ರಫೇಲ್ ಟೇಪ್ ಅಸಲಿಯೋ ನಕಲಿಯೋ? ಸವಾಲೇಕೆ ಸ್ವೀಕರಿಸಲಿಲ್ಲ ರಾಹುಲ್?
ನವದೆಹಲಿ, ಜನವರಿ 03 : ರಫೇಲ್ ಡೀಲ್ ಬಗ್ಗೆ ಕೇಂದ್ರದ ಮಾಜಿ ರಕ್ಷಣಾ ಸಚಿವ, ಗೋವಾದ ಹಾಲಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಆಡಿದ್ದಾರೆನ್ನಲಾದ ಆಡಿಯೋ ತುಣುಕನ್ನು ಸಂಸತ್ತಿನಲ್ಲಿ ಬಿಡುಗಡೆ ಮಾಡುವುದಾಗಿ ರಾಹುಲ್ ಗಾಂಧಿ ಅವರು ಬೆದರಿಕೆ ಒಡ್ಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಆ ಆಡಿಯೋದಲ್ಲಿ ರಫೇಲ್ ಡೀಲ್ ಬಗ್ಗೆ ಕೇಂದ್ರಕ್ಕೆ ಮುಜುಗರವಾಗುವಂಥ ಕೆಲ ಸಂಗತಿಗಳನ್ನು ಪರಿಕ್ಕರ್ ಆಡಿದ್ದಾರೆ ಎಂಬುದು ರಾಹುಲ್ ಗಾಂಧಿ ಅವರ ವಾದವಾದರೆ, ಆ ಆಡಿಯೋದ ಸತ್ಯಾಸತ್ಯತೆಯನ್ನು ದಢೀಕರಿಸಲು ರಾಹುಲ್ ಗಾಂಧಿ ಅವರು ಏಕೆ ಹಿಂದೇಟು ಹಾಕಿದರು ಎಂಬುದು ಬಗೆಹರಿಯಲಾಗದ ಪ್ರಶ್ನೆಯಾಗಿದೆ.
ರಫೇಲ್: ಸಂಸತ್ನಲ್ಲಿ ಮೋದಿ ವಿರುದ್ಧ ಬೆಂಕಿ ಉಗುಳಿದ ರಾಹುಲ್
ರಫೇಲ್ ಡೀಲ್ ಬಗ್ಗೆ ನಡೆದ ಚರ್ಚೆಯ ಸಂದರ್ಭದಲ್ಲಿ ಆಡಿಯೋ ಟೇಪ್ ಬಗ್ಗೆ ಪ್ರಸ್ತಾಪಿಸಿದ್ದ ರಾಹುಲ್ ಗಾಂಧಿ ಅವರಿಗೆ, ಸ್ಪೀಕರ್ ಆಗಿರುವ ಸುಮಿತ್ರಾ ಮಹಾಜನ್ ಅವರು, ಆ ಟೇಪ್ ನ ಸತ್ಯಾಸತ್ಯತೆಯನ್ನು ದೃಢೀಕರಿಸುವುದಾದರೆ ಮತ್ತು ಅದರ ಜವಾಬ್ದಾರಿ ಹೊರುವುದಾದರೆ ಟೇಪ್ ಬಿಡುಗಡೆ ಮಾಡಲಾಗಲಿ, ಅದರಲ್ಲಿರುವ ಸಂಗತಿಗಳನ್ನು ಬಹಿರಂಗಪಡಿಸಲಾಗಲಿ ಅಭ್ಯಂತರವಿಲ್ಲ ಎಂಬ ಕಂಡೀಷನ್ ಹಾಕಿದ್ದರು.
