ಕೊರೊನಾ ನಿಯಮ ಉಲ್ಲಂಘಿಸಿದ ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ
ಡೆಹ್ರಾಡೂನ್, ಸೆ 28: ಕೊರೊನಾ ಸೋಂಕಿತರು ಅಥವಾ ಸೋಂಕಿತರ ಸಂಪರ್ಕದಲ್ಲಿದ್ದವರು ಕ್ವಾರಂಟೈನ್ ಗೆ ಒಳಪಡಬೇಕು ಎನ್ನುವ ನಿಯಮವನ್ನು, ಬಿಜೆಪಿಯ ಹಿರಿಯ ನಾಯಕಿ, ಮಾಜಿ ಸಚಿವೆ ಉಮಾ ಭಾರತಿ ಉಲ್ಲಂಘಿಸಿದ್ದಾರೆ.
ಉತ್ತರಾಖಾಂಡ ಸರಕಾರದ ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ಜೊತೆ ಉಮಾ ಭಾರತಿ ಕೇದಾರನಾಥಗೆ ತೆರಳಿದ್ದರು. ಸಚಿವ ರಾವತ್ ಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಕೋವಿಡ್ ನಿಯಮದ ಪ್ರಕಾರ, ಅವರ ಸಂಪರ್ಕದಲ್ಲಿದ್ದವರೂ ಕ್ವಾರಂಟೈನ್ ಗೆ ಒಳಪಡಬೇಕಿತ್ತು.
ಮುಂದಿನ ಕೆಲವು ದಿನಗಳ ಕಾಲ ಎಲ್ಲೂ ಪ್ರಯಾಣಿಸದಂತೆ, ವೈದ್ಯರು ಉಮಾ ಭಾರತಿಗೆ ಸೂಚಿಸಿದ್ದರು. ಆದರೂ, ವೈದ್ಯರ ಸಲಹೆಯನ್ನು ಮೀರಿ, ಉಮಾ ಭಾರತಿ ಬದರೀನಾಥ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೇ, ಅಲ್ಲಿ ಹಲವು ಜನರನ್ನು, ದೇವಾಲಯದ ಆಡಳಿತ ಮಂಡಳಿ ಮತ್ತು ಅರ್ಚಕರನ್ನು ಭೇಟಿಯಾಗಿದ್ದರು.

"ಸಚಿವ ರಾವತ್ ಅವರಿಗೆ ಸೋಂಕು ತಗಲಿದ ನಂತರ, ವೈದ್ಯರ ತಂಡವನ್ನು ಕರೆಸಿಕೊಂಡು, ತನ್ನ ಮತ್ತು ತನ್ನ ಜೊತೆಗಿರುವವರ ಟೆಸ್ಟ್ ಅನ್ನು ಉಮಾ ಭಾರತಿ ಮಾಡಿಸಿಕೊಂಡಿದ್ದರು"ಎಂದು ರುದ್ರಪ್ರಯಾಗದ ವೈದ್ಯಾಧಿಕಾರಿ ಡಾ.ಡಿ.ಪಿ.ಶುಕ್ಲಾ ಹೇಳಿದ್ದಾರೆ.
ಸೆಪ್ಟಂಬರ್ ಮೂವತ್ತರಂದು, ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನ ವಿಶೇಷ ನ್ಯಾಯಾಲಯ ಅಂತಿಮ ತೀರ್ಪನ್ನು ನೀಡಲಿದೆ. ಅಂದು, ಕೋರ್ಟಿನಲ್ಲಿ ಖುದ್ದು ಹಾಜರಿರುವಂತೆ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಷಿ ಮತ್ತು ಉಮಾ ಭಾರತಿಗೆ ನ್ಯಾಯಾಲಯ ಸೂಚಿಸಿದೆ.
''ನಾನು ವಂದೇ ಮಾತರಂ ಕುಂಜ್ ನಲ್ಲಿ ಕ್ವಾರಂಟೈನ್ ನಲ್ಲಿದ್ದೇನೆ. ಹರಿದ್ವಾರ ಹಾಗೂ ಋಷಿಕೇಶದ ನಡುವೆ ಇರುವ ತಾಣ ಇದಾಗಿದೆ. ಇನ್ನು ನಾಲ್ಕು ದಿನಗಳ ನಂತರ ಮತ್ತೊಮ್ಮೆ ಕೊವಿಡ್ 19 ಪರೀಕ್ಷೆಗೆ ಒಳಪಡುತ್ತೇನೆ. ಪರಿಸ್ಥಿತಿ ಹೀಗೆ ಮುಂದುವರೆದರೆ ವೈದ್ಯರ ಸಲಹೆಯಂತೆ ಮುಂದುವರೆಯುತ್ತೇನೆ'' ಎಂದು ಉಮಾ ಭಾರತಿ ಸರಣಿ ಟ್ವೀಟ್ ಮಾಡಿದ್ದರು.












Click it and Unblock the Notifications