂಡನೆ ಮಾಡಲಾಗುತ್ತದೆ. ಬಜೆಟ್ಗೆ ಒಪ್ಪಿಗೆ ನೀಡಬೇಕಾದರೆ ಉಭಯ ಸದನಗಳಲ್ಲಿ ಹಣಕಾಸು ಮಸೂದೆ ಅಂಗೀಕಾರವಾಗಬೇಕಿದೆ. ಬಜೆಟ್ನಲ್ಲಿನ ಹಲವು ಅಂಶಗಳು ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಆದ್ದರಿಂದ ಅವುಗಳನ್ನು ಮಸೂದೆಯಲ್ಲಿ ಸೇರಿಸಿ ಮಂಡಿಸಲಾಗುತ್ತದೆ.

ಸರಳವಾಗಿ ಹೇಳುವುದಾದರೆ ಸಂಸತ್ತಿನ ಉಭಯ ಸದನಗಳಲ್ಲಿ ಕಾನೂನಾತ್ಮಕವಾಗಿ ಅಂಗೀಕಾರಗೊಳ್ಳಬೇಕಾದ ಶಾಸನವಿದು. ಹಣಕಾಸು ಮಸೂದೆ ಎಂದರೆ ಹೆಸರೇ ಸೂಚಿಸುವಂತೆ, ದೇಶದ ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದ ಒಂದು ಮಸೂದೆ. ತೆರಿಗೆ, ಸರ್ಕಾರಿ ವೆಚ್ಚ, ಸರ್ಕಾರದ ಸಾಲಗಳು, ಆದಾಯಗಳು ಇತ್ಯಾದಿಗಳ ಬಗ್ಗೆ ಇದರಲ್ಲಿ ಮಾಹಿತಿ ಇರುತ್ತದೆ. ಕೇಂದ್ರ ಬಜೆಟ್ ವಿಷಯದೊಂದಿಗೆ ಇದು ಸೇರಿಕೊಂಡಿರುವುದರಿಂದ ಬಜೆಟ್ ಜೊತೆಗೆ ಇದನ್ನು ಮಂಡನೆ ಮಾಡಲಾಗುತ್ತದೆ.
ಕೇಂದ್ರ ಬಜೆಟ್ ತೆರಿಗೆ ಪ್ರಸ್ತಾಪ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು ಬಜೆಟ್ ಮಂಡಿಸುತ್ತಾರೆ. ಬಜೆಟ್ನಲ್ಲಿನ ತೆರಿಗೆ ಪ್ರಸ್ತಾವನೆಗಳನ್ನು ಜಾರಿಗೆ ತರಲು ಸದಸನದ ಒಪ್ಪಿಗೆಯನ್ನು ಪಡೆಯಲು ಹಣಕಾಸು ಮಸೂದೆ ಮಂಡನೆ ಮಾಡಲಾಗುತ್ತದೆ. ಹೊಸ ತೆರಿಗೆ ವಿಧಿಸಲು, ಇರುವ ತೆರಿಗೆ ಪರಿಷ್ಕರಣೆಗೊಳಿಸಲು, ರದ್ದುಗೊಳಿಸಲು ಕಾನೂನಾತ್ಮಕವಾಗಿ ಲೋಕಸಭೆ, ರಾಜ್ಯಸಭೆ ಈ ಮಸೂದೆ ಮೂಲಕ ಅಂಗೀಕಾರ ನೀಡುತ್ತದೆ.
ಲೋಕಸಭೆಯಲ್ಲಿ ಬಜೆಟ್ ಮಂಡನೆಗೂ ಮೊದಲು ರಾಷ್ಟ್ರಪತಿಗಳಿಗೆ ಬಜೆಟ್ ಪ್ರತಿಯನ್ನು ನೀಡಲಾಗುತ್ತದೆ. ಆಗ ಹಣಕಾಸು ಮಸೂದೆ ಮಂಡನೆ ಮಾಡಲು ಸಹ ಅವರ ಒಪ್ಪಿಗೆಯನ್ನು ಪಡೆಯಲಾಗುತ್ತದೆ. ಇದು ವಿಶೇಷ ಮಸೂದೆಯಾದ ಕಾರಣ ಇದನ್ನು ಮಂಡನೆ ಮಾಡಲು ಭಾರತೀಯ ಸಂವಿಧಾನದ 117 ಮತ್ತು 274ರ ಅಡಿ ರಾಷ್ಟ್ರಪತಿಗಳ ಒಪ್ಪಿಗೆ ಬೇಕಿದೆ.
ಸರ್ಕಾರ ಸಾಲ ಪಡೆಯಲು, ತೆರಿಗೆ ಪದ್ಧತಿಯನ್ನು ಮಾರ್ಪಾಡು ಮಾಡಲು, ಸರ್ಕಾರ ವಿಧಿಸುವ ಹೆಚ್ಚುವರಿ ಶುಲ್ಕಕ್ಕೆ ಸಹ ಈ ಮಸೂದೆ ಮೂಲಕ ಒಪ್ಪಿಗೆಯನ್ನು ಪಡೆಯಲಾಗುತ್ತದೆ. ನಿಯಮಗಳ ಪ್ರಕಾರ ಹಣಕಾಸು ಮಸೂದೆ ಮಂಡನೆ ಮಾಡಲು ಹಣಕಾಸು ಸಚಿವರು ಲೋಕಸಭೆ ಪ್ರಧಾನ ಕಾರ್ಯದರ್ಶಿಗೆ ಅನುಮತಿ ಕೇಳಿ ಪತ್ರವನ್ನು ಬರೆಯುತ್ತಾರೆ. ಆ ಪತ್ರವನ್ನು ರಾಷ್ಟ್ರಪತಿಗಳಿಗೆ ಕಳಿಸುವ ಮೂಲಕ ಹಣಕಾಸು ಮಸೂದೆ ಮಂಡನೆಗೆ ಒಪ್ಪಿಗೆ ಪಡೆಯಲಾಗುತ್ತದೆ.
ಸಾಮಾನ್ಯವಾಗಿ ಫೆಬ್ರವರಿ 1ರಂದು ಮಂಡನೆಯಾಗುವ ಬಜೆಟ್ ಜಾರಿಗೆ ಬರುವುದು ಏಪ್ರಿಲ್ನಿಂದ ಏಪ್ರಿಲ್ನಿಂದ ಮುಂದಿನ ವರ್ಷದ ಮಾರ್ಚ್ 31ರ ತನಕ ಬಜೆಟ್ ಘೋಷಣೆಗಳು, ತೆರಿಗೆ, ಪ್ರಸ್ತಾವಿತ ಯೋಜನೆಗಳು ಜಾರಿಗೆ ಬರುತ್ತವೆ. ಇವುಗಳಿಗೆ ಮಾಡಬೇಕಿರುವ ವೆಚ್ಚದ ಕುರಿತು ಹಣಕಾಸು ಮಸೂದೆಯಲ್ಲಿ ವಿವರಣೆ ನೀಡಿ, ಸದಸನದ ಒಪ್ಪಿಗೆಯನ್ನು ಪಡೆಯಲಾಗುತ್ತದೆ.
ಜನವರಿ 31ರಂದು ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಲಿದೆ. ಮೊದಲ ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಫೆಬ್ರವರಿ 1ರಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.












Click it and Unblock the Notifications