ಭಾರತ ಬಂದ್: ರೈತರ ಪ್ರತಿಭಟನೆ ಕುರಿತು ಸಚಿವ ತೋಮರ್ ಹೇಳಿದ್ದೇನು?
ಗ್ವಾಲಿಯರ್, ಸೆಪ್ಟೆಂಬರ್ 27: ರೈತರು ಪ್ರತಿಭಟನೆಯನ್ನು ಬಿಟ್ಟು ಮಾತುಕತೆಗೆ ಬರಲಿ ಎಂದು ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಮೂರು ಕೃಷಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ರೈಲು ಇಂದು( ಸೆ.27) ಭಾರತ ಬಂದ್ಗೆ ಕರೆ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅವರು ರೈತರು ಪ್ರತಿಭಟನೆ ಹಾದಿ ಬಿಟ್ಟು ಮಾತುಕತೆಗೆ ಬಂದರೆ ಉತ್ತಮ ಎಂದಿದ್ದಾರೆ.
ಈ ಬೆಳವಣಿಗೆ ಕುರಿತು ಗ್ವಾಲಿಯರ್ ನ ಕೃಷಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ತೋಮರ್ ಅವರು, ಪ್ರತಿಭಟನಾ ಹಾದಿ ಬಿಡುವಂತೆ ರೈತರ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ.

ರೈತರು ಎತ್ತಿರುವ ವಿರೋಧಗಳನ್ನು ಪರಿಗಣಿಸಲು ಸರ್ಕಾರ ಸಿದ್ಧವಿದೆ. ಈ ಹಿಂದೆ ಕೂಡ ಸಾಕಷ್ಟು ಬಾರಿ ಮಾತುಕತೆಗಳು ನಡೆದಿವೆ. ಇನ್ನೂ ಮಾತುಕತೆ ನಡೆಸಬೇಕೆಂದಿದ್ದರೆ, ಮಾತುಕತೆಗೆ ಸರ್ಕಾರ ಸಿದ್ಧವಿದೆ. ರೈತರ ಪ್ರತಿಭಟನೆ ರಾಜಕೀಯ ವಿಚಾರವಾಗಬಾರದು ಎಂದು ಹೇಳಿದ್ದಾರೆ.
ರೈತರ ಪ್ರತಿಭಟನೆ ರಾಜಕೀಯದೊಂದಿಗೆ ಮಿಶ್ರಿತಗೊಳ್ಳಬಾರದು. ರೈತರು ಎಲ್ಲರಿಗೂ ಸೇರಿದವರಾಗಿದ್ದಾರೆ. ಸರ್ಕಾರವು ರೈತರ ಒಕ್ಕೂಟದೊಂದಿಗೆ ಬಹಳ ಸೂಕ್ಷ್ಮವಾಗಿ ಮಾತುಕತೆ ನಡೆಸಿದೆ ಮತ್ತು ಭವಿಷ್ಯದಲ್ಲಿಯೂ ಇದನ್ನು ಮಾಡಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ಕಾನೂನುಗಳ ವಿರುದ್ಧ ಆಂದೋಲನ ನಡೆಸುತ್ತಿರುವ ರೈತರು ಇಂದು ದೇಶಾದ್ಯಂತ ಭಾರತ ಬಂದ್ ಗೆ ಕರೆ ನೀಡಿದ್ದಾರೆ. ಏತನ್ಮಧ್ಯೆ, ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟೀಕಾಯತ್ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ಕಳೆದ ಹತ್ತು ತಿಂಗಳಿನಿಂದ ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ರೈತರು ಹತ್ತು ವರ್ಷಗಳ ಕಾಲ ಆಂದೋಲನ ಮಾಡಲು ಸಿದ್ಧರಿದ್ದಾರೆ, ಆದರೆ ಈ ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತರಲು ಅನುಮತಿಸುವುದಿಲ್ಲ ಎಂದು ರಾಕೇಶ್ ಟಿಕೈಟ್ ಹೇಳಿದರು.
ಪಂಜಾಬ್ , ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶಾದ್ಯಂತ ಸಾವಿರಾರು ರೈತರು ಕಳೆದ ಹತ್ತು ತಿಂಗಳುಗಳಿಂದ ದೆಹಲಿಯ ಗಡಿಯಲ್ಲಿ ಧರಣಿ ಕುಳಿತಿದ್ದಾರೆ ಮತ್ತು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಜಾರಿಗೊಳಿಸಿದ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ನಾವು ಹತ್ತು ವರ್ಷಗಳ ಕಾಲ ಆಂದೋಲನ ನಡೆಸಬೇಕಾದರೂ ನಾವು ಸಿದ್ಧರಿದ್ದೇವೆ ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರವು ಈ ಕಾನೂನುಗಳನ್ನು ಹಿಂಪಡೆಯಬೇಕು ಎಂದರು.
ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಭಾಗಶಃ ಬಂದ್ ಆಗುವ ಸಾಧ್ಯತೆ ಇದೆ. ರಾಜ್ಯ ರೈತ ಸಂಘ ಬಹುತೇಕ ರಾಜ್ಯದ ಎಲ್ಲ ಕಡೆ ರಸ್ತೆ ಚಳವಳಿ ನಡೆಸುವ ಕಾರಣ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಬೆಂಗಳೂರು ವಿವಿ ಸೇರಿದಂತೆ ನಾಳೆ ನಡೆಯಬೇಕಿದ್ದ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಒಂದೂವರೆ ವರ್ಷದಿಂದ ಶಾಲಾ-ಕಾಲೇಜು ತೆರೆದಿಲ್ಲ. ಇದೀಗ ಶಾಲಾ- ಕಾಲೇಜು ಆರಂಭವಾಗಿವೆ. ಭಾರತ ಬಂದ್ ಗೆ ನೈತಿಕ ಬೆಂಬಲ ನೀಡಲಾಗುವುದು. ಎಂದಿನಂತೆ ಶಾಲಾ-ಕಾಲೇಜು ಓಪನ್ ಇರಲಿದೆ ಎಂದು ರುಪ್ಸಾ ಹಾಗೂ ಕ್ಯಾಮ್ಸ್ ಖಾಸಗಿ ಶಾಲಾ ಸಂಘಟನೆಗಳು ಸ್ಪಷ್ಟನೆ ನೀಡಿದೆ.
ರಾಜ್ಯದಲ್ಲಿ ಎಂದಿನಂತೆ ಹೋಟೆಲ್ ಮತ್ತು ರೆಸ್ಟೋರೆಂಟ್ ಸೇವೆ ಇರುತ್ತದೆ. ಭಾರತ ಬಂದ್ಗೆ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳು ನೈತಿಕ ಬೆಂಬಲ ನೀಡಿವೆ. ಹೋಟೆಲ್ ಹಾಗೂ ರೆಸ್ಟೋರೆಂಟ್ ಮುಚ್ಚಿದರೆ ತೊಂದರೆ ಆಗುತ್ತೆ. ಸೋಮವಾರ ರಾಜ್ಯಾದ್ಯಂತ ಹೋಟೆಲ್ ಹಾಗೂ ರೆಸ್ಟೋರೆಂಟ್ ಓತೆರೆದಿರುತ್ತದೆ ಎಂದು ಕರ್ನಾಟಕ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಇಂದು ಲಾರಿಗಳು, ಸರ್ಕಾರಿ ಬಸ್ಸುಗಳು, ಓಲಾ- ಊಬರ್ ಟ್ಯಾಕ್ಸಿಗಳು ಎಂದಿನಂತೆ ಸಂಚಾರ ಮಾಡಲಿವೆ. ಇವುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ. ಆದರೆ, ರಸ್ತೆ ತಡೆ ನಡೆಸುವುದರಿಂದ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಪರಿಸ್ಥಿತಿ ನೋಡಿಕೊಂಡು ಅಲ್ಲಿನ ಜಿಲ್ಲಾಧಿಕಾರಿಗಳು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ.












Click it and Unblock the Notifications