ದೆಹಲಿ ಮುಖ್ಯಮಂತ್ರಿಯಾಗು ಎಂದಿದ್ದ ಬಿಜೆಪಿ
ಹೊಸದೆಹಲಿ, ಆ. 30 : 'ಬಿಜೆಪಿ ನನಗೆ ದೆಹಲಿ ಮುಖ್ಯಮಂತ್ರಿ ಹುದ್ದೆ ಆಮಿಷ ನೀಡಿತ್ತು' ಎನ್ನುವ ಮೂಲಕ ಆಮ್ ಆದ್ಮಿ ಪಕ್ಷದ ಮುಖಂಡ ಕುಮಾರ್ ವಿಶ್ವಾಸ್ ಹೊಸ ಬಾಂಬ್ ಸಿಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಮೂರು ದಿನದ ತರುವಾಯ ಅಂದರೆ ಮೇ 19ರಂದು ಬಿಜೆಪಿಯ ಸಂಸದರೊಬ್ಬರು ಗಜಿಯಾಬಾದ್ ನಿವಾಸದಲ್ಲಿ ನನ್ನನ್ನು ಭೇಟಿಯಾಗಿದ್ದರು. ಮಾತುಕತೆ ನಡೆಸಿ ನನಗೆ ದೆಹಲಿ ಮುಖ್ಯಮಂತ್ರಿ ಸ್ಥಾನ ನೀಡುವ ಆಮಿಷ ಒಡ್ಡಿದ್ದರು ಎಂದು ಆರೋಪಿಸಿದ್ದಾರೆ.

ಅಂದು ಬೆಳಗ್ಗೆ ನನ್ನ ಮನೆಗೆ ಆಗಮಿಸಿದ ಬಿಜೆಪಿ ಸಂಸದ ಮಧ್ಯಾಹ್ನ 3.30ರ ವರೆಗೂ ಇದ್ದರು. ಈ ವೇಳೆ ನನಗೆ ದೆಹಲಿ ಮುಖ್ಯಮಂತ್ರಿ ಸ್ಥಾನ ನೀಡುತ್ತೇನೆ. ನೀವು ಬಿಜೆಪಿ ಬೆಂಬಲಿಸಬೇಕು. ಇದಕ್ಕೆ ನಿಮ್ಮ ಪಕ್ಷದ 12 (ಆಮ್ ಆದ್ಮಿ ) ಶಾಸಕರ ಬೆಂಬಲವೂ ಇದೆ. ಅವರೊಂದಿಗೆ ನಾನು ಮಾತನಾಡಿದ್ದೇನೆ. ಇದಕ್ಕೆ ಬಿಜೆಪಿಯ ಹಿರಿಯ ನಾಯಕರ ಬೆಂಬಲವೂ ಇದೆ ಎಂದು ನನ್ನನ್ನು ಅವರ ದಾರಿಗೆ ತರಲು ಪ್ರಯತ್ನಿಸಿದ್ದರು ಎಂದು ವಿಶ್ವಾಸ್ ಆರೋಪಿಸಿದ್ದಾರೆ.
ನನ್ನ ಪಕ್ಷಕ್ಕೆ ನಾನು ಸದಾ ನಿಷ್ಠನಾಗಿದ್ದು ಬಿಜೆಪಿ ಜತೆ ಕೈಜೋಡಿಸಲಿಲ್ಲ. ನನಗೆ ಎಂಪಿ ಆಗಬೇಕು, ಮುಖ್ಯಮಂತ್ರಿಯಾಬೇಕು, ಅದರಿಂದ ಮಾತ್ರ ಜನಸೇವೆ ಮಾಡಲು ಸಾಧ್ಯ ಎಂಬ ಯಾವ ಬಯಕೆಯೂ ಇಲ್ಲ ಎಂದು ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಎದುರು ಸೋತ ವಿಶ್ವಾಸ್ ಹೇಳಿದ್ದಾರೆ.
ಈ ಹೇಳಿಕೆ ದೆಹಲಿ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದು ಬಿಜೆಪಿ ಮತ್ತು ಆಮ್ ಆದ್ಮಿ ನಾಯಕರು ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿದ್ದಾರೆ. ಬಿಜೆಪಿ ಕುತಂತ್ರದ ರಾಜಕಾರಣ ಮಾಡುತ್ತಿದ್ದು ನಮ್ಮ ಪಕ್ಷದ ಸದಸಯರನ್ನು ವಾಮಮಾರ್ಗದ ಮೂಲಕ ಸೆಳೆಯುವ ಯತ್ನ ನಡೆಸುತ್ತಿದೆ ಎಂದು ಎಪಿಪಿ ಮುಖಂಡ ಸೋಮನಾಥ ಭಾರ್ತಿ ಆರೋಪಿಸಿದ್ದಾರೆ.
ಎಪಿಪಿ ಮುಖಂಡರಿಗೆ ಸದಾ ಪ್ರಚಾರದಲ್ಲಿರುವ ಹುಚ್ಚು. ಹಾಗಾಗಿ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ದೂರಿದ್ದಾರೆ.












Click it and Unblock the Notifications