ಭಾರತದ ಸಾಮರ್ಥ್ಯಕ್ಕೆ ಭೇಷ್ ಎಂದ ಬಿಲ್ ಗೇಟ್ಸ್
ನವದೆಹಲಿ, ಜನವರಿ 05: ಭಾರತದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಸೆರಂ ಇನ್ ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ದೊರೆತಿದೆ.
ಭಾರತದ ಈ ವೈಜ್ಞಾನಿಕ ಮುನ್ನಡೆಗೆ ಹಾಗೂ ಲಸಿಕೆ ಕುರಿತ ದೇಶದ ದಿಟ್ಟ ಕ್ರಮಗಳಿಗೆ ಜಾಗತಿಕ ನಾಯಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೊರೊನಾ ವಿರುದ್ಧ ಭಾರತ ಹೋರಾಡುತ್ತಿರುವ ರೀತಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸೋಂಕಿನ ವಿರುದ್ಧ ಹೋರಾಟವನ್ನು ಹಾಗೂ ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಶ್ಲಾಘಿಸಿದ್ದಾರೆ.

ಭಾರತದ ಪ್ರಧಾನಿ ಕಾರ್ಯಾಲಯದ ಅಧೀಕೃತ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಬಿಲ್ ಗೇಟ್ಸ್, "ವೈಜ್ಞಾನಿಕ ಆವಿಷ್ಕಾರಗಳಲ್ಲಿ ಭಾರತದ ಮುಂದಾಳತ್ವ ಅದ್ಭುತ ಎನಿಸುತ್ತಿದೆ. ಇಡೀ ಜಗತ್ತು ಕೊರೊನಾ ಸೋಂಕಿನ ಅಂತ್ಯಕ್ಕೆ ಶ್ರಮಿಸುತ್ತಿರುವ ಈ ಹೊತ್ತಿನಲ್ಲಿ ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯ ಉನ್ನತವಾಗಿದೆ" ಎಂದು ಬರೆದಿದ್ದಾರೆ.
ಇದೇ ರೀತಿ ಉತ್ತಮ ನಿರ್ಧಾರವನ್ನು ಕೈಗೊಳ್ಳಿ ಹಾಗೂ ಅವುಗಳನ್ನು ಜಾರಿಗೊಳಿಸಿ ಕೊರೊನಾ ಸೋಂಕನ್ನು ನಿವಾರಿಸಲು ಮುಂದಡಿ ಇಡಿ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್ ಅಧಾನೊಂ ಗೆಬ್ರಿಯೆಸುಸ್ ಕೂಡ ಹಾರೈಸಿದ್ದಾರೆ.
ಭಾರತದಲ್ಲಿ ಎರಡು ಲಸಿಕೆಗಳ ತುರ್ತು ಬಳಕೆಗೆ ಅನುಮತಿ ದೊರೆಯುತ್ತಿದ್ದಂತೆಯೇ ಸಾಮೂಹಿಕ ಲಸಿಕಾ ಕಾರ್ಯಕ್ರಮಕ್ಕೂ ಸಿದ್ಧತೆ ನಡೆಯುತ್ತಿದೆ. ಹಲವು ರಾಜ್ಯಗಳಲ್ಲಿ ಫೂರ್ವಾಭ್ಯಾಸ ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಲಸಿಕೆ ದೊರೆಯಲಿದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ












Click it and Unblock the Notifications