ಮಲ್ಲಿಕಾರ್ಜುನ್ ಖರ್ಗೆ 'ಕುರಿ' ಬಗ್ಗೆ ಮಾತನಾಡಿದ್ರೂ ಕಾಂಟ್ರವರ್ಸಿ!
ನವದೆಹಲಿ, ಅಕ್ಟೋಬರ್ 13: ಅಖಿಲ ಭಾರತ ಕಾಂಗ್ರೆಸ್ ಕಮಿಟಿ(ಎಐಸಿಸಿ) ಪಕ್ಷದ ಅಧ್ಯಕ್ಷರ ಚುನಾವಣೆಯಲ್ಲಿ ನೀವು ಗೆದ್ದರೆ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಮಲ್ಲಿಕಾರ್ಜುನ್ ಖರ್ಗೆ ನೀಡಿದ ಉತ್ತರ ಸಾಕಷ್ಟು ಚರ್ಚೆಗೆ ಕಾರಣವಾಗಿ ಬಿಟ್ಟಿದೆ.
ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಗಾದೆಯೊಂದನ್ನು ಉಲ್ಲೇಖಿಸಿದ ಅವರು, "ನೀವು ಒಂದು ಹಬ್ಬದಲ್ಲಿ ಬದುಕಿದರೆ, ನೀವು ಇನ್ನೊಂದು ಸಮಾರಂಭದಲ್ಲಿ ನೃತ್ಯ ಮಾಡುತ್ತೀರಿ," ಎಂಬ ಮಾತನ್ನು ಹೇಳಿದರು.
2024ರ ರಾಷ್ಟ್ರೀಯ ಚುನಾವಣೆಗೆ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಬಂದಾಗ ರಾಹುಲ್ ಗಾಂಧಿ ವಿರುದ್ಧ ನೀವು ಸ್ಪರ್ಧಿಸುತ್ತೀರಿಯೇ ಎಂದ ಪ್ರಶ್ನೆ ಅವರು ಉತ್ತರಿಸಿದರು. ಅದನ್ನು ಇಷ್ಟು ಬೇಗ ಹೇಳುವುದಕ್ಕೆ ಸಾಧ್ಯವಿಲ್ಲ ಎಂದರು.

ಬಕ್ರೀದ್ ಮೇ ಬಚೇಂಗೆ ತೋ..: ಖರ್ಗೆ ಮಾತು
ಮೊದಲು ಈ ಚುನಾವಣೆಗಳನ್ನು ಎದುರಿಸೋಣ. ನಮ್ಮ ಕಡೆ ಒಂದು ಮಾತಿದೆ, ಬಕ್ರೀದ್ ಮೇ ಬಚೇಂಗೆ ತೋ ಮೊಹರಂ ಮೇ ನಾಚೇಂಗೆ (ಆಡು ಬಕ್ರೀದ್ನಲ್ಲಿ ಉಳಿದುಕೊಂಡರೆ ಅದು ಮೊಹರಂ ಸಮಯದಲ್ಲಿ ನೃತ್ಯ ಮಾಡುತ್ತದೆ). ಮೊದಲು ಮತದಾನ ಮುಗಿಯಲಿ, ನಾನೇ ಅಧ್ಯಕ್ಷರಾಗಲಿ, ಆಮೇಲೆ ನೋಡ್ತೇವೆ," ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದರು. ಭೋಪಾಲ್ನಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ಚುನಾವಣೆಯ ಪ್ರಚಾರ ನಡೆಸಿದ ವೇಳೆ ಖರ್ಗೆ ಈ ಹೇಳಿಕೆ ನೀಡಿದರು.

