ಎರಡು ದಿನ ಬ್ಯಾಂಕ್ ಮುಷ್ಕರ: ನೀವು ತಿಳಿದಿರಬೇಕಾದ ಸಂಗತಿಗಳು
ದೇಶದ ಅತಿ ದೊಡ್ಡ ಬ್ಯಾಂಕಿಂಗ್ ಸೇವೆ ಎಸ್ಬಿಐ ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕುಗಳ ನೌಕರರ ಒಕ್ಕೂಟಗಳು ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೂ ಮುನ್ನ ಈ ಮುಷ್ಕರ ಆರಂಭವಾಗಲಿದೆ. ಜ. 31ರಂದು ಮೊದಲ ಮುಷ್ಕರ ನಡೆಯಲಿದ್ದು, ಅಂದೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಬಿಡುಗಡೆ ಮಾಡಲಿದ್ದಾರೆ. ಬಜೆಟ್ ಮಂಡನೆಯಾಗಲಿರುವ ಫೆ. 1ರಂದು ಕೂಡ ಮುಷ್ಕರ ಮುಂದುವರಿಯಲಿದೆ.
ಬ್ಯಾಂಕ್ ನೌಕರರ ವಿವಿಧ ಸಂಘಟನೆಗಳು ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದ್ದು, 2017ರ ನವೆಂಬರ್ನಿಂದ ವೇತನ ಹೆಚ್ಚಳಕ್ಕೆ ಕಾದಿರುವ ನೌಕರರು ಕೂಡ ಪ್ರತಿಭಟನೆಗೆ ಬೆಂಬಲ ನೀಡುವ ಸಾಧ್ಯತೆ ಇದೆ.
ಮತ್ತಷ್ಟು ಮಾತುಕತೆಗಾಗಿ ಒಕ್ಕೂಟಗಳು ಮುಷ್ಕರವನ್ನು ಮುಂದೂಡುವುದನ್ನು ಐಬಿಎ ಬಯಸಿತ್ತು. ಆದರೆ ಬ್ಯಾಂಕ್ ಮ್ಯಾನೇಜ್ಮೆಂಟ್ ಕಡೆಯಿಂದ ಯಾವುದೇ ಸೂಕ್ತ ಸ್ಪಂದನೆ ಸಿಗಲಿಲ್ಲ ಎಂದು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ (ಎಐಬಿಇಎ) ಅಧಿಕಾರಿಗಳು ತಿಳಿಸಿದ್ದಾರೆ.

ಫಲಪ್ರದವಾಗದ ಮಾತುಕತೆ
ಮುಷ್ಕರ ನಡೆಸದಂತೆ ಮನವೊಲಿಸಲು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮತ್ತು ಹಣಕಾಸು ಸಚಿವಾಲಯ ಬ್ಯಾಂಕ್ ಒಕ್ಕೂಟಗಳೊಂದಿಗೆ ನಡೆಸಿದ ಮಾತುಕತೆಗಳು ಫಲಪ್ರದವಾಗಿಲ್ಲ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ಮತ್ತು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ಬಿಯು) ಪ್ರತಿನಿಧಿಗಳ ನಡುವಿನ ಭಿನ್ನಾಭಿಪ್ರಾಯ ಶಮನವಾಗದ ಹಿನ್ನೆಲೆಯಲ್ಲಿ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ.

ಶೇ 20ರಷ್ಟು ವೇತನ ಏರಿಸಿ
ಒಂಬತ್ತು ಬ್ಯಾಂಕುಗಳ ಒಕ್ಕೂಟಗಳಿಂದ ರೂಪುಗೊಂಡಿರುವ ಯುಎಫ್ಬಿಯು, ವೇತನ ಪರಿಷ್ಕರಣೆ ವಿಚಾರದಲ್ಲಿ ಐಬಿಎ ಜತೆಗಿನ ಮಾತುಕತೆ ಸಫಲವಾಗದ ಕಾರಣ ಮುಷ್ಕರಕ್ಕೆ ಕರೆ ನೀಡಿದೆ. 2017ರಿಂದ ಸಾರ್ವಜನಿಕ ವಲಯದ ಬ್ಯಾಂಕ್ ನೌಕರರ ವೇತನ ಪರಿಷ್ಕರಣೆ ಬಾಕಿ ಉಳಿದಿದೆ. ಶೇ 20ರಷ್ಟು ವೇತನಪಟ್ಟಿಯಲ್ಲಿ ಏರಿಕೆಯೊಂದಿಗೆ ವೇತನ ಪರಿಷ್ಕರಣೆಗೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಮ್ಯಾನೇಜ್ಮೆಂಟ್ ಶೇ 12.25ಕ್ಕಿಂತ ಹೆಚ್ಚು ಪರಿಷ್ಕರಣೆಗೆ ಒಪ್ಪಿಕೊಂಡಿಲ್ಲ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ನೌಕರರ ಪಿಂಚಣಿ ಪರಿಷ್ಕರಣೆ, ಕುಟುಂಬ ಪಿಂಚಣಿ ಉತ್ತೇಜನ, ಸಿಬ್ಬಂದಿ ಕಲ್ಯಾಣ ವೇತನ ಹೆಚ್ಚಳ, ಎಲ್ಲರಿಗೂ ಒಂದೇ ಸಮಯ ನಿಗದಿ, ಹೊಸ ಪಿಂಚಣಿ ಯೋಜನೆ ರದ್ದು, ಬೇಸಿಕ್ ಪೇ ಜತೆಗೆ ವಿಶೇಷ ಭತ್ಯೆಯನ್ನು ವಿಲೀನಗೊಳಿಸುವುದು, ವಾರಕ್ಕೆ ಐದು ದಿನ ಮಾತ್ರ ಕೆಲಸ ಮುಂತಾದ ಬೇಡಿಕೆಗಳನ್ನು ಇರಿಸಲಾಗಿದೆ.

ಮತ್ತೆ ನಡೆಯಲಿದೆ ಮುಷ್ಕರ
ಜ 31 ಮತ್ತು ಫೆ. 1ರಂದು ಸಾಂಕೇತಿಕ ಬ್ಯಾಂಕ್ ಮುಷ್ಕರ ನಡೆಯಲಿದ್ದು, ಫೆ. 2ರಂದು ಭಾನುವಾರ ಇರುವುದರಿಂದ ಸತತ ಮೂರು ದಿನ ಬ್ಯಾಂಕ್ ಸೇವೆ ಲಭ್ಯವಾಗುವುದಿಲ್ಲ. ಒಂದು ವೇಳೆ ಈ ಮುಷ್ಕರದ ಬಳಿಕವೂ ಬೇಡಿಕೆ ಈಡೇರದೆ ಇದ್ದರೆ, ಮಾರ್ಚ್ 11ರಿಂದ ಮತ್ತೆ ಮೂರು ದಿನ ಮುಷ್ಕರ ನಡೆಯಲಿದೆ. ಏಪ್ರಿಲ್ 1ರಿಂದ ದೇಶದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ.

ಎಟಿಎಂಗಳು ಖಾಲಿಯಾಗುವ ಸಾಧ್ಯತೆ
ಶುಕ್ರವಾರ ಮತ್ತು ಶನಿವಾರ ಬ್ಯಾಂಕ್ ವಹಿವಾಟು ಇರುವುದಿಲ್ಲ. ಇದರಿಂದ ಗುರುವಾರವೇ ಎಲ್ಲ ವಹಿವಾಟುಗಳನ್ನು ಪೂರೈಸಿಕೊಳ್ಳಬೇಕು. ಹಾಗೆಯೇ ಸತತ ಮೂರು ದಿನ ಬ್ಯಾಂಕ್ ಬಂದ್ ಇರುವುದರಿಂದ ಎಟಿಎಂಗಳಲ್ಲಿ ಹಣ ಖಾಲಿಯಾಗಿ, ಎಲ್ಲ ಕಡೆ 'ಔಟ್ ಆಫ್ ಸರ್ವೀಸ್' ಫಲಕ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ನಗದು ಹಣಕ್ಕಾಗಿ ಪರದಾಟ ಎದುರಾಗಬಹುದು. ಸ್ಥಗಿತಗೊಳ್ಳುವ ಎಟಿಎಂಗಳು ಸಕ್ರಿಯವಾಗಲು ಸೋಮವಾರದವರೆಗೆ ಕಾಯಬೇಕಾಗುತ್ತದೆ.












Click it and Unblock the Notifications