ಕೇಂದ್ರ ಬಜೆಟ್ 2022-23: ಫೆ.1ರಂದು 4ನೇ ಆಯವ್ಯಯ ಮಂಡನೆಗೆ ನಿರ್ಮಲಾ ಸೀತಾರಾಮನ್ ಸಜ್ಜು

ನವದೆಹಲಿ, ಜನವರಿ 27: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ 2022-23 ಅನ್ನು ಮಂಡಿಸಲಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ 10ನೇ ಬಜೆಟ್ ಮತ್ತು ಸೀತಾರಾಮನ್ ಮಂಡಿಸುತ್ತಿರುವ ನಾಲ್ಕನೇ ಬಜೆಟ್ ಆಗಿದೆ.

ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡುವ ಮೂಲಕ ಸಂಸತ್ತಿನಲ್ಲಿ ಬಜೆಟ್ ಅಧಿವೇಶನವನ್ನು ಪ್ರಾರಂಭಿಸಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಪತ್ರದಲ್ಲಿ ತಿಳಿಸಿದ್ದಾರೆ.

ಬಜೆಟ್ ಅಧಿವೇಶನದ ಮೊದಲಾರ್ಧವು ಜನವರಿ 31 ರಿಂದ ಫೆಬ್ರವರಿ 11 ರವರೆಗೆ ನಡೆಯುತ್ತದೆ, ದ್ವಿತೀಯಾರ್ಧವು ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ಇರುತ್ತದೆ. ರಾಜ್ಯಸಭೆಯಲ್ಲಿ ಬಜೆಟ್ ಮಂಡಿಸುವ ಮೊದಲು ಸಂಸತ್ತಿನ ಕೆಳಮನೆ ಎನಿಸಿರುವ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ. ಆದರೆ, ಬಜೆಟ್‌ಗೆ ಒಂದು ದಿನ ಮೊದಲು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆ ಮಂಡಿಸುವ ಸಾಧ್ಯತೆಯಿದೆ.

Budget 2022-23 : FM Nirmala Sitharaman Set to Present Her Fourth Budget on Feb 1, 2022

ಭಾರತದಲ್ಲಿ ಕೊವಿಡ್-19 ನಂತರ ಆರ್ಥಿಕತೆಯ ಚೇತರಿಕೆ:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ತತ್ತರಿಸಿದ ದೇಶದ ಆರ್ಥಿಕತೆ ನಿಧಾನಗತಿಯಲ್ಲಿ ಚೇತರಿಕೆಯ ಹಾದಿಗೆ ಬರುತ್ತಿದೆ. ಈ ಹಂತದಲ್ಲಿ ಮಂಡನೆ ಆಗುತ್ತಿರುವ ಕೇಂದ್ರ ಬಜೆಟ್ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಆದಾಗ್ಯೂ, ರಿಸರ್ವ್ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ಶೇಕಡಾ 9.5ರಷ್ಟು ಮುನ್ಸೂಚನೆ ಉಳಿಸಿಕೊಂಡಿದೆ. ಆದರೆ, ಆರ್ಥಿಕ ಚೇತರಿಕೆಯು ಸ್ವಾವಲಂಬಿ ಮತ್ತು ದೀರ್ಘಾವಧಿ ಬಾಳಿಕೆ ಬರುವಷ್ಟು ಪ್ರಬಲವಾಗಿಲ್ಲ ಎಂದು ಎಚ್ಚರಿಸಿದೆ.

ಕಳೆದ ತಿಂಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (ಯುಟಿ) ಹಣಕಾಸು ಸಚಿವರೊಂದಿಗೆ ನಡೆಸಿದ ಬಜೆಟ್ ಪೂರ್ವ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಸ್ವತಃ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಹಿಸಿಕೊಂಡಿದ್ದರು. ಕಳೆದ ವರ್ಷ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ವದೇಶಿ ಬಜೆಟ್ ಪ್ರತಿಯನ್ನು ಟ್ಯಾಬ್ಲೆಟ್‌ಗೆ ಬದಲಾಯಿಸಲಾಯಿತು. ಆ ಮೂಲಕ ಕೇಂದ್ರ ಬಜೆಟ್ ಅನ್ನು ಮೊದಲ ಬಾರಿಗೆ ಪೇಪರ್ ಲೆಸ್ ಆಗಿ ವಿತರಿಸಲಾಯಿತು.

