ಬಿಜೆಪಿಯ ಕನಸಿನ 'ಕಾಂಗ್ರೆಸ್ ಮುಕ್ತ್ ಭಾರತ್' ಹತ್ತಿರ, ಇನ್ನಷ್ಟು ಹತ್ತಿರ
ಬಿಜೆಪಿಯ ಮಹತ್ವಾಕಾಂಕ್ಷೆಯ 'ಕಾಂಗ್ರೆಸ್ ಮುಕ್ತ್ ಭಾರತ್' ಕನಸಿಗೆ ಗುರುವಾರ ( ಮೇ 19) ನಡೆದ ಐದು ರಾಜ್ಯಗಳ ಅಸೆಂಬ್ಲಿ ಚುನಾವಣಾ ಫಲಿತಾಂಶ ಮತ್ತಷ್ಟು ನೀರೆರೆದಿದೆ.
ಅಧಿಕಾರದಲ್ಲಿದ್ದ ಇನ್ನೆರಡು ರಾಜ್ಯಗಳನ್ನು ಕಳೆದುಕೊಳ್ಳುವ ಮೂಲಕ, ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ದಿನದಿಂದ ದಿನಕ್ಕೆ ತೀವ್ರ ನಿಗಾ ಘಟಕದತ್ತ ಸಾಗುತ್ತಿದೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶ ಅಭಿವೃದ್ದಿಯ ಪಥದಲ್ಲಿ ಸಾಗಬೇಕಾದರೆ 'ಕಾಂಗ್ರೆಸ್ ಮುಕ್ತ್ ಭಾರತ್' ಆಗಬೇಕು ಎನ್ನುವ ರಾಜಕೀಯ ಘೋಷಣೆಯನ್ನು ಮಾಡಿದ್ದರು. (ಸೋಲೊಪ್ಪಿಕೊಂಡ ರಾಹುಲ್)
ಗುರುವಾರ ಪ್ರಕಟಗೊಂಡ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ತಾನು ಅಧಿಕಾರದಲ್ಲಿದ್ದ ಅಸ್ಸಾಂ ಮತ್ತು ಕೇರಳದಲ್ಲಿ ದಯನೀಯ ಸೋಲು ಕಂಡಿದೆ. 15 ವರ್ಷಗಳಿಂದ ಚಹಾ ನಾಡು ಅಸ್ಸಾಂನಲ್ಲಿ ರಾಜ್ಯಭಾರ ನಡೆಸುತ್ತಿದ್ದ ಕಾಂಗ್ರೆಸ್, ಹಿಂದೆ ಟೀ ಮಾರಿದ್ದ ಪ್ರಧಾನಿ ಮೋದಿಯ ಬಿಜೆಪಿ ಅಲೆಗೆ ಧೂಳೀಪಟವಾಗಿದೆ.
ಸೋಲಾರ್ ಬಿಸಿಯಿಂದಾಗಿ ಕೇರಳದಲ್ಲಿ ಅಧಿಕಾರ ಕಳೆದುಕೊಳ್ಳುವ ಮುನ್ಸೂಚನೆ ಇದ್ದರೂ, ಡಿಎಂಕೆ ಮೈತ್ರಿಯೊಂದಿಗೆ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರಬಹುದು ಎನ್ನುವ ಕಾಂಗ್ರೆಸ್ಸಿನ ಆಸೆಯೂ ನುಚ್ಚುನೂರಾಗಿದೆ.
ಇತ್ತೀಚೆಗೆ ನಡೆದ ಬಿಹಾರ ಚುನಾವಣೆಯಲ್ಲಿ ನಿತೀಶ್-ಲಾಲೂ ಮೈತ್ರಿಯ ಜೊತೆಗೆ ತಾನೂ ಸೇರಿಕೊಂಡು ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದಿದ್ದನ್ನು ಬೆನ್ನು ತಟ್ಟಿಕೊಳ್ಳುವಂತಹ ಸ್ಥಿತಿಯಲ್ಲೂ ಕಾಂಗ್ರೆಸ್ ಇಲ್ಲ.