ಅಲ್ಲಿಯವರೆಗೆ, ಎಲ್ಲೆಡೆ ವೈರಲ್ ಆಗಿರುವ ಟೇಪ್ ಬಿಡುಗಡೆ ಮಾಡುವುದಾಗಿ ಮತ್ತು ಅದರಲ್ಲಿ ಏನು ಹೇಳಲಾಗಿದೆ ಎಂಬುದರ ಟ್ರಾನ್ಸ್ ಸ್ಕ್ರಿಪ್ಟ್ ಓದುವುದಾಗಿ ರಾಹುಲ್ ಗಾಂಧಿ ಅವರು ಹಠ ಹಿಡಿದು ಕೂತಿದ್ದರು. ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಆ ಟೇಪ್ ಕುಟಿಲತೆಯಿಂದ ಸೃಷ್ಟಿಸಿದ್ದಾಗಿದ್ದು, ಅದರ ಸತ್ಯಾಸತ್ಯತೆಯ ಜವಾಬ್ದಾರಿ ರಾಹುಲ್ ಹೊರಬೇಕು ಎಂದು ಆಗ್ರಹಿಸಿದ್ದರು.
ಸವಾಲನ್ನು ಏಕೆ ಸ್ವೀಕರಿಸಲಿಲ್ಲ ರಾಹುಲ್?
ಆಡಿಯೋ ಟೇಪ್ ನಲ್ಲಿ ಮನೋಹರ್ ಪರಿಕ್ಕರ್ ಅವರು ಮಾತನಾಡಿರುವುದು ಸತ್ಯವೇ ಆಗಿದ್ದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸುಮಿತ್ರಾ ಮಹಾಜನ್ ಅವರ ಸವಾಲನ್ನು ಏಕೆ ಸ್ವೀಕರಿಸಲಿಲ್ಲ? ಟೇಪ್ ನಲ್ಲಿರುವ ಸಂಗತಿಯ ಜವಾಬ್ದಾರಿಯನ್ನು ತಾವೇ ಹೊರುವುದಾಗಿ ರಾಹುಲ್ ಅವರು ಏಕೆ ಒಪ್ಪಿಕೊಳ್ಳಲಿಲ್ಲ? ಈ ಮಾತನ್ನು ಮಹಾಜನ್ ಅವರು ಕೇಳುತ್ತಿದ್ದಂತೆ ರಾಹುಲ್ ಅವರು ಏಕೆ ಚರ್ಚೆ ಮುಂದುವರಿಸದೆ ನಿಲ್ಲಿಸಿದರು? ಇತ್ಯಾದಿ ಪ್ರಶ್ನೆಗಳು ಎದ್ದಿದ್ದು, ರಾಹುಲ್ ಅವರ ಮೇಲೆಯೇ ಅನುಮಾನಗಳು ಏಳುವಂತೆ ಮಾಡಿವೆ.
ಟೇಪ್ ನಕಲಿ ಎಂದ ಗೋವಾ ಮಂತ್ರಿ ರಾಣೆ
ಈ ವಿವಾದದ ಕೇಂದ್ರಬಿಂದುವಾಗಿದ್ದ ಗೋವಾದ ಮಂತ್ರಿ ವಿಶ್ವಜಿತ್ ಪಿ ರಾಣೆ ಅವರು, ಆಡಿಯೋ ಟೇಪ್ ಅನ್ನು ಕಾಂಗ್ರೆಸ್ ಪಕ್ಷವೇ ಸೃಷ್ಟಿಸಿದ್ದು, ಗೋವಾ ಕ್ಯಾಬಿನೆಟ್ ಮತ್ತು ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಡುವೆ ಅನಗತ್ಯವಾಗಿ ಗೊಂದಲ ಮೂಡಿಸುವಂತೆ ಮಾಡಿದೆ ಎಂದು ಸ್ಪಷ್ಟೀಕರಣ ನೀಡಿದ್ದರು. ಯಾವುದೇ ದಾಖಲೆಯಲ್ಲಾಗಲಿ, ಮಾತುಕತೆಯಲ್ಲಾಗಲಿ ಮನೋಹರ್ ಪರಿಕ್ಕರ್ ಅವರು ರಫೇಲ್ ಡೀಲ್ ಬಗ್ಗೆ ಯಾವುದೇ ಸಮಯದಲ್ಲಿ ಪ್ರಸ್ತಾಪವನ್ನೇ ಮಾಡಿಲ್ಲ. ಈ ವಿವಾದಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ತನಿಖೆಗೆ ಆದೇಶಿಸಬೇಕು, ಇದನ್ನು ಸೃಷ್ಟಿಸಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಣೆ ಅವರು ಪರಿಕ್ಕರ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಆಡಿಯೋ ಬಗ್ಗೆ ಮನೋಹರ್ ಪರಿಕ್ಕರ್ ಪ್ರತಿಕ್ರಿಯೆ
ಸತ್ಯಾಸತ್ಯತೆ ಬಗ್ಗೆ ಮಾತಾಡದ ರಾಹುಲ್
ಆಡಿಯೋ ಟೇಪ್ ಬಗ್ಗೆ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಪ್ರಸ್ತಾಪಿಸಿದಾಗ ಸ್ಪೀಕರ್ ಆಗಿರುವ ಸುಮಿತ್ರಾ ಮಹಾಜನ್ ಅವರು ಅವಕಾಶವನ್ನೇ ನೀಡಲಿಲ್ಲ ಎಂದು ಕಾಂಗ್ರೆಸ್ ಮತ್ತು ಅದರ ಬೆಂಬಲಿಗರು ವಾದ ಮಂಡಿಸುತ್ತಿದ್ದಾರೆ. ಆದರೆ, ಇದು ನಿಜವಲ್ಲ ಎಂದು ಬಿಜೆಪಿ ಬೆಂಬಲಿಗರು ಪ್ರತಿವಾದ ಮಂಡಿಸುತ್ತಿದ್ದಾರೆ. ಅಸಲಿಯತ್ತೇನೆಂದರೆ, ಇಂತಹ ತಲೆಬುಡವಿಲ್ಲ ಆರೋಪಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸುಮಿತ್ರಾ ಮಹಾಜನ್ ಅವರು ಹೇಳಿ, ಈ ಟೇಪ್ ನಲ್ಲಿರುವ ಸಂಗತಿಯ ಸತ್ಯಾಸತ್ಯತೆಯ ಬಗ್ಗೆ ಜವಾಬ್ದಾರಿ ಹೊರುವುದಾದರೆ ಟೇಪ್ ಅನ್ನು ಬಹಿರಂಗ ಪಡಿಸಲು ಅಭ್ಯಂತರವಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಟೇಪ್ ನ ದೃಢೀಕರಣದ ಬಗ್ಗೆ ಆಗ್ರಹಿಸುತ್ತಿದ್ದಂತೆ ರಾಹುಲ್ ಗಾಂಧಿ ಅವರು ಚರ್ಚೆಯನ್ನೇ ಮುಕ್ತಾಯಗೊಳಿಸಿ ಕುಳಿತುಕೊಂಡಿದ್ದರು.
ರಫೇಲ್ ಒಪ್ಪಂದ: ರಾಹುಲ್ ಆರೋಪವೇನು? ವಾಸ್ತವ ಸಂಗತಿ ಏನು?
ಹಕ್ಕುಚ್ಯುತಿ ಮಂಡನೆಗೆ ಜೇಟ್ಲಿ ಆಗ್ರಹ
ರಾಹುಲ್ ಅವರು ಟೇಪ್ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ, ತೀವ್ರ ವಾಗ್ದಾಳಿ ನಡೆಸಿದ್ದ ಅರುಣ್ ಜೇಟ್ಲಿ ಅವರು, ರಾಹುಲ್ ಅವರು ಇಡೀ ದೇಶದ ಮುಂದೆ ಸುಳ್ಳು ಹೇಳುತ್ತಿದ್ದಾರೆ. ಅದೊಂದು ಫೇಕ್ ಟೇಪ್ ಎಂಬುದನ್ನು ರಾಹುಲ್ ಅವರು ಒಪ್ಪಿಕೊಳ್ಳಲಿ. ಸಂಸತ್ತಿನಲ್ಲಿ ಮೋದಿ ವಿರುದ್ಧ ಸುಳ್ಳು ಹೇಳಿದ್ದಕ್ಕೆ ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆಯಾಗಲಿ. ಅವರನ್ನು ಸಂಸತ್ತಿನಿಂದಲೇ ಎತ್ತಂಗಡಿ ಮಾಡಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದರು. ಈ ಟೇಪ್ ನಕಲಿ ಅಲ್ಲ ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಾ ಎಂದು ಸುಮಿತ್ರಾ ಮಹಾಜನ್ ಅವರು ರಾಹುಲ್ ಗಾಂಧಿ ಅವರಿಗೆ ಸವಾಲೆಸೆದಾಗ, ಮರುಮಾತಾಡದೆ 'ಥ್ಯಾಂಕ್ಯೂ' ಎಂದು ಹೇಳಿ ರಾಹುಲ್ ಅವರು ತಮ್ಮ ಕುರ್ಚಿಯ ಮೇಲೆ ಕುಳಿತುಕೊಂಡಿದ್ದರು.
ಮೋದಿ ನನ್ನೊಂದಿಗೆ ರಫೇಲ್ ಬಗ್ಗೆ 20 ನಿಮಿಷ ಮಾತನಾಡಲಿ: ರಾಹುಲ್ ಸವಾಲು
ಸೃಷ್ಟಿಸಿರುವವರ ವಿರುದ್ಧ ಕ್ರಮ ಜರುಗಲಿ
ಸಂಸತ್ತಿನಲ್ಲಿ ಭಾರೀ ಬಿರುಗಾಳಿ ಎಬ್ಬಿಸಿರುವ, ರಫೇಲ್ ಡೀಲ್ ಬಗ್ಗೆ ಮತ್ತು ಮೋದಿಯವರ ವಿರುದ್ಧ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಮಾತಾಡಿದ್ದಾರೆ ಎಂಬ ವಿವಾದ ಸೃಷ್ಟಿಸಿರುವ ಆಡಿಯೋ ಟೇಪ್ ನಲ್ಲಿರುವುದು ಅಸಲಿಯೋ ನಕಲಿಯೋ ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲೇಬೇಕು. ಸತ್ಯವಾದರೂ ತನಿಖೆಯಾಗಲಿ, ನಕಲಿಯಾದರೂ ಸೃಷ್ಟಿಸಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಲೋಕಸಭೆ ಚುನಾವಣೆ ಇನ್ನು ಕೆಲವೇ ತಿಂಗಳು ಬಾಕಿಯಿರುವಾಗ, ಆ ಟೇಪ್ ನಲ್ಲಿನ ಸತ್ಯಾಸತ್ಯತೆ ಬಗ್ಗೆ ದೃಢೀಕರಿಸಿಕೊಳ್ಳದೆ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಏಕೆ ಪ್ರಸ್ತಾಪಿಸಿದರೆ, ಏಕೆ ಅದರ ಜವಾಬ್ದಾರಿ ಹೊರದೆ ನುಣುಚಿಕೊಂಡರು ಎಂಬ ಬಗ್ಗೆಯೂ ಚರ್ಚೆ ನಡೆಯಬೇಕಿದೆ.
ರಾಹುಲ್ ವಿಶ್ವಾಸಾರ್ಹತೆಗೆ ಧಕ್ಕೆ?
ಭಾರೀ ವೈರಲ್ ಆಗಿದ್ದ ಆಡಿಯೋ ಟೇಪ್ ನ ಸತ್ಯಾಸತ್ಯತೆ ಬಗ್ಗೆ ಜವಾಬ್ದಾರಿ ಹೊತ್ತುಕೊಳ್ಳದೆ ಹಿಂಜರಿದಿದ್ದರಿಂದ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರ ವಿಶ್ವಾಸಾರ್ಹತೆ ಬಗ್ಗೆ ಅಪನಂಬಿಕೆ ಹುಟ್ಟುವಂತೆ ಮಾಡಿದೆ ಎಂಬುದು ಟ್ವಿಟ್ಟಿಗರ ಅಂಬೋಣ. ಹೀಗೆ ಹೇಳಿ ನೀವು ಇಡೀ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಲು ಯತ್ನಿಸುತ್ತಿದ್ದೀರಿ. ಸತ್ಯಾಂಶವಿರುವ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಕೇಳಿರಿ ಎಂದು ಟ್ವಿಟ್ಟಿಗರು ರಾಹುಲ್ ಗಾಂಧಿ ಅವರಿಗೆ ಕಿವಿಮಾತು ಹೇಳಿದ್ದಾರೆ.