Breaking: ಬಿಜೆಪಿ, ಆರ್ಎಸ್ಎಸ್ ದೇಶವನ್ನು ವಿಭಜಿಸುತ್ತಿವೆ; ರಾಹುಲ್
ನವದೆಹಲಿ, ಸೆ.04: "ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದ್ವೇಷ ಬೆಳೆಯುತ್ತಿದೆ, ಬಿಜೆಪಿ ಮತ್ತು ಆರ್ಎಸ್ಎಸ್ ದೇಶವನ್ನು ವಿಭಜಿಸುತ್ತಿವೆ" ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಹೇಳಿದರು.
ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ನ ಮೆಗಾ ರ್ಯಾಲಿ ನಡೆಯುತ್ತಿದ್ದು, ವೇದಿಕೆಯಲ್ಲಿ ರಾಹುಲ್ ಗಾಂಧಿ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
Breaking: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 50 ಸ್ಥಾನ; ನಿತೀಶ್
"ಜನರು ಅವರ ಭವಿಷ್ಯ, ಹಣದುಬ್ಬರ ಮತ್ತು ನಿರುದ್ಯೋಗದಿಂದ ಭಯಭೀತರಾಗಿದ್ದಾರೆ. ಬಿಜೆಪಿ ಅವರನ್ನು ದ್ವೇಷದ ಕಡೆಗೆ ತಿರುಗಿಸುತ್ತಿದೆ. ಬಿಜೆಪಿ ಮತ್ತು ಆರ್ಎಸ್ಎಸ್ ದೇಶವನ್ನು ವಿಭಜಿಸುತ್ತಿವೆ" ಎಂದು ಹೇಳಿದರು. ಕಾಂಗ್ರೆಸ್ನಿಂದ ಮೆಹಂಗೈ ಪರ್ ಹಲ್ಲಾ ಬೋಲ್ ರ್ಯಾಲಿ ದೆಹಲಿಯಲ್ಲಿ ಬಿಗಿ ಭದ್ರತೆಯ ನಡುವೆ ನಡೆಯುತ್ತಿದ್ದು, ಭಾರೀ ಜನಸಮೂಹಕ್ಕೆ ಸಾಕ್ಷಿಯಾಗಿದೆ.
ಪ್ರಧಾನಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದರು "ಕೇವಲ ಇಬ್ಬರು ಉದ್ಯಮಿಗಳು ಸರ್ಕಾರದಿಂದ ಪ್ರಯೋಜನಗಳನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ದೇಶದ ವಿಮಾನ ನಿಲ್ದಾಣ, ಬಂದರು, ರಸ್ತೆಗಳು ಎಲ್ಲವನ್ನೂ ಈ ಇಬ್ಬರು ವ್ಯಕ್ತಿಗಳು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದರು.
"ಪ್ರಧಾನಿಯವರ ವಿಚಾರಧಾರೆಯು ಇಬ್ಬರಿಗೆ ಮಾತ್ರ ಸವಲತ್ತುಗಳನ್ನು ನೀಡಬೇಕೆಂದು ಹೇಳುತ್ತದೆ, ದೇಶದ ಪ್ರಗತಿಯಿಂದ ಪ್ರತಿಯೊಬ್ಬರೂ ಪ್ರಯೋಜನ ಪಡೆಯಬೇಕು ಎಂದು ನಮ್ಮ ಸಿದ್ಧಾಂತ ಹೇಳುತ್ತದೆ. ಮೋದಿ ಸರ್ಕಾರವು ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ ಮತ್ತು ಆಯ್ದ ಇಬ್ಬರು ದೊಡ್ಡ ಕೈಗಾರಿಕೋದ್ಯಮಿಗಳಿಗೆ ಮಾತ್ರ ಲಾಭ ನೀಡುತ್ತಿದೆ" ಎಂದು ದೂರಿದರು.
"ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದಲ್ಲಿ ದ್ವೇಷ ಮತ್ತು ಕೋಪ ಹೆಚ್ಚುತ್ತಿದೆ. ಮಾಧ್ಯಮ, ನ್ಯಾಯಾಂಗ, ಚುನಾವಣಾ ಆಯೋಗದಂತಹ ಸಂಸ್ಥೆಗಳ ಮೇಲೆ ಒತ್ತಡವಿದೆ ಮತ್ತು ಸರ್ಕಾರವು ಅವುಗಳೆಲ್ಲದರ ಮೇಲೆ ದಾಳಿ ಮಾಡುತ್ತಿದೆ" ಎಂದು ರಾಹುಲ್ ಗಾಂಧಿ ಹೇಳಿದರು.
"ಈ ರೀತಿಯ ಬೆಲೆ ಏರಿಕೆಯನ್ನು ದೇಶ ಹಿಂದೆಂದೂ ನೋಡಿಲ್ಲ. ಸಾಮಾನ್ಯ ಜನರು ಬಹಳ ಕಷ್ಟದಲ್ಲಿದ್ದಾರೆ. ಚೀನಾದೊಂದಿಗಿನ ಉದ್ವಿಗ್ನತೆ, ಹಣದುಬ್ಬರ ಅಥವಾ ನಿರುದ್ಯೋಗ ಆಗಿರಬಹುದು, ಸಂಸತ್ತಿನಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಲು ವಿರೋಧ ಪಕ್ಷಗಳಿಗೆ ಅನುಮತಿ ನೀಡುವುದಿಲ್ಲ" ಎಂದು ಆರೋಪಿಸಿದರು.
"ನರೇಂದ್ರ ಮೋದಿ ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ, ಅವರು ದ್ವೇಷವನ್ನು ಹರಡುತ್ತಿದ್ದಾರೆ. ಪಾಕಿಸ್ತಾನ ಮತ್ತು ಚೀನಾ ಇದರ ಲಾಭ ಪಡೆಯುತ್ತಿವೆ. ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಿ ಮೋದಿ ಭಾರತವನ್ನು ದುರ್ಬಲಗೊಳಿಸಿದ್ದಾರೆ" ಎಂದರು.
ಸೆಪ್ಟೆಂಬರ್ 7 ರಿಂದ ಪ್ರಾರಂಭವಾಗುವ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಕ್ಷದ 3,500 ಕಿಮೀ 'ಭಾರತ್ ಜೋಡೋ ಯಾತ್ರೆ'ಯೊಂದಿಗೆ ರಾಹುಲ್ ಗಾಂಧಿ ಬೀದಿಗಿಳಿಯಲು ಈ ರ್ಯಾಲಿ ವೇದಿಕೆಯನ್ನು ಸಿದ್ಧಪಡಿಸುತ್ತಿದೆ. 'ಭಾರತ್ ಜೋಡೋ ಯಾತ್ರೆ'ಯನ್ನು ಕಾಂಗ್ರೆಸ್ ಪಕ್ಷದ ಅತಿದೊಡ್ಡ ಜನಸಂಪರ್ಕ ಕಾರ್ಯಕ್ರಮ ಎಂದು ಹೇಳಲಾಗುತ್ತಿದೆ, ಅಲ್ಲಿ ಪಕ್ಷದ ನಾಯಕರು ತಳಮಟ್ಟದ ಸಾಮಾನ್ಯ ಜನರನ್ನು ತಲುಪುತ್ತಾರೆ ಎನ್ನಲಾಗಿದೆ.
''ಈ ಯಾತ್ರೆಯ ಮೂಲಕ ಜನಸಾಮಾನ್ಯರನ್ನು ಭೇಟಿಯಾಗಿ ಸರಕಾರದಿಂದ ಹರಡಿರುವ ಸುಳ್ಳುಗಳನ್ನು, ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಕುರಿತು ಹೇಳಲು ಉದ್ದೇಶಿಸಿದ್ದೇವೆ. ನನ್ನನ್ನು ಇಡಿ 55 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಪ್ರಶ್ನಿಸಿದರೂ ತಲೆಕೆಡಿಸಿಕೊಳ್ಳುವುದಿಲ್ಲ. 100 ವರ್ಷಗಳ ಕಾಲ ನಾವು ಈ ಎಲ್ಲದರ ವಿರುದ್ಧ ಸೆಟೆದು ನಿಲ್ಲಬೇಕು, ಈ ದೇಶ ಇಬ್ಬರದ್ದಲ್ಲ, ರೈತರು, ಕಾರ್ಮಿಕರು ಮತ್ತು ನಿರುದ್ಯೋಗಿ ಯುವಕರಿಗೆ ಸೇರಿದೆ" ಎಂದು ರಾಹುಲ್ ಗಾಂಧಿ ಹೇಳಿದರು.
ತನ್ನ ಮಹತ್ವಾಕಾಂಕ್ಷೆಯ ಕಾರ್ಯಕ್ರಮಕ್ಕಾಗಿ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲು, ಕಾಂಗ್ರೆಸ್ ನಾಯಕರು ಈ ವಾರದ ಆರಂಭದಲ್ಲಿ ದೇಶದಾದ್ಯಂತ 22 ನಗರಗಳಲ್ಲಿ ಸುದ್ದಿಗೋಷ್ಠಿಗಳನ್ನು ನಡೆಸಿದರು.