ಬಿಜೆಪಿಗೆ 37: ಪಕ್ಷದ ಮುಂದಿರುವ 10 ಸವಾಲುಗಳು
ಪಕ್ಷದ ಮುಂದಿನ ಹಾದಿ ಹೂವಿನ ಹಾಸಿಗೆಯಾಗಿರುತ್ತದೆ ಎಂದರ್ಥವಲ್ಲ. ಮುಂದಿನ ಹಾದಿ ಕಲ್ಲು ಮುಳ್ಳು ಅಥವಾ ಒರಟಾದ, ಕಚ್ಚಾ ರಸ್ತೆಯಿಂದ ಕೂಡಿರುವಂಥದ್ದು.
ಇಂದು (ಏಪ್ರಿಲ್ 6) ಬಿಜೆಪಿಯ ಸಂಸ್ಥಾಪನಾ ದಿನಾಚರಣೆ. 1980ರ ಈ ದಿನ ಅಸ್ತಿತ್ವಕ್ಕೆ ಬಂದ ಭಾರತೀಯ ಜನತಾ ಪಾರ್ಟಿ, ಜನರಿಂದ, ಜನರೊಂದಿಗೆ, ಜನರಿಗಾಗಿ ಬೆಳೆದು ಬಂದ ಪಕ್ಷ.
ಇಂದು, ಭಾರತದ 17 ರಾಜ್ಯಗಳಲ್ಲಿ ಸರ್ಕಾರ ರಚಿಸುವ ಮಟ್ಟಕ್ಕೆ ಅದು ಬೆಳೆದು ನಿಂತಿರುವುದರ ಹಿಂದೆ ದೊಡ್ಡ ಹಲವರ ತ್ಯಾಗ, ಪರಿಶ್ರಮದ ಸಂಗಮವಿದೆ.
ಈ 17 ರಾಜ್ಯಗಳಲ್ಲಿ ಬಿಜೆಪಿ ಕೈಯ್ಯಲ್ಲಿ ಅಧಿಕಾರವಿದ್ದರೂ, ಬಿಜೆಪಿಯ ಮುಖ್ಯಮಂತ್ರಿಗಳಿರುವುದು 13ರಲ್ಲಿ ಮಾತ್ರ. ಜಮ್ಮು ಕಾಶ್ಮೀರ, ಆಂಧ್ರ ಪ್ರದೇಶ, ನಾಗಾಲ್ಯಾಂಡ್, ಸಿಕ್ಕಿಂ ಗಳಲ್ಲಿ ಇದು ಸಮ್ಮಿಶ್ರ ಸರ್ಕಾರಗಳಲ್ಲಿ ಪಾಲುದಾರ ಪಕ್ಷವಾಗಿರುದರಿಂದ ಅಲ್ಲಿ ಈ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಲಭ್ಯವಾಗಿಲ್ಲ.
ಅದೇನೇ ಇರಲಿ, ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಿಕ್ಕಿರುವ ಅಮೋಘ ಜಯ, ರಾಷ್ಟ್ರದ ಜನತೆಯ ಮೇಲೆ ಬಿಜೆಪಿ ಪಕ್ಷದ ಪ್ರಭಾವ ಎಷ್ಟಿದೆ ಎಂಬುದನ್ನು ಸಾಬೀತುಪಡಿಸಿದೆ.
ಹಾಗೆಂದ ಮಾತ್ರಕ್ಕೇ, ಪಕ್ಷದ ಮುಂದಿನ ಹಾದಿ ಹೂವಿನ ಹಾಸಿಗೆಯಾಗಿರುತ್ತದೆ ಎಂದರ್ಥವಲ್ಲ. ಮುಂದಿನ ಹಾದಿ ಕಲ್ಲು ಮುಳ್ಳು ಅಥವಾ ಒರಟಾದ, ಕಚ್ಚಾ ರಸ್ತೆಯಿಂದ ಕೂಡಿರುವಂಥದ್ದು.
ಹಾಗಾದರೆ, ಸದ್ಯದ ಮಟ್ಟಿಗೆ ಬಿಜೆಪಿ ಮುಂದಿರುವ ಸವಾಲುಗಳೇನು ಎಂಬುದರ ಸಂಕ್ಷಿಪ್ತ ವಿಶ್ಲೇಷಣೆ ಇಲ್ಲಿದೆ.

ಅಲ್ಲಿ ಅಧಿಕಾರ ಹಿಡಿಯಬೇಕಿದೆ
ಸವಾಲು 1: ಇಡೀ ಭಾರತದಲ್ಲಿ ಪ್ರಾಂತೀಯ ಪಕ್ಷಗಳ ಹಿಡಿತದಲ್ಲಿರುವ ಏಳು ರಾಜ್ಯಗಳಲ್ಲಿ ಬಿಜೆಪಿಯ ಕಮಲ ಇನ್ನೂ ಅರಳಿಲ್ಲ. ಆ ರಾಜ್ಯಗಳೆಂದರೆ, ಕೇರಳ, ತಮಿಳುನಾಡು, ತೆಲಂಗಾಣ, ತ್ರಿಪುರಾ, ಮೇಘಾಲಯ, ಮಿಜೋರಾಂ ಹಾಗೂ ಪಶ್ಚಿಮ ಬಂಗಾಳ.
ಕೇರಳ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡುಗಳಲ್ಲಿ ಉತ್ತಮ ಯಶಸ್ಸು ಪಡೆಯಬೇಕಾದರೆ ಕನಿಷ್ಠವೆಂದರೂ ಇನ್ನೆರಡು ವಿಧಾನಸಭೆ ಚುನಾವಣೆಗಳನ್ನು ಅದು ಎದುರುಗೊಳ್ಳಬೇಕಿದೆ.
ಸವಾಲು 2: ಮುಂದಿನ ಲೋಕಸಭೆ ಚುನಾವಣೆ ನಡೆಯುವುದು 2019ರಲ್ಲಿ. ಆ ವೇಳೆ ಲೋಕಸಭೆ ಚುನಾವಣೆ ಜತೆಗೆ 15 ರಾಜ್ಯಗಳಲ್ಲಿ ವಿಧಾನ ಸಬೆ ಚುನಾವಣೆಯೂ ನಡೆಯುತ್ತದೆ. ಆ 15 ರಾಜ್ಯಗಳ ಚುನಾವಣೆ ವೇಳೆ 8 ರಾಜ್ಯಗಳಲ್ಲಿ ಬಿಜೆಪಿ ತನ್ನ ಗದ್ದುಗೆಯನ್ನು ಉಳಿಸಿಕೊಳ್ಳಬೇಕಿದೆ. ಆ ರಾಜ್ಯಗಳೆಂದರೆ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಛತ್ತೀಸ್ ಗಢ, ಗುಜರಾತ್, ಮಧ್ಯ ಪ್ರದೇಶ, ನಾಗಾಲ್ಯಾಂಡ್, ರಾಜಸ್ಥಾನ ಹಾಗೂ ಸಿಕ್ಕಿ. ಇದಲ್ಲದೆ, ಈಗಾಗಲೇ ತನ್ನ ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಾದ ಕರ್ನಾಟಕ, ಹಿಮಾಚಲ ಪ್ರದೇಶ, ಮೇಘಾಲಯ, ಮಿಜೋರಂ, ಒಡಿಶಾ, ತೆಲಂಗಾಣ ಹಾಗೂ ತ್ರಿಪುರಗಳಲ್ಲಿ ಅಧಿಕಾರ ಗದ್ದುಗೆಯನ್ನು ಕಸಿದುಕೊಳ್ಳಬೇಕಿದೆ.

ಚುನಾವಣೆಯಲ್ಲಿ ದೊಡ್ಡ ಯಶಸ್ಸು ಗಳಿಸಬೇಕಿದೆ
ಸವಾಲು 3: ಇನ್ನು, ಸಂಸತ್ತಿನ ವಿಚಾರಕ್ಕೆ ಬರುವುದಾದರೆ, ಒಟ್ಟು 245 ಸದಸ್ಯ ಸ್ಥಾನವಿರುವ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಸದ್ಯಕ್ಕೆ 56 ಇದೆ. ತನ್ನ ಮಿತ್ರ ಪಕ್ಷಗಳ ಸದಸ್ಯರನ್ನು ಒಟ್ಟುಗೂಡಿಸಿದರೆ ಬಿಜೆಪಿಗೆ ಒಟ್ಟು 77 ಪ್ರಾತಿನಿಧ್ಯವಿದೆ. ಹಾಗಾಗಿ, 2020ರ ಹೊತ್ತಿಗೆ ರಾಜ್ಯಸಭೆಯಲ್ಲಿ ಸಂಪೂರ್ಣ ಬಹುಮತ ಸಾಧಿಸುವ ಸವಾಲು ಕಮಲ ಪಕ್ಷದ ಮುಂದಿದೆ.
