ಗುಂಡಿ ಬಿದ್ದ ರಸ್ತೆ ಮೇಲೆ ರಾಹುಲ್ ನಡಿಗೆ: 40 ಪರ್ಸೆಂಟ್ ಸರ್ಕಾರದ ಅಭಿವೃದ್ಧಿ ಎಂದ ಕಾಂಗ್ರೆಸ್
ಬೆಂಗಳೂರು, ಅಕ್ಟೋಬರ್ 15 : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯು ಕರ್ನಾಟಕದಲ್ಲಿ ಸಾಗುತ್ತಿದೆ. ಇದಕ್ಕೆ ಪ್ರತಿಯಾಗಿ ರಾಜ್ಯ ಬಿಜೆಪಿ ನಾಯಕರು ಜನಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ. ಇದೇ ಸಮಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವಿನ ವಾಕ್ಸಮರ ತಾರಕಕ್ಕೆ ಏರಿದೆ.
ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡುತ್ತಿದೆ. ರಾಹುಲ್ ಗಾಂಧಿ ಸಹ ಬಿಜೆಪಿ ವಿರುದ್ಧ ಗುರುತರ ಆರೋಪಗಳನ್ನು ಮಾಡಿದ್ದಾರೆ. ದೇಶದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿದೆ. ಎಲ್ಲ ಕೆಲಸಗಳಿಗೂ 40 ಪರ್ಸೆಂಟ್ ಕಮಿಷನ್ ಅನ್ನು ಬಿಜೆಪಿ ಸರ್ಕಾರ ಕೇಳುತ್ತಿದೆ. ಪಿಎಸ್ಐ ಹುದ್ದೆಗೆ ಲಕ್ಷಾಂತರ ರೂಪಾಯಿ ಲಂಚ ನೀಡುವ ಪರಿಸ್ಥಿತಿ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವ ಸರ್ಕಾರ ಕಡುಭ್ರಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ನಾಯಕರು ಕಮಿಷನ್ ಆರೋಪಕ್ಕೆ ಸಾಕ್ಷ್ಯ ಒದಗಿಸುವಂತೆ ಹೇಳಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯವಾಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರನ್ನು ಬಚ್ಚಾ ಎಂದು ಕರೆದಿದ್ದರು. ಇದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಗುಂಡಿ ಬಿದ್ದ ರಸ್ತೆ ಫೋಟೊ ಹಂಚಿಕೊಂಡ ಕಾಂಗ್ರೆಸ್
ಪ್ರಸ್ತುತ ಬಳ್ಳಾರಿ ಜಿಲ್ಲೆಯಲ್ಲಿ ಭಾರತ್ ಜೋಡೊ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿಗೆ ಜನಬೆಂಬಲ ವ್ಯಕ್ತವಾಗಿದೆ. ಗುಂಡಿಬಿದ್ದ ರಸ್ತೆಗಳಲ್ಲಿ ರಾಹುಲ್ ಯಾತ್ರೆ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೊವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಮೊನ್ನೆ ಬಿಜೆಪಿಯ ಯಾರೋ ಮತಿಗೆಟ್ಟ ಒಬ್ಬ ನಾಯಕ, 'ರಾಹುಲ್ ಗಾಂಧಿಯವರು ಬಿಜೆಪಿ ಮಾಡಿದ ಅಭಿವೃದ್ಧಿಯನ್ನು ನೋಡಲಿ' ಎಂದಿದ್ದರು. ನಿಜ... ಭಾರತ ಐಕ್ಯತಾ ಯಾತ್ರೆಯಲ್ಲಿ 40 ಪರ್ಸೆಂಟ್ ಸರ್ಕಾರದ ಅಭಿವೃದ್ಧಿ ಕಾಣುತ್ತಿದೆ ಎಂದು ಟೀಕಿಸಿದೆ.
ಬಿಜೆಪಿ ಎಂದರೆ ಭ್ರಷ್ಟಾಚಾರದ ಅಕ್ಷಯ ಪಾತ್ರೆ. ಬಗೆದಷ್ಟೂ ಅಕ್ರಮಗಳು, ತೆಗೆದಷ್ಟೂ ಅನಾಚಾರಗಳು ಹೊರಬರುತ್ತವೆ. ಪಿಎಸ್ಐ ಅಕ್ರಮದ ಆಳ, ಅಗಲ ವಿಸ್ತರಿಸುತ್ತಲೇ ಇದೆ. 54 ಸಾವಿರ ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯವನ್ನು ಕತ್ತಲೆಗೆ ತಳ್ಳಿದ, ಅವರ ಕನಸುಗಳನ್ನು ಭಗ್ನಗೊಳಿಸಿದ 40 ಪರ್ಸೆಂಟ್ ಸರ್ಕಾರವನ್ನು ಕೊನೆಗೊಳಿಸಬೇಕಿದೆ ಎಂದು ಟ್ವಿಟಿಸಿದೆ. ಈ ಟ್ವೀಟ್ನೊಂದಿಗೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್ಗೆ ಜೈಲು ಶಿಕ್ಷೆ ವಿಧಿಸಿದ ಬಗೆಗಿನ ವರದಿಯನ್ನು ಕಾಂಗ್ರೆಸ್ ಹಂಚಿಕೊಂಡಿದೆ.
'ಪಿಎಸ್ಐ ಅಕ್ರಮದಷ್ಟೇ ವ್ಯಾಪಕ ಅಕ್ರಮ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ನಡೆದಿದೆ. ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರ ಇಷಾರೆಯಲ್ಲೇ ಈ ಅಕ್ರಮ ನಡೆದಿರುವ ಅನುಮಾನಗಳಿದ್ದರೂ ಪೇಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ತನಿಖೆಗೆ ವಹಿಸುತ್ತಿಲ್ಲ. 40 ಪರ್ಸೆಂಟ್ ಸರ್ಕಾರದಿಂದ ರಾಜ್ಯದ ಯುವಕರ ಉದ್ಯೋಗದ ಕನಸು ಭಗ್ನವಾಗುತ್ತಿದೆ' ಎಂದು ಕಾಂಗ್ರೆಸ್ ಛೇಡಿಸಿದೆ.
40 ಪರ್ಸೆಂಟ್ ಸರ್ಕಾರವನ್ನು 'ಯೂಟರ್ನ್ ಸರ್ಕಾರ' ಸರ್ಕಾರವೆಂದೂ ಸಹ ಕರೆಯಬಹುದು. ಪ್ರಬುದ್ದರು, ವಿಚಾರವಂತರು ಇಲ್ಲದ ಸರ್ಕಾರದಲ್ಲಿ ಸಮರ್ಪಕ ನೀತಿ ರೂಪಿಸುವಲ್ಲಿ ಸೋತಿದೆ ಎನ್ನಲು ಹಲವು ಯೂಟರ್ನ್ ಅದೇಶಗಳ ವೃತ್ತಾಂತಗಳೇ ಸಾಕ್ಷಿ. ಜನ ವಿರೋಧ ಬಂದರೆ ಮಾತ್ರ ಸರ್ಕಾರಕ್ಕೆ ಜ್ಞಾನೋದಯವಾಗುತ್ತದೆಯೇ ಎಂದು ಕಾಂಗ್ರೆಸ್ ಟ್ವಿಟಿಸಿದೆ. ಪರಿಶಿಷ್ಟರಿಗೆ ವೇದಗಣಿತದ ಶಿಕ್ಷಣ ನೀಡುವ ಆದೇಶವನ್ನು ವಾಪಸ್ ತೆಗೆದುಕೊಂಡಿದ್ದರ ಬಗೆಗಿನ ವರದಿಯನ್ನು ಈ ಟ್ವೀಟ್ನೊಂದಿಗೆ ಹಂಚಿಕೊಂಡಿದೆ.
{document1}












Click it and Unblock the Notifications