ಬಜೆಟ್ 2022; ರೈಲ್ವೆಯ ವೆಚ್ಚ ಶೇ 15 ರಿಂದ 20ರಷ್ಟು ಏರಿಕೆ
ನವದೆಹಲಿ, ಜನವರಿ 24; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ 2022-23 ಮಂಡನೆ ಮಾಡಲಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ರೈಲ್ವೆಯು ತನ್ನ ವೆಚ್ಚವನ್ನು ಶೇ 15 ರಿಂದ 20ರಷ್ಟು ಏರಿಕೆ ಮಾಡಲಿದೆ. ಪ್ರಯಾಣಿಕರಿಗೆ ಸಹ ಹಲವಾರು ಸೌಲಭ್ಯಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
ಕಳೆದ ವರ್ಷ ರೈಲ್ವೆಗೆ 26,338 ಕೋಟಿ ನಷ್ಟವಾಗಿದೆ. ಕೋವಿಡ್ ಪರಿಸ್ಥಿತಿ ಬಳಿಕ ಪ್ರಯಾಣ ದರ ಏರಿಕೆ ಮಾಡುವ ಮೂಲಕ ನಷ್ಟ ತುಂಬಿಕೊಳ್ಳಲು ಮುಂದಾಗಿತ್ತು. ಆದರೆ ದರ ಏರಿಕೆಗೆ ಸರ್ಕಾರ ಒಪ್ಪಿಗೆ ನೀಡಿಲ್ಲ. ಈ ಬಾರಿಯ ಬಜೆಟ್ನಲ್ಲಿ 10 ಹೊಸ ರೈಲು ಮಾರ್ಗವನ್ನು ಘೋಷಣೆ ಮಾಡಲಾಗುತ್ತದೆ.
ಬಜೆಟ್; ಬೆಂಗಳೂರು-ಕಣ್ಣೂರು ರೈಲು ಕೋಜಿಕ್ಕೋಡ್ ತನಕ ವಿಸ್ತರಣೆ
ನವದೆಹಲಿ-ವಾರಣಾಸಿ ಬುಲೆಟ್ ರೈಲು ಯೋಜನೆ ಸಹ ಬಜೆಟ್ನಲ್ಲಿ ಘೋಷಣೆಯಾಗಲಿದೆ. ಅಲ್ಲದೇ ರೈಲು ನಿಲ್ದಾಣಗಳಲ್ಲಿ ಇಂಟರ್ನೆಟ್ ಸೌಲಭ್ಯ ಒದಗಿಸುವುದು, ಸೌರ ಶಕ್ತಿ ಮೂಲಕ ವಿದ್ಯುತ್ ಉತ್ಪಾದನೆಗೆ ಬಜೆಟ್ನಲ್ಲಿ ಆದ್ಯತೆ ನೀಡಲಾಗುತ್ತದೆ.
ಬಜೆಟ್; ದೆಹಲಿ-ವಾರಣಾಸಿ ಹೈ-ಸ್ಪೀಡ್ ರೈಲು ಕಾರಿಡಾರ್ ಘೋಷಣೆ?
ಕೋವಿಡ್ ಪರಿಸ್ಥಿತಿಯಲ್ಲಿ ರೈಲ್ವೆಗೆ ಹೆಚ್ಚಿನ ಆದಾಯವು ಸರಕು ಸಾಗಣೆಯಿಂದ ಬಂದಿತ್ತು. ಆದ್ದರಿಂದ ಪ್ರಯಾಣಿಕರ ರೈಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ವಿವಿಧ ಸರಕು ಕಾರಿಡಾರ್ಗಳನ್ನು ಸಿದ್ಧಪಡಿಸಲು ರೈಲ್ವೆಯು ಮುಂದಾಗಿದೆ. ಇದರಿಂದ ಆದಾಯ ಹೆಚ್ಚಿಸಿಕೊಳ್ಳುವ ಚಿಂತನೆಯಲ್ಲಿದೆ.
ಕೇಂದ್ರ ಬಜೆಟ್ 2022: ದೇಶದ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದ ಬಂಪರ್ ಗಿಫ್ಟ್?
ಚುನಾವಣೆ ಎದುರಿಸುತ್ತಿರುವ ರಾಜ್ಯಗಳು ಮತ್ತು ಮೆಟ್ರೋ ನಗರಗಳ ರೈಲು ಸಂಪರ್ಕವನ್ನು ಬಲಪಡಿಸಲು ಯೋಜನೆಗಳನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ. ಸರ್ಕಾರವು ಇದಕ್ಕಾಗಿ ಕೆಲವು ಖಾಸಗಿ ಕಂಪನಿಗಳ ಸಹಭಾಗಿತ್ವವನ್ನು ಸಹ ಪಡೆಯಲಿದೆ.
ವಿದ್ಯುತ್ ಚಾಲಿತ ರೈಲಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ಮೂಲಕ ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಹೊಸ ಘೋಷಣೆಗಳನ್ನು ನಿರೀಕ್ಷೆ ಮಾಡಲಾಗಿದೆ. ಸೌರ ವಿದ್ಯುತ್ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಹಲವಾರು ಉಪ ಕ್ರಮ ಘೋಷಣೆ ನಿರೀಕ್ಷೆ ಇದೆ.
2030ರ ಗುರಿ; ರಾಷ್ಟ್ರೀಯ ರೈಲು ಯೋಜನೆಯಡಿ 2030ಕ್ಕೆ ಶೇ 100ರಷ್ಟು ವಿದ್ಯುದೀಕರಣದ ಗುರಿಯನ್ನು ಭಾರತೀಯ ರೈಲ್ವೆ ಹೊಂದಿದೆ. ಖಾಸಗಿ ಸಹಭಾಗಿತ್ವದಲ್ಲಿ ರೈಲು ನಿಲ್ದಾಣಗಳ ಸುಧಾರಣೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ. 12 ಪ್ರಮುಖ ರೈಲು ಕಾರಿಡಾರ್ಗಳನ್ನು ಪಟ್ಟಿ ಮಾಡಲಾಗಿದ್ದು, ಕನಿಷ್ಠ 5 ಕಾರಿಡಾರ್ ಈ ಬಜೆಟ್ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.
ಈ ಬಜೆಟ್ನಲ್ಲಿ ಸರ್ಕಾರ ಪ್ರಮುಖವಾಗಿ ರೈಲು ಅಭಿವೃದ್ಧಿ ಪ್ರಾಧಿಕಾರದ ರಚನೆಯನ್ನು ಘೋಷಿಸುವ ಸಾಧ್ಯತೆ ಇದೆ. ಪ್ರಾಧಿಕಾರ ಪ್ರಯಾಣ ದರ ಸಂಬಂಧಿತ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತದೆ. ಕಳೆದ ಬಜೆಟ್ನಲ್ಲಿಯೂ ಈ ಘೋಷಣೆ ಮಾಡುವ ನಿರೀಕ್ಷೆ ಇತ್ತು.
ರೈಲ್ವೆಯ ಆದಾಯ ಹೆಚ್ಚಿಸಲು ದೇಶಾದ್ಯಂತ ವಿವಿಧ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಹೊಸ ರೈಲುಗಳ ಘೋಷಣೆ ನಿರೀಕ್ಷೆ ಇದೆ. ಸರಕು ಸಾಗಣೆ ಕಾರಿಡಾರ್ಗಳಲ್ಲಿ ಈಗಾಗಲೇ ಪೂರ್ವ-ಪಶ್ಚಿಮ ಕಾರಿಡಾರ್ ಮತ್ತು ಇಟಾರ್ಸಿಯಿಂದ ವಿಜಯವಾಡಕ್ಕೆ ಉತ್ತರ-ದಕ್ಷಿಣ ಕಾರಿಡಾರ್ ಘೋಷಿಸಲಾಗಿದೆ.
ಸರ್ಕಾರ 2ನೇ ಶ್ರೇಣಿಯ ನಗರಗಳಲ್ಲಿ ಮೆಟ್ರೋ ರೈಲು ವ್ಯವಸ್ಥೆಯನ್ನು ಪರಿಚಯಿಸಲು ಬಯಸಿದೆ. ಇದು 2030ಕ್ಕೆ ಹಸಿರು ರೈಲು ಸೇವೆ ಆಗುವ ಘೋಷಣೆಯ ಭಾಗವಾಗಿದೆ. ಈಗಾಗಲೇ ಉಡಾನ್ ನಂತಹ ಯೋಜನೆ ಮೂಲಕ 2ನೇ ದರ್ಜೆ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಲು ಪ್ರಯತ್ನ ನಡೆಸಲಾಗಿದೆ. ಈಗ ಮೆಟ್ರೋ ರೈಲಿಗೆ ಆದ್ಯತೆ ನೀಡಲಾಗುತ್ತಿದೆ.
ಕೇಂದ್ರ ಸರ್ಕಾರ ಬಜೆಟ್ನಲ್ಲಿ ಹೈಪರ್ಲೂಪ್ ತಂತ್ರಜ್ಞಾನ ಅಳವಡಿಕೆಯನ್ನು ಘೋಷಣೆ ಮಾಡಬಹುದು. ಪ್ರಯಾಣಿಕರನ್ನು ಸಾಗಿಸುವ ಪಾಡ್ಗಳು ಟ್ಯೂಬ್ಗಳು ಅಥವಾ ಸುರಂಗಗಳ ಮೂಲಕ ಸಂಚಾರ ನಡೆಸುತ್ತವೆ. ವಿದೇಶದಲ್ಲಿ ಇವುಗಳು ಚಾಲ್ತಿಯಲ್ಲಿದ್ದು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸುವ ನಿರೀಕ್ಷೆ ಇದೆ.
'ಕಾಲಕಲ್ಪ' ಎಂಬ ಘೋಷಣೆಯಡಿ ದೇಶದ 500 ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಘೋಷಣೆ ನಿರೀಕ್ಷೆ ಇದೆ. ಇದರ ಜೊತೆ ಹಲವು ರೈಲು ಸೇವೆಗಳ ವಿಸ್ತರಣೆ, ಕೆಲವು ಹೊಸ ರೈಲು ಮಾರ್ಗದ ಸಮೀಕ್ಷೆಗೆ ಸಹ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.