ಇನ್ನು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ ಸಾಧನೆ ಕಳೆದ ಚುನಾವಣೆಗೆ ಹೋಲಿಸಿದರೆ ಸಮಾಧಾನಕರ ಎನ್ನುವುದೊಂದೇ ತೃಪ್ತಿದಾಯಕ ಸಾಧನೆ. (ದೇಶದಲ್ಲಿ ಕಾಂಗ್ರೆಸ್, ಅದರ ಮಿತ್ರ ಪಕ್ಷಗಳು ಅಪ್ರಸ್ತುತ)
ಇನ್ನಾದರೂ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದ ಕಾಂಗ್ರೆಸ್ ಮುಖಂಡ, ಕಾಂಗ್ರೆಸ್ ಅಧಿಕಾರದಲ್ಲಿರುವ ಆರು ರಾಜ್ಯಗಳಾವುವು, ಸ್ಲೈಡಿನಲ್ಲಿ..
ಕಾಂಗ್ರೆಸ್ ಮುಖಂಡ ಶಶಿ ತರೂರ್
ಕೇರಳ ಮೂಲದವರಾದ ಕಾಂಗ್ರೆಸ್ ಮುಖಂಡ ಶಶಿ ತರೂರ್ ಪಕ್ಷ ಇನ್ನಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ. ದಿನದಿಂದ ದಿನಕ್ಕೆ ಪಕ್ಷದ ಪರಿಸ್ಥಿತಿ ಹದೆಗೆಡುತ್ತಿದೆ, ಇದು ಒಳ್ಳೆಯ ಲಕ್ಷಣವಲ್ಲ. ಇನ್ನೂ ನಾವು ಎಚ್ಚೆತ್ತುಕೊಂಡಿಲ್ಲಾಂದರೆ ಪಕ್ಷಕ್ಕೆ ತೀವ್ರ ಹಾನಿಯಾಗಲಿದೆ ಎಂದು ತರೂರ್ ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರಾಖಂಡ
ಹತ್ತು ಹಲವು ಗೊಂದಲಗಳ ನಂತರ ಇತ್ತೀಚೆಗೆ ಕಾಂಗ್ರೆಸ್ ಇಲ್ಲಿ ಅವಿಶ್ವಾಸ ಮಂಡನೆಯಲ್ಲಿ ಜಯಗಳಿಸುವಲ್ಲಿ ಯಶಸ್ಸು ಪಡೆದಿತ್ತು. ರಾಜ್ಯದಲ್ಲಿ ಪಕ್ಷದ ಬಲಾಬಲ ಹೀಗಿದೆ: ಒಟ್ಟು 71 ಸದಸ್ಯರನ್ನು ಹೊಂದಿರುವ ಅಸೆಂಬ್ಲಿಯಲ್ಲಿ ಕಾಂಗ್ರೆಸ್ - 28 , ಬಿಜೆಪಿ - 28, ಇತರರು - 7 ಮತ್ತು ಅನರ್ಹರಾದ 9 ಸದಸ್ಯರಿದ್ದಾರೆ. ಈಗಾಗಲೇ ಕಾಂಗ್ರೆಸ್ ಒಮ್ಮೆ ಮುಖ್ಯಮಂತ್ರಿಯನ್ನು ಬದಲಿಸಿದ್ದು, 2017ರಲ್ಲಿ ಇಲ್ಲಿ ಚುನಾವಣೆ ಎದುರಿಸಬೇಕಾಗಿದೆ.
ಮಣಿಪುರ
70 ಸದಸ್ಯರನ್ನು ಹೊಂದಿರುವ ಮಣಿಪುರ ಅಸೆಂಬ್ಲಿಯಲ್ಲಿ ಕಾಂಗ್ರೆಸ್ 47 ಸದಸ್ಯರನ್ನು ಹೊಂದಿದೆ. ಇಲ್ಲಿ ಕೂಡಾ ಬರುವ ವರ್ಷ ಅಸೆಂಬ್ಲಿ ಚುನಾವಣೆ ನಡೆಯಲಿದೆ.
ಮೇಘಾಲಯ
2013ರಲ್ಲಿ ನಡೆದಿದ್ದ ಈಶಾನ್ಯ ಭಾರತದ ಮತ್ತೊಂದು ರಾಜ್ಯವಾದ ಮೇಘಾಲಯದಲ್ಲಿ ಅಧಿಕಾರಕ್ಕೇರಿದ್ದ ಕಾಂಗ್ರೆಸ್ ಇಲ್ಲಿ ಇತರ ಪಕ್ಷಗಳ ಮೈತ್ರಿಯೊಂದಿಗೆ ಅಧಿಕಾರಕ್ಕೇರಿತ್ತು.
ಕರ್ನಾಟಕ
ಮೂರು ಬಾರಿ ಮುಖ್ಯಮಂತ್ರಿಗಳ ಬದಲಾವಣೆ, ಬಿಜೆಪಿಯ ಆಂತರಿಕ ಜಗಳ, ಆಡಳಿತ ವಿರೋಧಿ ಅಲೆಯ ಲಾಭ ಪಡೆದುಕೊಂಡ ಕಾಂಗ್ರೆಸ್ ರಾಜ್ಯದಲ್ಲಿ 2013ರಲ್ಲಿ ಅಧಿಕಾರಕ್ಕೆ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಒಳಗೊಳಗೆ ತಂತ್ರಗಾರಿಕೆ ನಡೆಯುತ್ತಿದ್ದರೂ, ಸದ್ಯಕ್ಕಂತೂ ಸಿದ್ದರಾಮಯ್ಯ ಸೇಫ್.
ಮಿಜೋರಾಂ
ಮಿಜೋ ನ್ಯಾಷನಲ್ ಫ್ರಂಟಿನ ತೀವ್ರ ಪೈಪೋಟಿಯ ನಡುವೆಯೂ ಕಾಂಗ್ರೆಸ್ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಭರ್ಜರಿ ಪ್ರದರ್ಶನ ನೀಡಿತ್ತು. ನಲವತ್ತು ಸದಸ್ಯರ ಅಸೆಂಬ್ಲಿಯಲ್ಲಿ ಕಾಂಗ್ರೆಸ್ 34ಸ್ಥಾನದಲ್ಲಿ ಜಯಗಳಿಸಿತ್ತು. 2013ರಲ್ಲಿ ಚುನಾವಣೆ ನಡೆದಿತ್ತು.
ಹಿಮಾಚಲ ಪ್ರದೇಶ
1982ರಿಂದ ಇದುವರೆಗೆ ತಮಿಳುನಾಡು ರೀತಿಯಲ್ಲಿ ಒಮ್ಮೆ ಬಿಜೆಪಿ, ಒಮ್ಮೆ ಕಾಂಗ್ರೆಸ್ ಪರ ಒಲವು ತೋರುವ ಮತದಾರ, 2012ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಒಲವು ತೋರಿದ್ದ. ಇಲ್ಲಿ 2017ರಲ್ಲಿ ಚುನಾವಣೆ ನಡೆಯಲಿದೆ.
ಪುದುಚೇರಿ
ಮೇ 19ರಂದು ಪ್ರಕಟವಾದ ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಯ ಫಲಿತಾಂಶದಲ್ಲಿ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಕೂಡಾ ಒಂದು. 30 ಸದಸ್ಯರನ್ನು ಹೊಂದಿರುವ ಅಸೆಂಬ್ಲಿಯಲ್ಲಿ ಕಾಂಗ್ರೆಸ್ - ಡಿಎಂಕೆ 17ಸ್ಥಾನ ಗೆದ್ದು ಗದ್ದುಗೇರಲು ಸಜ್ಜಾಗಿದೆ.