ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆಗೆ ಬಿಲ್ಕಿಸ್ ಬಾನೋ
ನವದೆಹಲಿ, ನವೆಂಬರ್ 30: ಕಳೆದ 2002ರ ಗುಜರಾತ್ ಗಲಭೆಯಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ತನ್ನ ಕುಟುಂಬವನ್ನು ಕೊಂದ 11 ಆರೋಪಿಗಳ ಬಿಡುಗಡೆಯನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೋ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಹಿಂದಿನ ಉಪಶಮನ ನೀತಿಯಡಿಯಲ್ಲಿ ಗುಜರಾತ್ ಸರ್ಕಾರವು ಆಗಸ್ಟ್ 15, ಸ್ವಾತಂತ್ರ್ಯ ದಿನದಂದು ಅಪರಾಧಿಗಳನ್ನು ಬಿಡುಗಡೆ ಮಾಡಿತು. ಈ ಕ್ರಮವು ರಾಷ್ಟ್ರವ್ಯಾಪಿ ಭಾರೀ ವಿರೋಧ ವ್ಯಕ್ತವಾಗಿತ್ತು, ವಿಶೇಷವಾಗಿ ಅತ್ಯಾಚಾರಿಗಳನ್ನು ಹಿಂದೂ ಸಂಘಟನೆಯು ವೀರರಂತೆ ಹೂವಿನ ಹಾರ ಹಾಕಿ ಸ್ವಾಗತಿಸುತ್ತಿರುವ ಚಿತ್ರಗಳನ್ನು ತೋರಿಸಿದಾಗ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಬಿಲ್ಕಿಸ್ ಬಾನೊ ಪ್ರಕರಣ: ಅಪರಾಧಿಗಳ ಬಿಡುಗಡೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವರು
ಈ ಅಪರಾಧಿಗಳಲ್ಲಿ ಒಬ್ಬನ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್, ಗುಜರಾತ್ ಸರ್ಕಾರವು 1992ರ ಪರಿಹಾರ ನೀತಿಯ ಅಡಿಯಲ್ಲಿ ಅವರನ್ನು ಬಿಡುಗಡೆ ಮಾಡಲು ಪರಿಗಣಿಸಬಹುದು ಎಂದು ಹೇಳಿತ್ತು. ಆ ತೀರ್ಪಿನ ಆಧಾರದ ಮೇಲೆ ಗುಜರಾತ್ ಸರ್ಕಾರ ಎಲ್ಲಾ 11 ಮಂದಿಯನ್ನು ಬಿಡುಗಡೆ ಮಾಡಿತ್ತು. ಕೇಂದ್ರ ಸರ್ಕಾರವು ಬಿಡುಗಡೆಯನ್ನು ತ್ವರಿತವಾಗಿ ಜಾರಿಗೊಳಿಸಿತು. ಒಂದು ವೇಳೆ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳ ಬಿಡುಗಡೆಯನ್ನು ನಿರ್ಬಂಧಿಸುವ 2014ರ ಉಪಶಮನ ನೀತಿಯನ್ನು ಗುಜರಾತ್ ಸರ್ಕಾರ ಅನುಸರಿಸಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ.
ಗುಜರಾತಿನ ಸರ್ಕಾರವು ಹೇಳಿದ್ದೇನು?
ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳ ಅವಧಿಪೂರ್ವ ಬಿಡುಗಡೆಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಅನುಮೋದನೆ ನೀಡಿತ್ತು ಎಂದು ಗುಜರಾತ್ ಸರ್ಕಾರವು ಉಲ್ಲೇಖಿಸಿದೆ. 2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ಬಿಲ್ಕಿಸ್ ಬಾನೋ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಜನರು 14 ವರ್ಷಗಳಿಂದ ಜೈಲಿನಲ್ಲಿದ್ದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿತ್ತು. ಅವರ ನಡವಳಿಕೆ ಉತ್ತಮವಾಗಿದೆ ಎಂದು ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು. ಸ್ವಾತಂತ್ರ್ಯ ದಿನಾಚರಣೆಯಂದು ಉತ್ತಮ ನಡುವಳಿಕೆ ಆಧಾರದಲ್ಲಿ ಇದೇ ಪ್ರಕರಣದ 11 ಆರೋಪಿಗಳು ಬಿಡುಗಡೆಯಾಗಿದ್ದರು. ಇದನ್ನು ಪ್ರಶ್ನಿಸಿದ ಮೂರು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ವರದಿ ಸಲ್ಲಿಸುವಂತೆ ಗುಜರಾತ್ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಗರ್ಭಿಣಿ ಮೇಲೆ ಕ್ರೌರ್ಯ ತೋರಿದ್ದ ಪಾಪಿಗಳು
2002ರಲ್ಲಿ ಬಿಲ್ಕಿಸ್ ಬಾನೊ 20 ವರ್ಷದವರಿದ್ದು, ಅಂದು ಕೆಲವು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಯ ಮೇಲೆ ಕ್ರೌರ್ಯ ತೋರಲಾಗಿತ್ತು. ಆಕೆಗೆ ಪರಿಚಯವಿದ್ದ ಕಾಮುಕರಿಂದಲೇ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು. ಈ ಅಪರಾಧಿಗಳ ಪೈಕಿ ಒಬ್ಬ ಆಕೆಯ ಚಿಕ್ಕಪ್ಪನೇ ಆಗಿದ್ದು, ಉಳಿದವರು ಸಹೋದರರಾಗಿದ್ದರು. ಅವಳು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದು, ಬಹುತೇಕ ನಿರ್ಜೀವವಾಗಿ ಬಿಟ್ಟಿದ್ದರು. ಮಾರ್ಚ್ 3, 2002ರಂದು ಮೂರು ವರ್ಷದ ಮಗಳನ್ನು ಕೊಲೆ ಮಾಡಲಾಗಿತ್ತು.
ಲಿಮ್ಖೇಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಅತ್ಯಾಚಾರದ ನಂತರದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಮಹಿಳೆಗೆ ಎಚ್ಚರಗೊಂಡ ನಂತರದಲ್ಲಿ ಬಿಲ್ಕಿಸ್ ಬುಡಕಟ್ಟು ಮಹಿಳೆಯಿಂದ ಬಟ್ಟೆ ಅನ್ನು ಪಡೆದುಕೊಂಡರು. ದಾಹೋದ್ ಜಿಲ್ಲೆಯ ಲಿಮ್ಖೇಡಾ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋಗಿದ್ದರು. ಆದರೆ ಅಂದು ಅಲ್ಲಿನ ಹೆಡ್ ಕಾನ್ಸ್ಟೆಬಲ್ ಸತ್ಯವನ್ನು ಮುಚ್ಚಿಟ್ಟು ದೂರಿನ್ನೇ ಮೊಟಕುಗೊಳಿಸಿದ್ದರು ಎಂದು ಉಲ್ಲೇಖಿಸಲಾಗಿದೆ. ನ್ಯಾಯಕ್ಕಾಗಿ ಪರಿತಪಿಸುತ್ತಿದ್ದ ಮಹಿಳೆಯ ಅಗ್ನಿ ಪರೀಕ್ಷೆಯಲ್ಲಿ ಅದು ಆರಂಭಿಕ ಅಧ್ಯಾಯವಾಗಿತ್ತು. ನಂತರದಲ್ಲಿ ಆಕೆಗೆ ಕೊಲೆ ಬೆದರಿಕೆಗಳು ಬಂದವು. 2004ರಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಗುಜರಾತ್ನಿಂದ ಮುಂಬೈಗೆ ಸ್ಥಳಾಂತರಿಸಿತು.
2008ರಲ್ಲಿ ತೀರ್ಪು ಪ್ರಕಟಿಸಿದ್ದ ಮುಂಬೈ ಸಿಬಿಐ ಕೋರ್ಟ್
ಕಳೆದ 2008ರ ಜನವರಿ ತಿಂಗಳಿನಲ್ಲಿ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ 20 ಆರೋಪಿಗಳಲ್ಲಿ 11 ಆರೋಪಿಗಳನ್ನು ದೋಷಿಗಳು ಎಂದು ತೀರ್ಪು ನೀಡಿತು. ಮಹಿಳೆಯ ಮೇಲೆ ಅತ್ಯಾಚಾರದ ಸಂಚು, ಕೊಲೆ, ಕಾನೂನುಬಾಹಿರ ಸಭೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಇತರ ಆರೋಪಗಳ ಮೇಲೆ ದೋಷಿ ಎಂದು ತೀರ್ಪು ನೀಡಿತ್ತು. ಈ ಅಪರಾಧಿಗಳನ್ನು ರಕ್ಷಿಸಲು "ತಪ್ಪಾದ ದಾಖಲೆಗಳನ್ನು" ಮಾಡಿದ್ದಕ್ಕಾಗಿ ಹೆಡ್ ಕಾನ್ಸ್ಟೆಬಲ್ಗೆ ಶಿಕ್ಷೆ ವಿಧಿಸಲಾಯಿತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 20 ಆರೋಪಿಗಳ ಪೈಕಿ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ವಿಚಾರಣೆ ವೇಳೆ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದನು.