ಬಿಹಾರ ಮದ್ಯ ನಿಷೇಧ: ನಿತೀಶ್ ಕುಮಾರ್ ಮಾನವ ಸರಪಳಿಗೆ ಬಿಜೆಪಿ ಸಾಥ್
ಮದ್ಯ ನಿಷೇಧ ಸಮರ್ಥಿಸಿ ಬಿಹಾರ ಸರಕಾರ ಆಯೋಜಿಸಿದ್ದ ಮಾನವ ಸರಪಳಿಯಲ್ಲಿ ಲಕ್ಷಾಂತರ ಜನ ಪಾಲ್ಗೊಂಡು ಹೊಸ ದಾಖಲೆ ನಿರ್ಮಾಣವಾಗಿದೆ.
ಪಾಟ್ನಾ, ಜ 21 (ಪಿಟಿಐ) : ಮೋದಿ ಸರಕಾರದ ಅಪನಗದೀಕರಣವನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಹಿರಂಗವಾಗಿ ಶ್ಲಾಘಿಷಿದ ನಂತರ ಪ್ರಧಾನಿ ಮತ್ತು ನಿತೀಶ್ ನಡುವಣ ರಾಜಕೀಯ ವೈಮನಸ್ಸು ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ.
ಬಿಹಾರದಲ್ಲಿ ನಿತೀಶ್ ಸರಕಾರ ಮದ್ಯ ಮಾರಾಟ ನಿಷೇಧಗೊಳಿಸಿದ ಕ್ರಮವನ್ನು ಸಾರ್ವಜನಿಕ ಸಭೆಯಲ್ಲಿ ಮುಕ್ತಕಂಠದಿಂದ ಸ್ವಾಗತಿಸಿದ್ದ ಪ್ರಧಾನಿ ಮೋದಿ, ಶನಿವಾರ (ಜ 21) ಬಿಹಾರ ಸರಕಾರ ಆಯೋಜಿಸಿದ್ದ ಮಾನವ ಸರಪಳಿ ಅಭಿಯಾನದಲ್ಲಿ ಬಿಜೆಪಿ ಮುಖಂಡರೂ ಪಾಲ್ಗೊಳ್ಳುವಂತೆ ಮಾಡಿದ್ದಾರೆ.
ನಗರದಲ್ಲಿ ಮದ್ಯಮಾರಾಟ ನಿಷೇಧಿಸಿದ ಕ್ರಮವನ್ನು ಸಮರ್ಥಿಸಿ ಲಕ್ಷಾಂತರ ಜನರು ಪಾಲ್ಗೊಂಡಿದ್ದರು. ಪುರುಷರು, ಮಹಿಳೆಯರು, ವಿದ್ಯಾರ್ಥಿಗಳುಯಾದಿಯಾಗಿ ಲಕ್ಷಾಂತರ ಜನರು ಅಭಿಯಾನದಲ್ಲಿ ಪಾಲ್ಗೊಂಡು, ನಿತೀಶ್ ಕುಮಾರ್ ಸರಕಾರದ ಕ್ರಮಕ್ಕೆ ನಾವೂ ಜೊತೆಗಿದ್ದೇವೆ ಎನ್ನುವ ಸಂದೇಶ ರವಾನಿಸಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಸ್ಪೀಕರ್ ವಿಜಯ್ ಕುಮಾರ್ ಚೌಧುರಿ ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಮಾನವ ಸರಪಳಿಗೆ ಕೈಜೋಡಿಸಿದರು.
ಜಗತ್ತಿನ ಅತ್ಯಂತ ದೊಡ್ಡ ಮಾನವ ಸರಪಳಿ ಇದಾಗಿದೆ, ಇಪ್ಪತ್ತು ದಶಲಕ್ಷಕ್ಕೂ ಹೆಚ್ಚು ಜನರು ಇದರಲ್ಲಿ ಪಾಲ್ಗೊಂಡಿದ್ದರು ಎಂದು ಬಿಹಾರ ಸರಕಾರ ಹೇಳಿಕೊಂಡಿದೆ.
ರಾಜ್ಯದ ಶಿವಾನ್ ನಲ್ಲಿ ಬಿಜೆಪಿ ಮುಖಂಡರು ಮಾನವ ಸರಪಳಿ ಅಭಿಯಾನದಲ್ಲಿ ಭಾಗವಹಿಸಿ ನಿತೀಶ್ ನಿರ್ಧಾರಕ್ಕೆ ಬೆಂಬಲ ಸೂಚಿಸಿದರು. ಶಿವಾನ್ ನಲ್ಲಿ ಪಕ್ಷದ ಎರಡು ದಿನದ ರಾಜ್ಯ ಕಾರ್ಯಕಾರಿಣಿ ನಡೆಯುತ್ತಿದೆ.
ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಶಿಂಧೆ, ಕೇಂದ್ರ ಸಚಿವ ರಾಂಕೃಪಾಲ್ ಯಾದವ್, ಬಿಹಾರದ ವಿರೋಧ ಪಕ್ಷದ ನಾಯಕ ಪ್ರೇಮ್ ಕುಮಾರ್, ರಾಷ್ಟ್ರೀಯ ವಕ್ತಾರ ಶಹನಾವಾಜ್ ಹುಸೇನ್ ಸೇರಿದಂತೆ ನೂರಾರು ಜನ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications