ಬಿಎಸ್ಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ಮಾಯಾವತಿ
ಲಕ್ನೋ, ಜುಲೈ 17: ಲೋಕಸಭೆ ಚುನಾವಣೆ 2019ರಲ್ಲಿ ಮೋದಿ ನೇತೃತ್ವದ ಎನ್ಡಿಎ ಸೋಲಿಸಲು ವಿವಿಧ ರೀತಿಯಲ್ಲಿ ಯತ್ನಿಸುತ್ತಿರುವ ವಿರೋಧಿಗಳು ಈಗ ದಲಿತ ಮಹಿಳಾ ಪ್ರಧಾನಮಂತ್ರಿ ಎಂಬ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಬಹುಜನ ಸಮಾಜ ಪಕ್ಷದಿಂದ ಮಾಯಾವತಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
2014ರ ಉತ್ತರಪ್ರದೇಶ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲದಿದ್ದರೂ, ಬಿಎಸ್ಪಿ ಈ ಬಾರಿ ಪುಟಿದೇಳುವ ವಿಶ್ವಾಸದಲ್ಲಿದೆ. ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದ ಜತೆ ಕೈಜೋಡಿಸಿ, ಉತ್ತಮ ಫಲಿತಾಂಶ ಪಡೆಯುವಲ್ಲಿ ಪಕ್ಷ ಯಶಸ್ವಿಯಾಗಿದೆ.

ದೇಶದಲ್ಲಿ ದಲಿತರು, ಶೋಷಿತರ ಪರ ದನಿಯೆತ್ತುವವರು ಇಲ್ಲದ್ದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಬದಲಾಯಿಸಲು ದಲಿತರು ಬಯಸಿದ್ದಾರೆ. ಎನ್ಡಿಎಯೇತರ ಸರ್ಕಾರ ಸ್ಥಾಪನೆ ಬಯಸಿದ್ದಾರೆ. ಮಹಾ ಮೈತ್ರಿಕೂಟದ ಭಾಗವಾಗಿ, ಬಿಎಸ್ಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ಮಾಯಾವತಿ ಅವರನ್ನು ಕಣಕ್ಕಿಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಜಯ್ ಪ್ರಕಾಶ್ ಸಿಂಗ್ ಹೇಳಿದ್ದಾರೆ.
ಉತ್ತರಪ್ರದೇಶ ಹಾಗೂ ಕರ್ನಾಟಕದ ಚುನಾವಣೆ ಫಲಿತಾಂಶ ದಿಕ್ಸೂಚಿಯಾಗಿದ್ದು, ದೇಶಕ್ಕೆ ಪ್ರಥಮ ದಲಿತ ಪ್ರಧಾನಿಯನ್ನು ನೀಡುವುದು ನಮ್ಮ ಆಶಯ ಎಂದು ಪ್ರಕಾಶ್ ಸಿಂಗ್ ಹೇಳಿದರು.
'ಬಿಎಸ್ಪಿ ಜೊತೆಗಿನ ನಮ್ಮ ಮೈತ್ರಿ 2019ರಲ್ಲೂ ಮುಂದುವರಿಯಲಿದೆ. ಒಂದೊಮ್ಮೆ ಕೆಲವು ಸ್ಥಾನಗಳನ್ನು ಬಿಟ್ಟು ಕೊಡಬೇಕಾದರೂ ನಾವು ಬಿಟ್ಟುಕೊಡಲಿದ್ದೇವೆ. ಬಿಜೆಪಿ ಸೋಲನ್ನು ನಾವು ಖಚಿತಪಡಿಸಬೇಕಿದೆ," ಎಂದು ಕೈರಾನಾ ಚುನಾವಣೆ ಬಳಿಕ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸ್ಪಷ್ಟವಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications