BREAKING: ನಾಳೆಯ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್: ಸಂಘಟನೆಗಳಿಗೆ ಆದೇಶ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಂಮೇ 20ರಂದು (ಬುಧವಾರ) ಕರೆ ನೀಡಿದ್ದ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್ ಒಂದು ದಿನ ಮುನ್ನ ಇಂದು (ಮೇ 19) ಮಂಗಳವಾರ ಬ್ರೇಕ್ ಹಾಕಿದೆ. ಸಂಘಟನೆಗಳಿಗೆ ಮಹತ್ವದ ಆದೇಶ ನೀಡುವ ಜೊತೆಗೆ ರಾಜ್ಯ ಸರ್ಕಾರಕ್ಕೂ ನೋಟಿಸ್ ಸಹ ಜಾರಿ ಮಾಡಿದೆ.
ವೇತನ ಪರಿಷ್ಕರಣೆ, ಹಿಂಬಾಕಿ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲೇಬೇಕು. ಈಡೇರುವವರೆಗೆ ಹೋರಾಟ ನಡೆಸಲಾಗುವುದು ಎಂದಿದ್ದ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಮುಷ್ಕರಕ್ಕೆ ಕರೆ ಕೊಟ್ಟಿತ್ತು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಇಂದು ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಕೆ. ಮನ್ಮಥರಾವ್ ಅವರಿದ್ದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಮುಷ್ಕರ ನಡೆಸದಂತೆ ಸರ್ಕಾರ ಮತ್ತು ಸಂಘಟನೆಗಳಿಗೆ ನೋಟಿಸ್ ಜಾರಿ ಮಾಡಿದೆ. ಸಾರಿಗೆ ಇಲಾಖೆ, ಸಚಿವರೊಂದಿಗೆ ಚರ್ಚಿಸುವಂತೆ ಸಂಘಟನೆಗಳಿಗೆ ಆದೇಶ ಹೊರಡಿಸಿದೆ.

ಗುರುವಾರವರೆಗೆ ಮುಷ್ಕರ ಬೇಡ: ಹೈಕೋರ್ಟ್
ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು ಮುಷ್ಕರಕ್ಕೆ ತಡೆ ನೀಡಿದೆ. ಮುಷ್ಕರ ಮುಂದುವರಿಸಬೇಡಿ. ಸರ್ಕಾರದೊಂದಿಗೆ ಚರ್ಚಿಸಬೇಕು. ಗುರುವಾರವರೆಗೆ ಮುಷ್ಕರ ನಡೆಸದಂತೆ ನಿರ್ದೇಶಿಸಿತು. ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿಕೆ ಮಾಡಿತು.
ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಹಿನ್ನಡೆ
ನಾಳೆಯ ಸಾರಿಗೆ ಮುಷ್ಕರ ಹಿನ್ನೆಲೆ ಕೆಲಸಕ್ಕೆ ಹಾಜರಾಗುವಂತೆ ರಾಜ್ಯ ಸರ್ಕಾರ ಎಸ್ಮಾ ಜಾರಿಗೆ ಮಾಡಿ ಎಚ್ಚರಿಕೆ ನೀಡಿತ್ತು. ಕೆಲಸಕ್ಕೆ ಗೈರಾದವರ ವಿರುದ್ಧ ಶಿಸ್ತು ಕ್ರಮ ಜೊತೆಗೆ' ನೋ ವರ್ಕ್ ನೋ ಪೇ' ಕ್ರಮ ತೆಗೆದುಕೊಳ್ಳುವ ಬಗ್ಗೆ ಸ್ಪಷ್ಟಪಡಿಸಿತ್ತು. ಆದರೂ ಮುಷ್ಕರ ನಡೆಸಿಯೇ ತೀರಲಾಗುತ್ತದೆ ಎಂದು ಸಂಘಟನೆಗಳು ಹೇಳಿದ್ದವು.
ಇದರ ಬೆನ್ನಲ್ಲೆ ಮುಷ್ಕರ ಬಗ್ಗೆ ಒಂದಷ್ಟು ಗೊಂದಲವಿದ್ದಂತೆ ತೋರಿತು. ಏಕೆಂದರೆ ಎಸ್ಸಿ, ಎಸ್ಟಿ ನೌಕರರ ಸಂಘವು ಸೋಮವಾರ ಮತ್ತು ಕೆಎಸ್ಆರ್ಟಿಸಿ ನೌಕರರ ಸಂಘವು ಮಂಗಳವಾರ ಕಾರ್ಮಿಕ ಸಂಘಟನೆಗಳು ಜಂಟಿ ಕ್ರಿಯಾ ಸಮಿತಿಗೆ ನೀಡಿದ್ದ ಬೆಂಬಲ ಹಿಂಪಡೆದಿದ್ದಾಗಿ ಘೋಷಿಸಿದವು. ಜೊತೆಗೆ ಜಂಟಿ ಕ್ರಿಯಾ ಸಮಿತಿಯಿಂದ ಅಧಿಕೃತಿವಾಗಿ ಹೊರ ಬಂದಿವೆ. ಅದರ ಬೆನ್ನಲ್ಲೆ ಇಂದು ಹೈಕೋರ್ಟ್ ಮುಷ್ಕರಕ್ಕೆ ತಡೆ ನೀಡಿದೆ. ಇದೆಲ್ಲ ಬೆಳವಣಿಗೆಯಿಂದ ಮುಷ್ಕರಕ್ಕೆ ಕರೆ ನೀಡಿದ್ದ ಜಂಟಿ ಕ್ರಿಯಾ ಸಮಿತಿಗೆ ಹಿನ್ನಡೆ ಉಂಟಾದಂತಾಗಿದೆ.












Click it and Unblock the Notifications