ಕಳೆದ 20 ವರ್ಷಗಳಲ್ಲಿ ಕಾಣಿಸಿಕೊಂಡ ಅತಿದೊಡ್ಡ ಸೈಕ್ಲೋನ್ 'ಅಂಫಾನ್'
ನವದೆಹಲಿ, ಮೇ 20: ಕಳೆದ 20 ವರ್ಷಗಳಲ್ಲಿ ಕಾಣಿಸಿಕೊಂಡ ಚಂಡಮಾರುತಗಳಲ್ಲಿ 'ಅಂಫಾನ್' ತುಂಬಾ ಪ್ರಬಲವಾದದ್ದು ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಸ್ತೆ, ರೈಲು ಹಳಿ, ವಿದ್ಯುತ್ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಸಾಕಷ್ಟು ಕಡೆ ಭೂಕುಸಿತ ಕೂಡ ಉಂಟಾಗಿದೆ. ಕೊಲ್ಕತ್ತ, ಪಶ್ಚಿಮ ಬಂಗಾಳ, ಬಾಂಗ್ಲಾದೇಶವು ಹಿಂದೆಂದೂ ಕಂಡಿತರದ ಚಂಡಮಾರುತವನ್ನು ಈ ಬಾರಿ ಕಾಣಲಿದೆ.
ಚಂಡ ಮಾರುತ ಪ್ರಭಾವ ಮಂಗಳವಾರ ಸಂಜೆಯಿಂದಲೇ ಆರಂಭವಾಗಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಿ ಎತ್ತರದ ಪ್ರದೇಶಕ್ಕೆ ಕರೆದೊಯ್ಯಲಾಗಿದೆ. ಆದರೆ ಕೊರೊನಾ ವೈರಸ್ ಭಯ ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಗಾಳಿಯು ಗಂಟೆಗೆ 185 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ
ಗಾಳಿಯು ಪ್ರತಿ ಗಂಟೆಗೆ 185 ಕಿ.ಮೀ ವೇಗದಲ್ಲಿ ಬಾಂಗ್ಲಾದೇಶದ ಕಡೆಗೆ ಬೀಸುತ್ತಿದೆ. ಈಗಾಗಲೇ ಬಾಂಗ್ಲಾದೇಶ ಹಾಗೂ ಪಶ್ಚಿಮ ಬಂಗಾಳದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮರಗಳು ಧರೆಗುರುಳಿವೆ.

ಕೆಲಸವಿಲ್ಲ, ಊರಿಗೆ ಬಂದರೆ ಮನೆಯೇ ಇಲ್ಲ
ಸಾವಿರಾರು ಮಂದಿ ವಲಸೆ ಕಾರ್ಮಿಕರು ನಾನಾ ಪ್ರದೇಶಗಳಿಂದ ತಮ್ಮ ಊರುಗಳಿಗೆ ಶ್ರಮಿಕ್ ರೈಲಿನ ಮೂಲಕ ತೆರಳುತ್ತಿದ್ದಾರೆ. ಹಾಗೆಯೇ ಪಶ್ಚಿಮ ಬಂಗಾಳಕ್ಕೂ ತೆರಳಿದ್ದಾರೆ. ಆದರೆ ಇದೀಗ ಸೈಕ್ಲೋನ್ ಭಯದಿಂದಾಗಿ ಸಾವಿರಾರು ಮಂದಿಯನ್ನು ಸ್ಥಳಾಂತರಿಸಲಾಗಿದ್ದು, ಅವರು ಮನೆಯನ್ನೂ ಕಳೆದುಕೊಂಡು ಮತ್ತೆ ಬೀದಿಗೆ ಬಿದ್ದಂತಾಗಿದೆ.

ಪಶ್ಚಿಮ ಬಂಗಾಳದಲ್ಲಿ 3 ಲಕ್ಷ ಮಂದಿ ಸ್ಥಳಾಂತರ
ಪಶ್ಚಿಮ ಬಂಗಾಳದಲ್ಲಿ ಮೂರು ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಆದರೆ ಆ ಮೂರು ಲಕ್ಷ ಜನರ ಮಧ್ಯೆ ಸಾಮಾಜಿಕ ಅಂತರವನ್ನು ಕಾಪಾಡುವುದು ಹೇಗೆ ಎಂಬುದು ಪ್ರಶ್ನೆಯಾಗಿದೆ.

ಬಾಂಗ್ಲಾದೇಶದಲ್ಲಿ 14 ಲಕ್ಷ ಮಂದಿ ಸ್ಥಳಾಂತರ
ಬಾಂಗ್ಲಾದೇಶದಲ್ಲಿ ಸಮುದ್ರದ ಆಸುಪಾಸಿನಲ್ಲಿದ್ದ 14 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ. 6 ಲಕ್ಷ ಮನೆಯು ನೀರಿನಲ್ಲಿ ಕೊಚ್ಚಿ ಹೋಗಿವೆ. ಕೊರೊನಾ ವೈರಸ್ ಭಯ ಇರುವುದರಿಂದ ಮಾಸ್ಕ್ ವಿತರಿಸುವಂತೆ ಸರ್ಕಾರಕ್ಕೆ ಕೇಳಿಕೊಳ್ಳಲಾಗಿದೆ. ಇದುವರೆಗೆ ಕೊರೊನಾ ವೈರಸ್ನಿಂದ 314 ಮಂದಿ ಮೃತಪಟ್ಟಿದ್ದಾರೆ. 12,000 ಶೆಲ್ಟರ್ಗಳನ್ನು ನಿರ್ಮಿಸಲಾಗಿದೆ.












Click it and Unblock the Notifications