ಪುಲ್ವಾಮ ದಾಳಿ : ಬಾಂಬ್ ತಯಾರಿ ತರಬೇತಿ ಪಡೆದು ಕಾಶ್ಮೀರಕ್ಕೆ ಬಂದಿದ್ದರು
ಬೆಂಗಳೂರು, ಫೆಬ್ರವರಿ 17 : ಪುಲ್ವಾಮದ ಅವಂತಿಪುರ್ನಲ್ಲಿ ನಡೆದ ಉಗ್ರರ ದಾಳಿಗೆ ಬಾಂಬ್ ಜೋಡಿಸಿದ್ದ ಉಗ್ರ ಪಾಕ್ ಆಕ್ರಮಿತ ಕಾಶ್ಮೀರದಿಂದ ಬಂದಿದ್ದ ಎಂಬುದು ತನಿಖೆಯಿಂದ ಬಹಿರಂಗವಾಗಿದೆ. ಉಗ್ರರ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು.
ಫೆ.14ರ ಗುರುವಾರ ಮಧ್ಯಾಹ್ನ ಪುಲ್ವಾಮದ ಅವಂತಿಪುರ್ನಲ್ಲಿ ಉಗ್ರರು ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದರು. ಸ್ಪೋಟಕಗಳು ತುಂಬಿದ್ದ ವಾಹನವನ್ನು ಯೋಧರು ತೆರಳುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಿ ದಾಳಿ ನಡೆಸಲಾಗಿತ್ತು.
ಜೈಷ್ ಎ ಮೊಹಮ್ಮದ್ ಬಾಂಬ್ ಜೋಡಿಸುವ ಉಗ್ರನಿಗೆ ಮುಜಾಫರಾಬಾದ್ ತನಕ ಬರಲು ವ್ಯವಸ್ಥೆ ಮಾಡಿತ್ತು. ಸುಮಾರು 80 ಕೆಜಿ ಆರ್ಡಿಎಕ್ಸ್ ಅನ್ನು ದಾಳಿಗೆ ಬಳಸಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಇಷ್ಟು ಪ್ರಮಾಣದ ಸ್ಫೋಟಕ ಎಲ್ಲಿಂದ ಸಂಗ್ರಹಿಸಲಾಯಿತು? ಎಂದು ತನಿಖೆ ನಡೆಸುತ್ತಿದ್ದಾರೆ.

ಸೇನಾ ವಾಹನಕ್ಕೆ ಸ್ಕಾರ್ಫಿಯೋವನ್ನು ತಂದು ಡಿಕ್ಕಿ ಹೊಡೆಸಲಾಗಿದೆ ಎಂದು ಮೊದಲು ಶಂಕಿಸಲಾಗಿತ್ತು. ಆದರೆ, ಈಗ ಆಲ್ಟೋ ಕಾರನ್ನು ಬಳಸಿರಬಹುದು ಎಂದು ಪತ್ತೆ ಹಚ್ಚಲಾಗಿದೆ. ಘಟನಾ ಸ್ಥಳದಲ್ಲಿ ಮಾರುತಿ ವಾಹನದ ಬಂಪರ್ ಸಿಕ್ಕಿದ್ದು, ಅದರ ಆಧಾರದ ಮೇಲೆ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ದಾಳಿಯ ರೂವಾರಿ ಮೊಹಮ್ಮದ್ ಉಮೈರ್ ಇನ್ನೂ ಜಮ್ಮು ಮತ್ತು ಕಾಶ್ಮೀರದಲ್ಲಿಯೇ ಇದ್ದಾನೆ ಎಂದು ಶಂಕಿಸಲಾಗಿದೆ. ಉಮೈರ್ ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಆಪ್ತನಾಗಿದ್ದಾನೆ.
ಮೊಹಮ್ಮದ್ ಉಮೈರ್ ಅಫ್ಘಾನಿಸ್ತಾನದಲ್ಲಿ ಬಾಂಬ್ ತಯಾರಿಸುವ ಕುರಿತು, ವಿಧ್ವಂಸಕ ಕೃತ್ಯಗಳನ್ನು ನಡೆಸುವ ಕುರಿತು ತರಬೇತಿ ಪಡೆದಿದ್ದ. ಆದ್ದರಿಂದಲೇ ಸಿರಿಯಾ, ಆಫ್ಘನ್ನಲ್ಲಿ ನಡೆಸುವ ಮಾದರಿಯಲ್ಲಿ ವಾಹನಕ್ಕೆ ಡಿಕ್ಕಿ ಹೊಡೆಸಿ ದಾಳಿ ನಡೆಸಲಾಗಿದೆ.












Click it and Unblock the Notifications