ಮಲ್ಲಿಕಾರ್ಜುನ್ ಖರ್ಗೆ ಕೊಟ್ಟ ಸಮರ್ಥನೆ
ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ಪಕ್ಷದ ಉನ್ನತ ಹುದ್ದೆಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ನಿಷ್ಪಕ್ಷಪಾತ ಮತದಾನವನ್ನು ಖಚಿತಪಡಿಸಿಕೊಳ್ಳಲು ಈ ಪ್ರಕ್ರಿಯೆಯಿಂದ ದೂರವಿರಲು ಬಯಸಿದ ಕಾರಣ ಗಾಂಧಿ ಕುಟುಂಬದಿಂದ ಯಾರೂ ಈ ಚುನಾವಣೆಗೆ ಸ್ಪರ್ಧಿಸಲು ಮುಂದೆ ಬಂದಿಲ್ಲ. ಈ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ತಮ್ಮನ್ನು ಕಣಕ್ಕೆ ಇಳಿಸಲು ಬಯಸಿದ್ದಾರೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

ಬಿಜೆಪಿ ಟೀಕೆಗೆ ಗುರಿಯಾದ ಖರ್ಗೆ ಹೇಳಿಕೆ
ಮುಸ್ಲಿಮರ ಹಬ್ಬವನ್ನು ಉಲ್ಲೇಖಿಸಿದ ಹೇಳಿಕೆಯು ಮೊಹರಂ ಆಚರಣೆಯ ತಿಂಗಳಲ್ಲದ ಕಾರಣ ಮುಸ್ಲಿಮರಿಗೆ ಅವಮಾನ ಮಾಡಿದಂತೆ ಎಂದು ಬಿಜೆಪಿಯು ತೀಕ್ಷ್ಣವಾದ ಟೀಕಿಸಿದೆ. ಖರ್ಗೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, "ವಿಶ್ವದಾದ್ಯಂತ ಮುಸ್ಲಿಮರು ಮೊಹರಂ ಆಚರಿಸುವುದಿಲ್ಲ, ಇದು ಆಚರಣೆಯ ತಿಂಗಳಲ್ಲ, ಆದರೆ ದುಃಖದ ತಿಂಗಳು. ಮೊಹರಂನಲ್ಲಿ ನಾಚ್ ಗಾನ ನಡೆಯಲಿದೆ ಎಂದು ಹೇಳುವುದು ಅತ್ಯಂತ ಆಕ್ಷೇಪಾರ್ಹವಾಗಿದೆ," ಎಂದರು.

ಮಲ್ಲಿಕಾರ್ಜುನ ಖರ್ಗೆಯಿಂದ ಸಾಮೂಹಿಕ ನಾಯಕತ್ವ ಮಂತ್ರ
ತಾವು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆಯಿಟ್ಟಿದ್ದು, ಎಲ್ಲರೊಂದಿಗೆ ಸೇರಿಕೊಂಡು ಕೆಲಸ ಮಾಡುವುದರ ಮೂಲಕ ಪಕ್ಷವನ್ನು ಮತ್ತಷ್ಟು ಎತ್ತರಕ್ಕೆ ತಗೆದುಕೊಂಡು ಹೋಗುವುದಾಗಿ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದರು. "ನನಗೆ ಸಮಾಲೋಚನೆ ಮತ್ತು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇದೆ. ಜನರು ನನ್ನನ್ನು ಹಿಂಬಾಲಿಸುವುದರಲ್ಲಿ ನನಗೆ ನಂಬಿಕೆ ಇಲ್ಲ, ಆದರೆ ಅವರು ನನ್ನ ಪಕ್ಕದಲ್ಲಿ ನಡೆಯಬೇಕೆಂದು ನಾನು ಬಯಸುತ್ತೇನೆ. ಒಟ್ಟಾಗಿ ನಾವು ಪಕ್ಷದ ಸಂಘಟನೆಯನ್ನು ಬಲಪಡಿಸಲು ಕೆಲಸ ಮಾಡುತ್ತೇವೆ," ಎಂದು ಎಐಸಿಸಿ ಅಧ್ಯಕ್ಷ ಚುನಾವಣೆಯ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದರು.












Click it and Unblock the Notifications