Budget 2023: ಬೆಂಗಳೂರಿನ ಉಪನಗರ ರೈಲು ಯೋಜನೆಗೆ 1,350 ಕೋಟಿ ರೂ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಕೆಲ ತಿಂಗಳು ಬಾಕಿ ಇರುವಾಗ ಕೇಂದ್ರದ ಬಜೆಟ್ ಮಂಡಣೆಯಾಗಿದ್ದು ಹಲವು ಯೋಜನೆಗಳಿಗೆ ಜೀವ ಕಳೆ ಬಂದಂತಾಗಿದೆ. ಇದರಲ್ಲಿ ಬೆಂಗಳೂರಿನ ಉಪನಗರ ರೈಲು ಯೋಜನೆ ಕೂಡ ಒಂದು.
ಬೆಂಗಳೂರು ಫೆಬ್ರವರಿ 2: ಕಳೆದ ದಿನ ಮಂಡನೆಯಾದ ಕೇಂದ್ರ ಬಜೆಟ್ ಮೇಲೆ ರಾಜ್ಯದ ರೈಲ್ವೆ ಸೇವೆ, ಸೌಲಭ್ಯ ಆಕಾಂಕ್ಷಿಗಳ ದೊಡ್ಡಮಟ್ಟದ ನಿರೀಕ್ಷೆ ಹುಸಿಯಾಗಿಲ್ಲ. ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ನಡೆಯುವ ಚುನಾವಣೆಯನ್ನು ಪ್ರಮುಖವಾಗಿಟ್ಟುಕೊಂಡು ಒಂದಿಷ್ಟು ಜನಪ್ರಿಯ ಯೋಜನೆಯನ್ನು ಕೇಂದ್ರ ಸರ್ಕಾರ ಫೋಷಿಸಿದೆ ಎನ್ನಬಹುದು. ಹಳೆಯ ಯೋಜನೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ತ್ವರಿಸಗೊಳಿಸಲು ನಿರ್ಧರಿಸಿದೆ. ನಿರೀಕ್ಷೆಯಂತೆ ಉತ್ತಮ ಆದಾಯ ತಂದುಕೊಡುತ್ತಿರುವ ರೈಲ್ವೆ ವ್ಯವಸ್ಥೆಯ ಸುಧಾರಣೆ, ನಿಲ್ದಾಣ ಅಭಿವೃದ್ಧಿ, ರೈಲ್ವೆ ಹೊಸ ಮಾರ್ಗಗಳ ಆರಂಭ, ಹಳೆ ಮಾರ್ಗಗಳ ಉನ್ನತೀಕರಣ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿದೆ.
ಬೆಂಗಳೂರಿನ ಉಪನಗರ ರೈಲು ಯೋಜನೆಯನ್ನು ಕಾರ್ಯಗತಗೊಳಿಸಲು 1,350 ಕೋಟಿ ರೂ. ಅನುದಾನ ನೀಡಲಾಗಿದೆ. ಒಟ್ಟು 1,350 ಕೋಟಿ ರೂಪಾಯಿಯಲ್ಲಿ ಕೆ-ರೈಡ್ಗೆ ರೂ. 450 ಕೋಟಿ ಬಜೆಟ್ ಬೆಂಬಲ ಮತ್ತು ಉಳಿದ ರೂ. 900 ಕೋಟಿ ಐಇಬಿಆರ್ (ಆಂತರಿಕ ಮತ್ತು ಹೆಚ್ಚುವರಿ ಬಜೆಟ್ ಸಂಪನ್ಮೂಲಗಳು) ಗೆ ನೀಡಲಾಗಿದೆ.
2022-2023 ರಲ್ಲಿ ರಾಜ್ಯದಿಂದ 660 ಕೋಟಿ
2022-2023 ರಲ್ಲಿ ರಾಜ್ಯ ಸರ್ಕಾರ ಉಪನಗರ ರೈಲು ಯೋಜನೆಗೆ 660 ಕೋಟಿ ರೂಪಾಯಿಗಳನ್ನು ನೀಡಿತ್ತು. ಇದರಲ್ಲಿ ಕೇಂದ್ರದ ಪಾಲು 450 ಕೋಟಿ ರೂಪಾಯಿಗಳು ಇನ್ನೂ ಬಾಕಿ ಉಳಿದಿದೆ. ಕೆಲವೇ ವಾರಗಳಲ್ಲಿ ಮೊತ್ತ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಕೆ-ರೈಡ್ ಅಧಿಕಾರಿಯೊಬ್ಬರು ಹೇಳುತ್ತಾರೆ.