ಸವಾಲು 4: 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ 282 ಸ್ಥಾನಗಳನ್ನು ಗೆದ್ದಿತ್ತು. ತನ್ನ ಮಿತ್ರ ಪಕ್ಷಗಳ ಸಹಾಯದಿಂದ (ಎನ್ ಡಿಎ) ತನ್ನ ಲೋಕಸಭೆಯಲ್ಲಿ ಒಟ್ಟು 336 ಸ್ಥಾನಗಳನ್ನು ಬಿಜೆಪಿ ಪಡೆದಿತ್ತು. ಆದರೆ, 2019ರ ಚುನಾವಣೆಯಲ್ಲಿ ಇದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಯಶಸ್ಸು ಪಡೆಯುವ ನಿಟ್ಟಿನಲ್ಲಿ ಅದು ತಂತ್ರಗಾರಿಕೆಯನ್ನು ರೂಪಿಸಬೇಕಿದೆ.

ನಿರುದ್ಯೋಗ ಸಮಸ್ಯೆ, ಹಣದುಬ್ಬರ ಎದುರಿಸಬೇಕಿದೆ
ಸವಾಲು 5: ಬಿಜೆಪಿಯು ಅಭಿವೃದ್ಧಿಯ ಮೂಲಮಂತ್ರದೊಂದಿಗೆ ಜನರ ಮನಸ್ಸನ್ನು ಗೆದ್ದಿದ್ದೆ ಹಾಗೂ ಗೆಲ್ಲುತ್ತಲೇ ಇದೆ. ಆದರೆ, ಈ ವರ್ಷ ಆ ಪಕ್ಷಕ್ಕೆ ದೊಡ್ಡದೊಂಡು ಸವಾಲು ಎದುರಾಗಲಿದೆ. ಅದು ದೇಶಾದ್ಯಂತ ಏಕಸ್ವರೂಪದ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿ. ಸಾಮಾನ್ಯವಾಗಿ ಈ ಮಾದರಿಯ ತೆರಿಗೆ ಜಾರಿ ಬಂದ ದೇಶಗಳಲ್ಲಿ ಸುಮಾರು 2 ವರ್ಷಗಳ ಕಾಲ ಹಣದುಬ್ಬರ ತಾಂಡವವಾಡಿದೆ. ಭಾರತದಲ್ಲೂ ಜಿಎಸ್ ಟಿ ಜಾರಿಗೊಂಡ ನಂತರ ಹಣದುಬ್ಬರ ಹೆಚ್ಚಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುವ ಸಾಧ್ಯತೆಗಳು ಹೆಚ್ಚು. ಆದರೆ, ಅಷ್ಟರಲ್ಲೇ 2019ರ ಚುನಾವಣೆ ಬರುವುದರಿಂದ ಈ ಸವಾಲನ್ನು ಬಿಜೆಪಿ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸವಾಲು 6: ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳು ಮುಗಿದಿದ್ದರೂ, ಈ ಹಿಂದೆ ಮೋದಿಯವರು ನೀಡಿದ್ದ ಉದ್ಯೋಗ ಖಾತ್ರಿ ಆಶ್ವಾಸನೆ ಸಂಪೂರ್ಣವಾಗಿ ಈಡೇರಿಲ್ಲ. ಇದಲ್ಲದೆ, ಅಪನಗದೀಕರಣದಿಂದಾಗಿ ಅನೇಕ ಜನರು ಕೆಲಸ ಕಳೆದುಕೊಂಡಿದ್ದಾರೆ. ಹೀಗೆ, ನಿರುದ್ಯೋಗ ಸಮಸ್ಯೆ ಹೆಚ್ಚಾದಂತೆಲ್ಲಾ ಮೋದಿಯವರ ಸರ್ಕಾರದ ಮೇಲೆ ಜನರಿಗೆ ಅಸಮಾಧಾನ ಉಂಟಾಗುವುದು ಸಹಜ. ಈ ಸಮಸ್ಯೆಗೆ ಮೋದಿ ಸರ್ಕಾರ ಬೇಗನೇ ಪರಿಹಾರ ಕಂಡುಕೊಳ್ಳಬೇಕಿದೆ.

