ಶಾಸಕಿಯರಿಂದ ತಾನು ಕುಳಿತಿದ್ದ ಟ್ರ್ಯಾಕ್ಟರ್ ಎಳೆಸಿದ ಕಾಂಗ್ರೆಸ್ ನಾಯಕ!
ಬೆಂಗಳೂರು, ಮಾ. 11: ರಾಜ್ಯದಲ್ಲಿ 'ಸಿಡಿ' ಬಿಡುಗಡೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಂಡು ಮುನ್ನುಗ್ಗುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರೊಬ್ಬರ ವರ್ತನೆ ಕೂಡ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹರಿಯಾಣದ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ತಾವು ಕುಳಿತಿದ್ದ ಟ್ರ್ಯಾಕ್ಟರ್ ಎಳೆಯಲು ಮಹಿಳಾ ಶಾಸಕಿಯರನ್ನು ಬಳಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಇದೀಗ ಈ ಪ್ರಸಂಗವನ್ನು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ ಅವರು, ಪ್ರತಿಭಟನೆಯ ವೇಳೆ ಶಾಸಕಿಯರನ್ನು ಟ್ರ್ಯಾಕ್ಟರ್ ಹಗ್ಗ ಎಳೆಯಲು ಬಳಸಿಕೊಂಡು "ಜೀತ ಪದ್ಧತಿ"ಯನ್ನು ಕಾಂಗ್ರೆಸ್ ನಾಯಕರು ನೆನಪು ಮಾಡಿದ್ದಾರೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಈ ರೀತಿಯ ವರ್ತನೆ ತೋರಿದ ಹೂಡಾ ಅವರು, ಕಾಂಗ್ರೆಸ್ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ ಎಂದು ಗೀತಾ ವಿವೇಕಾನಂದ ಅವರು ಟೀಕಿಸಿದ್ದಾರೆ.
ಗೌರವಯುತ ಪ್ರತಿಭಟನೆ ಮಾಡುವುದೇ ಅವರ ಉದ್ದೇಶವಾಗಿದ್ದರೆ ಹೂಡಾ ಮತ್ತು ಇತರ ನಾಯಕರು ಶಾಸಕಿಯರನ್ನು ಟ್ರ್ಯಾಕ್ಟರ್ನಲ್ಲಿ ಕುಳ್ಳಿರಿಸಿ ತಾವು ಹಗ್ಗದಿಂದ ವಾಹನ ಎಳೆಯಬೇಕಿತ್ತು. ಆದರೆ, ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳೆಯರಿಗೆ ಅವಮಾನ ಮಾಡಲಾಗಿದೆ.
ಪುರುಷ ಮತ್ತು ಮಹಿಳೆಯರ ನಡುವಿನ ಜನಸಂಖ್ಯೆ ಅನುಪಾತವನ್ನು ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ "ಬೇಟಿ ಬಚಾವೊ, ಬೇಟಿ ಪಡಾವೊ" ಕಾರ್ಯಕ್ರಮಕ್ಕೆ ಹರಿಯಾಣ ರಾಜ್ಯದಿಂದ ಚಾಲನೆ ನೀಡಿದ್ದರು. ಅದೇ ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರು ತಮ್ಮ ಕೆಟ್ಟ ಸಂಸ್ಕೃತಿಯನ್ನು ಅನಾವರಣಗೊಳಿಸಿರವುದು ಖಂಡನೀಯ ಎಂದು ಗೀತಾ ವಿವೇಕಾನಂದ ಅವರು ತಿಳಿಸಿದ್ದಾರೆ.