ಉಪನಗರ ರೈಲಿಗೆ ನಿರೀಕ್ಷಿತ ಅನುದಾನ ನೀಡಲಾಗಿದೆ. "ನಾವು ಕೇಂದ್ರದಂತೆ ರಾಜ್ಯ ಬಜೆಟ್ನಲ್ಲೂ ಗಮನಾರ್ಹ ಹಂಚಿಕೆಯನ್ನು ನಿರೀಕ್ಷಿಸುತ್ತೇವೆ. ಉಳಿದ ಎರಡು ಕಾರಿಡಾರ್ಗಳಿಗೆ ಟೆಂಡರ್ಗಳನ್ನು ಫ್ಲೋಟ್ ಮಾಡಲು ವಿದೇಶಿ ಹಣಕಾಸು ಸಂಸ್ಥೆಗಳಿಂದ ನಮಗೆ ಹಣದ ಅಗತ್ಯವಿದೆ" ಎಂದು ಅವರು ಹೇಳಿದರು.
ತೃಪ್ತಿಕರ ಬಜೆಟ್
ರೈಲ್ವೆ ಕಾರ್ಯಕರ್ತ ಪೃಥ್ವಿನ್ ರೆಡ್ಡಿ ಮಾತನಾಡಿ, ''ಬಜೆಟ್ನಲ್ಲಿ ಉಪನಗರ ರೈಲಿಗೆ ಮೀಸಲಿಟ್ಟಿರುವುದು ತೃಪ್ತಿಕರವಾಗಿದೆ. ರಾಜ್ಯ ಸರ್ಕಾರವು ತನ್ನ ಬಜೆಟ್ನಲ್ಲಿಯೂ ಸಾಕಷ್ಟು ಹಣವನ್ನು ಮೀಸಲಿಡಬೇಕು. ಸಂಪಿಗೆ ಲೈನ್ಗೆ (ಕೆಎಸ್ಆರ್ ಬೆಂಗಳೂರು-ಯಲಹಂಕ-ದೇವನಹಳ್ಳಿ) ಮುಂದಿನ ಸಿವಿಲ್ ವರ್ಕ್ ಟೆಂಡರ್ಗಳನ್ನು ಫ್ಲೋಟ್ ಮಾಡಲು ಹೆಚ್ಚುವರಿ ಹಣದ ಅಗತ್ಯವಿದೆ'' ಎಂದು ಹೇಳಿದರು.
ನಾಲ್ಕು ಕಾರಿಡಾರ್ಗಳೊಂದಿಗೆ 148 ಕಿಮೀ ಉದ್ದದ ಉಪನಗರ ರೈಲು ಯೋಜನೆಯನ್ನು 2020 ರ ಅಕ್ಟೋಬರ್ನಲ್ಲಿ 15,767 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರವು ಅನುಮೋದಿಸಿದೆ. ಆದರೆ 2022 ರ ಜೂನ್ನಲ್ಲಿ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ಮಾಡಿದ ನಂತರ ಯೋಜನೆಯು ವೇಗವನ್ನು ಪಡೆದುಕೊಂಡಿತು. ಮಲ್ಲಿಗೆ ಲೈನ್ (ಬೈಯಪ್ಪನಹಾ-ಚಿಕ್ಕಬಾಣಾವರ) ಸಿವಿಲ್ ಕಾಮಗಾರಿ ಆರಂಭವಾಗಿದ್ದು, ಹೀಲಳಿಗೆ ಮತ್ತು ರಾಜಾನುಕುಂಟೆ (ಕನಕ ಲೈನ್) ನಡುವಿನ ಕಾಮಗಾರಿಗೆ ಕೆ-ರೈಡ್ ಕಳೆದ ವಾರ ಟೆಂಡರ್ ಅಧಿಸೂಚನೆ ಹೊರಡಿಸಿದೆ.
ಸ್ಥಗಿತಗೊಂಡ ಯೋಜನೆಗಳ ಕಾಮಗಾರಿ
ರಾಜ್ಯದಲ್ಲಿ ರೈಲ್ವೆ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲವಾದರೂ, ಅಷ್ಟೊಂದು ಕಳಪೆ ಎನ್ನುವಂತಿಲ್ಲ. ಸುಮಾರು 10 ಸಾವಿರ ಕೋಟಿ ರೂ. ಮೊತ್ತದಲ್ಲಿ ರಾಜ್ಯದಲ್ಲಿ 9 ಹೊಸ ರೈಲು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೆಲವು ಯೋಜನೆಗಳ ಕಾಮಗಾರಿ ನಿಂತಿರುವುದು ನಿಜ. ಇದಕ್ಕೆ ಕಾರಣ ಭೂ ಸ್ವಾಧೀನ ಪ್ರಕ್ರಿಯೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಸಂವಹನ ಕೊರತೆಯಿಂದ ಈ ಸಮಸ್ಯೆ ಎದುರಾಗಿದೆ. ಇದೇ ಕಾರಣದಿಂದ ರಾಜ್ಯದ ಐದು ಯೋಜನೆಗಳು 10 ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಪರಿಸರಸ್ನೇಹಿಗಳ ವಿರೋಧ ಹಿನ್ನೆಲೆಯಲ್ಲೂ ಒಂದೆರಡು ಯೋಜನೆ ನಿಂತಿವೆ.