ಸೋಲಿನ ಭಯ, ಚುನಾವಣಾ ಪೋಸ್ಟರ್ ನಿಂದ ಮೋದಿ, ಶಾ ಔಟ್?
ನವದೆಹಲಿ, ಪಾಟ್ನಾ ಅ 19: ಕಳೆದ ಲೋಕಸಭಾ ಚುನಾವಣೆಯ ನಂತರ ಯಾವುದೇ ರಾಜ್ಯದ ಚುನಾವಣೆಯಿದ್ದರೂ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚಿತ್ರಗಳು ಬಿಜೆಪಿ ಪೋಸ್ಟರುಗಳಲ್ಲಿ ರಾರಾಜಿಸುತ್ತಿದ್ದವು.
ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳಲ್ಲೂ ಸ್ಥಳೀಯ ನಾಯಕರುಗಳಿಗೆ ಪೋಸ್ಟರ್ ನಲ್ಲಿ ಹೆಚ್ಚಿನ ಆದ್ಯತೆ ಇರುತ್ತಿರಲಿಲ್ಲ. ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಬಿಹಾರದಲ್ಲಿ ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಮೋದಿ ಮತ್ತು ಶಾ ಭಾವಚಿತ್ರಗಳಿಗೆ ಕೊಕ್ ನೀಡಲಾಗಿದ್ದು ಪೋಸ್ಟರುಗಳಲ್ಲಿ ಸ್ಥಳೀಯ ನಾಯಕರುಗಳದ್ದೇ ಕಾರುಬಾರು.
ಬಿಹಾರದ ಎಲ್ಲಾ ಹಂತದ ಚುನಾವಣೆ ಮುಗಿಯುವ ಮುನ್ನವೇ ಬಿಜೆಪಿ ಶಸ್ತ್ರತ್ಯಾಗ ಮಾಡಿದೆ, ಸೋಲಿನ ಭಯ ಅವರಿಗೆ ಕಾಡುತ್ತಿದೆ. ಅದಕ್ಕಾಗಿಯೇ ಮೋದಿ ಮತ್ತು ಶಾ ಚಿತ್ರಗಳನ್ನು ಪೋಸ್ಟರ್ ನಿಂದ ತೆಗೆಯಲಾಗಿದೆ ಎಂದು ವಿರೋಧ ಪಕ್ಷಗಳು ವ್ಯಾಖ್ಯಾನಿಸುತ್ತಿವೆ. (ಕುತೂಹಲ ಹುಟ್ಟುಹಾಕಿದ 3 ಸಮೀಕ್ಷೆ)
ಬಿಹಾರದಲ್ಲಿನ ಚುನಾವಣಾ ಸೋಲನ್ನು ಪಕ್ಷದ ಎರಡನೇ ಹಂತದ ನಾಯಕರ ಮೇಲೆ ಕಟ್ಟುವ ಸಲುವಾಗಿ ಬಿಜೆಪಿ ಈ ನಿರ್ಧಾರಕ್ಕೆ ಬಂದಿದೆ ಎಂದು ಕಾಂಗ್ರೆಸ್ ಅಣಕವಾಡಿದೆ.
ಪ್ರಧಾನಿ ಮೋದಿ ಮತ್ತು ಅಮಿತ್ ಶಾರನ್ನು ಹೊಣೆಗಾರಿಕೆಯಿಂದ ತಪ್ಪಿಸುವ ಸಲುವಾಗಿ ಅವರಿಬ್ಬರ ಪೋಸ್ಟರ್ಗಳನ್ನು ಬಿಜೆಪಿ ನಾಯಕರು ತೆಗೆದುಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅಭಿಷೇಕ್ ಸಿಂಘ್ವಿ ಲೇವಡಿ ಮಾಡಿದ್ದಾರೆ.
ಮೋದಿ ಚುನಾವಣಾ ಸಭೆ ಕೂಡಾ ರದ್ದು, ಮುಂದೆ ಓದಿ..

ಕಾಂಗ್ರೆಸ್ ಮುಖಂಡ ಸಾಂಘ್ವಿ
ಎರಡು ಹಂತದ ಚುನಾವಣೆ ಮುಗಿದಿರುವ ಈ ಹೊತ್ತಿನಲ್ಲಿ ಬಿಜೆಪಿಗೆ ಸೋಲಿನ ವಾಸನೆ ಬಂದಿದೆ. ಅದಕ್ಕಾಗಿ ಮೋದಿ ಮತ್ತು ಶಾ ಚಿತ್ರಗಳನ್ನು ಪೋಸ್ಟರುಗಳಿಂದ ತೆಗೆಯಲಾಗುತ್ತಿದೆ. ಮುಂದಾಗುವ ಚುನಾವಣಾ ಸೋಲಿಗೆ ಮೋದಿ ಮತ್ತು ಶಾ ಇಬ್ಬರೂ ಜವಾಬ್ದಾರರು, ಇದರಿಂದ ನುಣುಚಿಕೊಳ್ಳುವಂತಿಲ್ಲ ಎಂದು ಕಾಂಗ್ರೆಸ್ ವಕ್ತಾರ ಸಿಂಘ್ವಿ ಹೇಳಿದ್ದಾರೆ.

ಬಿಜೆಪಿ ಪೋಸ್ಟರ್
ಇದುವರೆಗೆ ಬಿಜೆಪಿ ಪೋಸ್ಟರುಗಳಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಚಿತ್ರಗಳು ಇದ್ದವು. ಈಗ ಬಿಹಾರದಲ್ಲಿ ಪಕ್ಷದ ಮುಖಂಡರುಗಳಾದ ಸುಶೀಲ್ ಮೋದಿ, ಸಿ.ಪಿ.ಠಾಕೂರ್ ಮತ್ತು ಅಶ್ವಿನಿ ಚುಬೆಯವರ ಪೋಸ್ಟರ್ಗಳನ್ನು ಬಿಜೆಪಿ ಹಾಕಿದೆ.

ಮೋದಿ Rally ರದ್ದು
ಪ್ರಧಾನಿ ಮೋದಿಯವರ ಹಾಜಿಪುರ್, ವೈಶಾಲಿ, ಬೌಕ್ಸರ್ ಮತ್ತು ಪಾಲಿಗಂಜ್ ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆ ನಿಗದಿಯಾಗಿತ್ತು. ಆದರೆ ಬಿಜೆಪಿ ಸೋಲಿನ ಭಯದಿಂದ ಮೋದಿ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ಹೇಳಿತ್ತು.

ಮೋದಿ ಸಭೆ - ಬಿಜೆಪಿ ತಿರುಗೇಟು
ಮಹಾಮೈತ್ರಿಕೂಟ ಯಾವುದೋ ಕನಸಿನ ಲೋಕದಲ್ಲಿದೆ, ಅಕ್ಟೋಬರ್ 16 ರಿಂದ 24ರ ವರೆಗೆ ಪ್ರಧಾನಿ ಮೋದಿಯವರ ಯಾವುದೇ ಸಭೆಯನ್ನು ಬಿಹಾರದಲ್ಲಿ ಪಕ್ಷ ಆಯೋಜಿಸಲಿಲ್ಲ ಎಂದು ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.

ಮೋಹನ್ ಭಾಗವತರ್ ಹೇಳಿಕೆ
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತರ್ ಮೀಸಲಾತಿ ಬಗ್ಗೆ ಇತ್ತೀಚೆಗೆ ನೀಡಿದ ಹೇಳಿಕೆಯಿಂದ ಬಿಜೆಪಿಗೆ ಬಿಹಾರದ ಬಾಗಿಲು ಮುಚ್ಚಿಂದತಾಗಿದೆ. ಭಾಗವತರ್ ಹೇಳಿಕೆಯಿಂದ ಬಿಹಾರದಲ್ಲಿ ಮಂಡಲ್ ಮತ್ತು ಕಮಂಡಲ್ ಸ್ಪರ್ಧೆಗೆ ರಾಜಕೀಯ ದಾರಿ ಮಾಡಿಕೊಟ್ಟಂತಾಗಿದೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.












Click it and Unblock the Notifications