ಮಧ್ಯಮ, ಕೆಳ ಮಧ್ಯಮ ವರ್ಗಕ್ಕೆ ನೆರವಾಗಬೇಕಿದೆ
ಸವಾಲು 7: ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಬೆಲೆ ಹೆಚ್ಚಳವನ್ನು, ಹಣದುಬ್ಬರವನ್ನು ಖಂಡಿಸಿದ್ದ ಬಿಜೆಪಿಯು ಈಗ ಕೇಂದ್ರದಲ್ಲಿ ತಾನು ಅಧಿಕಾರಕ್ಕೆ ಬಂದ ನಂತರ ಆ ಸಮಸ್ಯೆ ನಿವಾರಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಈಗಲೂ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಅಂಥಾ ಇಳಿಕೆಯೇನಾಗಿಲ್ಲ. ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗಗಳ ಜನರಿಗೆ ಮನೆ, ವಿದ್ಯಾಭ್ಯಾಸ ಹಾಗೂ ಆರೋಗ್ಯ ಎಂಬ ವಿಚಾರಗಳು ಈಗಲೂ ದುಬಾರಿಯೇ ಸರಿ. ಇದನ್ನು ಸರಿಪಡಿಸಲೇಬೇಕಾದ ಅಗತ್ಯವಿದೆ.
ಸವಾಲು 8: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಅತ್ಯಗತ್ಯ. ಈಗಾಗಲೇ ಬಿಜೆಪಿ ಅಧಿಕಾರವಿರುವ ಕೆಲ ರಾಜ್ಯಗಳಲ್ಲಿ ಗೋ ಸಂರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರಗಳು ಆ ಪಕ್ಷದ ಬಗ್ಗೆ ಕೆಟ್ಟ ಅಭಿಪ್ರಾಯ ರೂಪಿಸುವ ಅಪಾಯಗಳನ್ನು ತಳ್ಳಿಹಾಕುವಂತಿಲ್ಲ. ಗೋ ಸಂರಕ್ಷಣೆ ಪ್ರಮುಖ ಅಜೆಂಡಾ ಆಗಿದ್ದರೂ ಅದನ್ನು ಕೂಲಂಕಷವಾಗಿ ನಿಭಾಯಿಸಬೇಕಿದೆ.

ಭಾವನಾತ್ಮಕ ವಿಚಾರಗಳಲ್ಲೂ ಜಾಣ್ಮೆ ಅಗತ್ಯ
ಸವಾಲು 9: ಮೋದಿ ಸರ್ಕಾರದ ವಿರುದ್ಧ ಈವರೆಗೆ ಯಾವುದೇ ದೊಡ್ಡ ಆರ್ಥಿಕ ಹಗರಣಗಳು ಕೇಳಿಬಂದಿಲ್ಲ. ಇದು ಮೋದಿಯವರಿಗೆ, ಬಿಜೆಪಿಗೆ ಪ್ಲಸ್ ಪಾಯಿಂಟ್. ಆದರೂ, ಭಾರತೀಯ ಸಮಾಜದಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಸಾಧ್ಯವಾಗಿಲ್ಲ. 2014ರ ಚುನಾವಣೆಯಲ್ಲೂ 'ನಾ ಖಾವೂಂಗಾ, ನಾ ಖಾನೇ ದೂಂಗಾ' ಎಂದು ಹೇಳುತ್ತಲೇ ಮೋದಿಯವರು ಅಧಿಕಾರ ಗದ್ದುಗೆಗೆ ಏರಿದ್ದರು. ಹಾಗಾಗಿ, ಮುಂದಿನ ಚುನಾವಣೆವರೆಗೂ ಒಂದು ಸಮಾನಾಂತರ ಸ್ಥಿತಿಯನ್ನು ಕಾಪಾಡಿಕೊಳ್ಳುವ ಅಗತ್ಯವಿದೆ.
ಸವಾಲು 10: ಭಾವನಾತ್ಮಕ ವಿಚಾರಗಳಲ್ಲಿ ತಾನು ನೀಡಿರುವ ಆಶ್ವಾಸನೆಗಳನ್ನು ಅದು ಸೂಕ್ಷ್ಮವಾಗಿ ನಿಭಾಯಿಸಬೇಕಿದೆ. ಅದರಲ್ಲೂ ರಾಮ ಮಂದಿರ ನಿರ್ಮಾಣದಂಥ ವಿಚಾರದಲ್ಲಿ ಅದು ಹೆಚ್ಚು ಸಮಯೋಚಿತವಾಗಿ ವರ್ತಿಸಬೇಕಿದೆ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications