ಗುಜರಾತ್ ಗೆಲುವು: ಕಾಂಗ್ರೆಸ್ಸನ್ನು ಅಮಿತ್ ಶಾ ಕೆಣಕಿದ್ದು ಹೀಗೆ
ನವದೆಹಲಿ, ಡಿ 25: ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ನಮ್ಮದೇ ನೈತಿಕ ಗೆಲುವು ಎಂದು ಬೀಗುತ್ತಿರುವ ಕಾಂಗ್ರೆಸ್ಸಿಗೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತನ್ನದೇ ಶೈಲಿಯಲ್ಲಿ ಕೆಣಕಿದ್ದಾರೆ.
ಭಾನುವಾರ (ಡಿ 24) ಐದು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅಮಿತ್ ಶಾ, ಉಪಚುನಾವಣೆ ನಡೆದ ಐದು ಕ್ಷೇತ್ರಗಳಲ್ಲಿ ಮೂರರಲ್ಲಿ ಬಿಜೆಪಿ ಜಯಗಳಿಸಿದೆ, ಇದನ್ನೂ ಕಾಂಗ್ರೆಸ್ ನವರು ನೈತಿಕ ಗೆಲುವು ಎಂದು ಹೇಳುತ್ತಾರಾ ಎಂದು ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಗೆದ್ದ ನಂತರ ಉಪಚುನಾವಣೆಯಲ್ಲೂ ನಾವು ಮೇಲುಗೈ ಸಾಧಿಸಿದ್ದೇವೆ. ಉತ್ತರಪ್ರದೇಶದ ಒಂದು ಮತ್ತು ಅರುಣಾಚಲ ಪ್ರದೇಶದಲ್ಲಿನ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದೇವೆ.

ಉತ್ತರಪ್ರದೇಶದ ಸಿಕಂದ್ರಾ ಕ್ಷೇತ್ರದಲ್ಲಿ, ಸಮಾಜವಾದಿ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಿ ಬಿಎಸ್ಪಿ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿಲ್ಲ. ಆದರೂ, ಅಲ್ಲಿನ ನಮ್ಮ ಸರಕಾರದ ಉತ್ತಮ ಆಡಳಿತ ಮತ್ತು ಕಾರ್ಯಕರ್ತರ ಬೆಂಬಲದಿಂದಾಗಿ, ಮತದಾರ ನಮ್ಮನ್ನು ಆಶೀರ್ವದಿಸಿದ್ದಾರೆಂದು ಅಮಿತ್ ಶಾ ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಲಿಕಾಬಾಲಿ ಮತ್ತು ಪಕ್ಕೇ ಕೇಸಂಗ್ ಕ್ಷೇತ್ರದಲ್ಲೂ ನಾವು ಜಯಗಳಿಸಿದ್ದೇವೆ. ಈಶಾನ್ಯ ಭಾರತದ ಅಭಿವೃದ್ದಿಗೆ ವಿಶೇಷ ಶ್ರಮವಹಿಸುತ್ತಿರುವ ಪ್ರಧಾನಿಯವರ ಜನಪರ ಕೆಲಸದಿಂದ ನಾವು ಅಲ್ಲಿ ಜಯಭೇರಿ ಬಾರಿಸಿದ್ದೇವೆ.
ಪಶ್ಚಿಮ ಬಂಗಾಳದ ಸಬಂಗ್ ಕ್ಷೇತ್ರದಲ್ಲಿ ನಾವು ಟಿಎಂಸಿ ಅಭ್ಯರ್ಥಿಯ ವಿರುದ್ದ ಸೋತಿದ್ದೇವೆ. ಆದರೆ ಈ ಚುನಾವಣೆ ಬಂಗಾಳದಲ್ಲಿ ನಮ್ಮ ಬುನಾದಿ ಹೆಚ್ಚುತ್ತಿರುವುದಕ್ಕೆ ಉದಾಹರಣೆಯಾಗಿದೆ. ಅಲ್ಲಿ ಟಿಎಂಸಿ ಮತ್ತು ಎಡಪಕ್ಷಗಳ ವಿರುದ್ದ ನಾವು ಪ್ರಭುತ್ವ ಸಾಧಿಸುವ ದಿನ ದೂರವಿಲ್ಲಎಂದು ಅಮಿತ್ ಶಾ, ಭರವಸೆಯ ಮಾತನ್ನಾಡಿದ್ದಾರೆ.

ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಉಪಚುನಾವಣೆಯಲ್ಲಿ ಉತ್ತರಪ್ರದೇಶ, ಪಶ್ಚಿಮಬಂಗಾಳ, ಅರುಣಾಚಲ ಪ್ರದೇಶದಲ್ಲಿ ಜನ ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ಸಿನ ಭ್ರಷ್ಟ ಆಡಳಿತವನ್ನು ಜನ ಇನ್ನೂ ಇನ್ನೋ ಒಪ್ಪಿಕೊಳ್ಳಲು ಸಾಧ್ಯವೇ ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.
ಉತ್ತರಪ್ರದೇಶ (1), ಅರುಣಾಚಲ ಪ್ರದೇಶ (2), ತಮಿಳುನಾಡು (1) ಮತ್ತು ಪಶ್ಚಿಮಬಂಗಾಳದ (1) ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ, ಬಿಜೆಪಿ ಮೂರು, ಟಿಎಂಸಿ ಮತ್ತು ಪಕ್ಷೇತರ (ಟಿಟಿವಿ ದಿನಕರನ್, ಆರ್ ಕೆ ನಗರ, ತಮಿಳುನಾಡು) ಅಭ್ಯರ್ಥಿಗಳು ತಲಾ ಒಂದೊಂದು ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ.












Click it and Unblock the Notifications