ಸಂಸತ್ತಿನ ಸದಸ್ಯರು ಮತ್ತು ಸಾರ್ವಜನಿಕರು ಸರಳ ಹಾಗೂ ಡಿಜಿಟಲ್ ರೂಪದಲ್ಲಿ ಬಜೆಟ್ ಪ್ರತಿಯನ್ನು ಪಡೆಯಲು ಅನುಕೂಲ ಕಲ್ಪಿಸಲಾಯಿತು. ಇದರ ಜೊತೆ ಬಜೆಟ್ ದಾಖಲೆಗಳ ಬಳಕೆಗಾಗಿ "ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್" ಅನ್ನು ಪ್ರಾರಂಭಿಸಲಾಗಿತ್ತು. ಆದರೆ, ಈ ವರ್ಷದ ಬಜೆಟ್ ಮಂಡನೆಯ ಸ್ವರೂಪ ಹೇಗಿರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಆರೋಗ್ಯ ವಲಯದ ಮೇಲೆ ಹೆಚ್ಚಿನ ನಿರೀಕ್ಷೆ:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಎದುರಾಗುತ್ತಿರುವ ನಿರಂತರ ಸವಾಲುಗಳಿಂದಾಗಿ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಹೆಚ್ಚಿಸುವ ಅನಿವಾರ್ಯತೆ ಸೃಷ್ಟಿ ಆಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಹೇಳಲಾಗುತ್ತಿದೆ. ಕೊರೊನಾವೈರಸ್ ರೂಪಾಂತರ ದಾಳಿಯನ್ನು ಎದುರಿಸಲು ಆರ್ಥಿಕತೆಯು ಪ್ರಮುಖ ಪಾತ್ರ ವಹಿಸಿದೆ ಎಂದು ಅಸೋಚಾಮ್ ಪ್ರಧಾನ ಕಾರ್ಯದರ್ಶಿ ದೀಪಕ್ ಸೂದ್ ಹೇಳಿದ್ದಾರೆ. "ಆದರೆ ಈ ವೇಗವನ್ನು ಉಳಿಸಿಕೊಳ್ಳಲು ಬೆಳವಣಿಗೆ ಉತ್ತೇಜಿಸುವ ಅವಶ್ಯಕತೆಯಿದೆ. ಅದು ಸಾಮಾನ್ಯ ಪುರುಷ ಮತ್ತು ಮಹಿಳೆಗೆ ಪರಿಹಾರವನ್ನು ನೀಡುತ್ತದೆ," ಎಂದು ಕೂಡಾ ಅಸೋಚಾಮ್ ಪ್ರಧಾನ ಕಾರ್ಯದರ್ಶಿ ದೀಪಕ್ ಸೂದ್ ತಿಳಿಸಿದ್ದಾರೆ.

ಸಹಾಯದ ನಿರೀಕ್ಷೆಯಲ್ಲಿ ಆಟೋಮೋಟಿವ್ ಉದ್ಯಮ:

ಕೇಂದ್ರ ಬಜೆಟ್‌ನಲ್ಲಿ ಆಟೋಮೋಟಿವ್ ಉದ್ಯಮಕ್ಕೆ ಸಹಾಯ ಮಾಡಲು ದೇಶದಾದ್ಯಂತ ಆಟೋಮೊಬೈಲ್ ಡೀಲರ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳನ್ನು ಪ್ರತಿನಿಧಿಸುವ ಉನ್ನತ ಸಂಸ್ಥೆಯಾದ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ​​(ಎಫ್‌ಎಡಿಎ) ತನ್ನ ಶಿಫಾರಸುಗಳನ್ನು ಸರ್ಕಾರಕ್ಕೆ ನೀಡಿದೆ. ಸರ್ಕಾರ ಈ ಪ್ರಸ್ತಾಪ ಪರಿಗಣಿಸಿದರೆ ದ್ವಿಚಕ್ರ ವಾಹನ, ಸೆಕೆಂಡ್‌ಹ್ಯಾಂಡ್‌ ಕಾರುಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸುವ ನಿರೀಕ್ಷೆಯಿದೆ. ದೇಶದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ಅಡಿಯಲ್ಲಿ ತರಲು ಕೇಂದ್ರ ಮತ್ತು ರಾಜ್ಯಗಳಿಗೆ ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ.

ಕೇಂದ್ರ ಬಜೆಟ್ ಮೇಲೆ ಕರ್ನಾಟಕದ ನಿರೀಕ್ಷೆಗಳು:

ಸಾಂಸ್ಕೃತಿಕ ನಗರಿ ಮೈಸೂರು ದೇಶದ ಪ್ರಮುಖ ಪ್ರವಾಸಿ ತಾಣವಾಗಿದ್ದು, ಇಲ್ಲಿನ ಬಹುಪಾಲು ಉದ್ಯಮಗಳು ಪ್ರವಾಸೋದ್ಯಮವನ್ನೇ ಅವಲಂಬಿತವಾಗಿವೆ. ಈ ಹಿನ್ನೆಲೆ ಕೇಂದ್ರ ಬಜೆಟ್ ನಲ್ಲಿ ಮೈಸೂರಿಗೆ ಹೆಚ್ಚಿನ ಆದ್ಯತೆ ಸಿಗಬೇಕೆಂದು ವಿವಿಧ ಕ್ಷೇತ್ರಗಳ ಪ್ರಮುಖರು ನಿರೀಕ್ಷೆ ಹೊಂದಿದ್ದಾರೆ.

ಉದ್ದಿಮೆದಾರರಿಗೆ ಸುಲಭವಾಗಿ ಆರ್ಥಿಕ ನೆರವು ದೊರೆಯಬೇಕಿದ್ದು, ಸಬ್ಸಿಡಿ ಬಡ್ಡಿ ದರದಲ್ಲಿ ಈ ಸೌಲಭ್ಯ ದೊರೆಯುವಂತಾಗಬೇಕು. ಮೈಸೂರಿನಲ್ಲಿ ಉತ್ಪಾದನಾ ವಿಭಾಗದಲ್ಲಿ ಎಲೆಕ್ಟ್ರಾನಿಕ್ ಕ್ಲಸ್ಟರ್ ಸೇರಿದಂತೆ ಯಾವುದೇ ಕ್ಲಸ್ಟರ್ ಗಳು ಈವರೆಗೂ ಬಂದಿಲ್ಲ. ಜೊತೆಗೆ ಮೈಸೂರು ಪ್ರಿಂಟಿಂಗ್ ಕ್ಲಸ್ಟರ್ ಯೋಜನೆ ಅನುಷ್ಠಾನಗೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆ ದೇಶಾಧ್ಯಂತ ಕಾರ್ಮಿಕರಿಗೆ ಯೂನಿಕ್ ಐಡಿ ಕಾರ್ಡ್ ಅನ್ನು ಕಡ್ಡಾಯವಾಗಿ ವಿತರಣೆಯಾಗಬೇಕಿದೆ," ಎಂದು ಮೈಸೂರು ಜಿಲ್ಲಾ ಕೈಗಾರಿಕಾ ಒಕ್ಕೂಟದ ಸುರೇಶ್ ಕುಮಾರ್ ಜೈನ್ ಒತ್ತಾಯಿಸಿದ್ದಾರೆ.

ಕರ್ನಾಟಕದ ಕೃಷಿ ವಲಯಕ್ಕೆಆಸರೆ ನಿರೀಕ್ಷೆ:

ಪ್ರತಿಬಾರಿ ಕೇಂದ್ರ ಹಾಗೂ ರಾಜ್ಯ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ನಿರೀಕ್ಷೆ ಹೊಂದಲಾಗುತ್ತದೆ. ಹೀಗಾಗಿ ಈ ಬಾರಿ ಸಹ ರೈತರು ಹಾಗೂ ಕೃಷಿಯನ್ನೇ ಅವಲಂಬಿಸಿರುವವರಿಗೆ ಪ್ರಾಮುಖ್ಯತೆ ನೀಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು. ಕೊರೊನಾವೈರಸ್ ಬಂದು ರೈತರೆಲ್ಲಾ ಸಂಕಷ್ಟದಲ್ಲಿದ್ದು, ಸಾಲ ನೀತಿ ಬದಲಾಗಬೇಕಿದೆ. ಪ್ರಸ್ತುತ ಸಹಕಾರ ಸಂಘ ಹಾಗೂ ಬ್ಯಾಂಕುಗಳಲ್ಲಿ ಶೇ.45ರಷ್ಟು ರೈತರಿಗೆ ಮಾತ್ರವೇ ಸಾಲ ಸೌಲಭ್ಯ ಸಿಗುತ್ತಿದೆ. ಹೀಗಾಗಿ ಎಲ್ಲಾ ರೈತರಿಗೂ ಸಾಲ ಸೌಲಭ್ಯ ಸಿಗುವಂತಾಗಬೇಕಿದ್ದು, ಮುಖ್ಯವಾಗಿ ಜಮೀನಿನ ಆರ್.ಟಿ.ಸಿ ಆಧಾರದಲ್ಲಿ ಬಡ್ಡಿರಹಿತವಾಗಿ ಮೂರು ಲಕ್ಷ ರೂ.ವರೆಗೆ ಸಾಲ ದೊರೆಯಬೇಕು.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ:

ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಸಿಗುವಂತಾಗಬೇಕು. ಬೆಲೆ ಕಡಿಮೆಯಾದ ವೇಳೆ ಸರ್ಕಾರಗಳೇ ಬೆಳೆಯನ್ನು ಖರೀದಿಸಿ ರೈತರಿಗೆ ನೆರವಾಗುವ ಯೋಜನೆ ಜಾರಿಗೊಳಿಸಬೇಕು. ಏಕೆಂದರೆ ಈ ಹಿಂದೆ 2018ರಲ್ಲಿ ರೈತರ ಆದಾಯ ದ್ವಿಗುಣ ಮಾಡುವುದಾಗಿ ಇದೇ ಮೋದಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಈವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ‌ ಸರ್ಕಾರ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲೇಬೇಕು ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+